ಭಟ್ಕಳ: ಅಂತರಾಷ್ಟ್ರೀಯ ಏರಿಯಲ್ ಫೌಂಡೇಶನ್ ವತಿಯಿಂದ ಪರಿಸರ ರಕ್ಷಣೆ , ನೀರು, ಹಸಿವು, ವಲಸಿಗರ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೂವರು ಯುವಕರು ಕನ್ಯಾಕುಮಾರಿಯಿಂದ ಲಡಾಕ್ನತ್ತ ಕಾಲ್ನಡಿಗೆ ಜಾಥಾ ಆರಂಭಿಸಿದ್ದು, ಸೋಮವಾರ ಅವರನ್ನು ಭಟ್ಕಳದಲ್ಲಿ ಹೂಮಾಲೆ ಹಾಕಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಏರಯಲ್ ಪೌಂಡೇಶನ್ ಭಾರತದ ರಾಯಭಾರಿ ಅಹ್ಮದ್ ಕಾಶೀಮ್, ಕಳೆದ ಮಾ.1ರಿಂದ ಕಾಲ್ನಡಿಗೆ ಆರಂಭಿಸಿದ್ದು. ಈಗಾಗಲೇ 900ಕಿಮೀ. ಕ್ರಮಿಸಿದ್ದೇವೆ. ನನ್ನೊಂದಿಗೆ ಶೇರ್ಶಬಾ ಹಾಗೂ ದಿನೇಶ ಹೆಜ್ಜೆ ಹಾಕಿದ್ದು, ಆಗಷ್ಟ ಕೊನೆಯಲ್ಲಿ ಜೈಪುರ, ಮನಾಲಿ ಮೂಲಕ ಲಡಾಕ್ನ್ನು ತಲುಪಲಿದ್ದೇವೆ. ಕಾಲ್ನಡಿಗೆ ಜಾಥಾ ಮುಗಿಯುವಷ್ಟರಲ್ಲಿ ಸರಿಸುಮಾರು 13 ರಾಜ್ಯಗಳನ್ನು ಸುತ್ತಲಿದ್ದೇವೆ. ಪ್ರತಿ ನಿತ್ಯವೂ ದಿನವೊಂದಕ್ಕೆ 30-35ಕಿಮೀ. ನಡೆಯುತ್ತಿದ್ದು, ಇದು ನಮಗೆ ಅಭ್ಯಾಸವಾಗಿ ಹೋಗಿದೆ.
ನಮ್ಮೊಂದಿಗೆ ಕಣ್ಣೂರಿನಲ್ಲಿ ಸುರೇಶ ಎಂಬಾತ ಸೇರಿಕೊಂಡಿದ್ದು, ಇವರು ಜೀವನಾನುಭವಕ್ಕಾಗಿ ಕನ್ಯಾಕುಮಾರಿಯಿಂದ ಕಾಲ್ನಡಿಗೆಯಲ್ಲಿ ಕಾಶ್ಮೀರವನ್ನು ತಲುಪಲಿದ್ದಾರೆ. ಸದ್ಯ ಅವರು, ನಮ್ಮೊಂದಿಗೇ ಇದ್ದು, ಮುಂದೆ ಅವರ ಪಥ ಬದಲಾಗಲಿದೆ ಎಂದು ವಿವರಿಸಿದರು.
ನೌಫೀಲ್ ದಾಮುದಿ, ಇದ್ರೀಸ್ ಮೊತೇಶಮ್, ರೆಮೀಸ್ ಕೋಲಾ ಮೊದಲಾದವರು ಉಪಸ್ಥಿತರಿದ್ದರು.