ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಖ್ಯಾತ ಸಾಮಾಜಿಕ ಕಾರ್ಯಕರ್ತ ಮುಸ್ಲಿಮ್ ಮುಖಂಡ, ವಿವಿಧ ಸಾಮಾಜಿಕ ಶೈಕ್ಷಣಿಕ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮುಮ್ತಾಝ್ ಹೊಟೇಲ್ ಮಾಲಿಕ ಅಬ್ದುಲ್ ರಹ್ಮಾನ್ ಹಸನ್ ಬ್ಯಾರಿ(67)ರವಿವಾರ ನಿಧರಾದರು.
ಇವರು ಉತ್ತರಕನ್ನಡ ಮುಸ್ಲಿಮ್ ಯುನೈಟೆಡ್ ಫೋರಂ ಸ್ಥಾಪಕ ಸದಸ್ಯರಲ್ಲೋರ್ವರಾಗಿದ್ದು ಇವರ ಅಧ್ಯಕ್ಷತೆಯಲ್ಲಿ ಮಿಲ್ಲತ್ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವಾರು ಸಂಘಸಂಸ್ಥೆಗಳನ್ನು ಕಟ್ಟಿ ಬೆಳಿಸಿದ್ದರು. ಇವರ ನಿಧನದಿಂದಾಗಿ ಯಲ್ಲಾಪುರ ಸೇರಿದಂತೆ ಉ.ಕ ಜಿಲ್ಲೆ ಓರ್ವ ಮುಖಂಡನನ್ನು ಕಳೆದುಕೊಂಡಂತಾಗಿದೆ
ಆರೋಗ್ಯವಂತರಾಗಿದ್ದ ಇವರಿಗೆ ಇಂದು ಬೆಳಿಗ್ಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕ್ಷಣಾರ್ಧದಲ್ಲೆ ಇವರು ವಿಧಿವಶರಾದರು ಎಂದು ಹೇಳಲಾಗುತ್ತಿದೆ. ರಾತ್ರಿ ಇಶಾ ನಮಾಝ್ ನಂತರ ಅವರ ಅಂತ್ಯಸಂಸ್ಕಾರವನ್ನು ಮಾಡಲಾಯಿತು. ಸಾವಿರಾರು ಮಂದಿ ಇವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಇವರ ನಿಧನಕ್ಕೆ ಉತ್ತರಕನ್ನಡ ಮುಸ್ಲಿಮ್ ಯುನೈಟೆಡ್ ಫೋರಂ ಅಧ್ಯಕ್ಷ ಇಮ್ತಿಯಾಝ್ ಶೇಖ್, ಪ್ರ.ಕಾ. ಮೊಹಸಿನ್ ಖಾಝಿ, ಭಟ್ಕಳದ ತಂಝೀಮ್ ಅಧ್ಯಕ್ಷ ಎಸ್.ಎಂ. ಪರ್ವಾಝ್, ರಾಬಿತಾ ಮಿಲ್ಲತ್ ಅಧ್ಯಕ್ಷ ನ್ಯಾಯಾವಾದಿ ಎ.ಪಿ ಮುಜಾವರ್, ಪ್ರ.ಕಾ. ತಲ್ಹಾ ಸಿದ್ದಿಬಾಪಾ, ಭಟ್ಕಳದ ಡಾ.ಮುಹಮ್ಮದ್ ಹನಿಫ್ ಶಬಾಬ್, ಸೈಯ್ಯದ್ ಮುಹಿದ್ದೀನ್ ಬರ್ಮಾವರ್, ಯಾಹ್ಯಾ ದಾಮೂದಿ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.