ಭಟ್ಕಳ: ಝೇಂಕಾರ ಮೆಲೋಡಿಸ್ ಆಟ್ರ್ಸ್ ಅಸೋಸಿಯೇಶನ್ (ರಿ.) ಇದರ ಆಶ್ರಯದಲ್ಲಿ ಸಂಗೀತ ಮತ್ತು ನೃತ್ಯವನ್ನೊಳಗೊಂಡ ಝೇಂಕಾರ ಕಲಾ ಸಂಗಮ ಕಾರ್ಯಕ್ರಮ ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸುನಿಲ್ ನಾಯ್ಕ ಯುವ ಪ್ರತಿಭೆಗಳಿಗೆ ಅನೇಕ ವೇದಿಕೆಯನ್ನು ಕಲ್ಪಿಸಿಕೊಟ್ಟು ಕಲೆಯನ್ನು ಮೇಲಕ್ಕೆತ್ತುವ ಝೇಂಕಾರ ಸಂಸ್ಥೆಯ ಕಾರ್ಯ ಶ್ಲಾಘನಾರ್ಹ ಎನ್ನುತ್ತಾ ಶಾಲಾ ಶಿಕ್ಷಣದ ಜೊತೆಗೆ ಲಲಿತ ಕಲೆಗಳನ್ನು ಮೈಗೂಡಿಸಿಕೊಳ್ಳಿ ಎಂದು ಮಕ್ಕಳಿಗೆ ಸಲಹೆ ನೀಡಿದರು.
ಮುಖ್ಯ ಅತಿಥಿ ಪ್ರಾಂಶುಪಾಲ ಎ. ಬಿ. ರಾಮರಥ ಮಾತನಾಡಿ, ಝೇಂಕಾರ ಸಂಸ್ಥೆಯಲ್ಲಿ ದ್ರೋಣಾಚಾರ್ಯರಂತಹ ಶಿಕ್ಷಕರಿದ್ದಾರೆ, ಏಕಲವ್ಯನಂತಹ ಶಿಷ್ಯರು ಸಿಕ್ಕಿದಲ್ಲಿ ಪೂರ್ವ ಪರಂಪರೆಯನ್ನು ಕಾಣಲು ಸಾಧ್ಯ ಎಂದರು. ಭಟ್ಕಳ ಕ.ಸಾ.ಪ. ಅಧ್ಯಕ್ಷ ಶಂಕರ ನಾಯ್ಕ ಮಾತನಾಡುತ್ತಾ ಇಂದಿನ ಪೀಳಿಗೆಗೆ ನೈತಿಕ ಶಿಕ್ಷಣ ದೊರಕಲು ಲಲಿತ ಕಲೆಗಳು ಸಹಕಾರಿಯಾಗಿದೆ ಎಂದರು. ಗಣ್ಯರಾದ ವಿಷ್ಣು ಶ್ಯಾನಭಾಗ ಹಾಗೂ ವೈದ್ಯರಾದ ಆರ್. ವಿ. ಸರಾಫ ಲಲಿತ ಕಲೆಗಳನ್ನು ಪೋಷಿಸುತ್ತಿರುವ ಝೇಂಕಾರ ಸಂಸ್ಥೆಗೆ ಸಹಕರಿಸುವಂತೆ ಕರೆ ನೀಡಿದರು. ಉದ್ಯಮಿ ಡಿ. ಜೆ. ಕಾಮತ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಮುರ್ಡೇಶ್ವರ ರೂರಲ್ ಎಜ್ಯೂಕೇಶನ್ ಟ್ರಸ್ಟ್ನ ಮೇನೆಜಿಂಗ ಟ್ರಸ್ಟಿ ಶರಶ್ಚಂದ್ರ ಎಸ್. ಕಾಮತರವರ ಸಾಧನೆಗಾಗಿ ಝೇಂಕಾರ ಕಲಾಶ್ರೀ 2020 ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಚಿತ್ರಕಲೆಯಲ್ಲಿ ರಾಜ್ಯಕ್ಕೆ ರ್ಯಾಂಕ ಗಳಿಸಿದ ವಿದ್ಯಾರ್ಥಿ ದರ್ಶನ ನಾಯ್ಕ ಇವನಿಗೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ನೃತ್ಯ ವಿದೂಷಿ ನಯನಾ ಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿ ವರದಿ ವಾಚಿಸಿದರು. ಸಂಸ್ಥೆಯ ಅಧ್ಯಕ್ಷರಾದ ಪ್ರಸನ್ನ ಪ್ರಭು ಸಭಾಧ್ಯಕ್ಷೀಯ ಭಾಷಣ ಮಾಡಿದರು. ಪ್ರಾರಂಭದಲ್ಲಿ ಕಲಾ ಶಿಕ್ಷಕ ಸಂಜಯ ಗುಡಿಗಾರ ಸ್ವಾಗತಿಸಿ ಕೊನೆಯಲ್ಲಿ ವಂದನಾರ್ಪಣೆ ಗೈದರು. ಸಭೆಯ ನಂತರ ಭರತ ನಾಟ್ಯ, ಕರ್ನಾಟಕ ಸಂಗೀತ ಹಾಗೂ ಚಿಣ್ಣರ ರಸಮಂಜರಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಝೇಂಕಾರ ಸಂಸ್ಥೆಯ ನಿರ್ದೆಶಕ ಮಂಡಳಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.