ಹೊಸದಿಲ್ಲಿ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ನಾಯಕರಿಗೆ 1800 ಕೋಟಿ ರೂ.ಗಳನ್ನು ಸಂದಾಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ‘1800 ಕೋಟಿ ರೂ. ಡೈರಿ’ಯನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದೆ.
ದೇಶವು ಚುನಾವಣೆಯ ಹೊಸ್ತಿಲಲ್ಲಿರುವಾಗ ಈ ಡೈರಿ ಸ್ಫೋಟವು ರಾಜಕೀಯ ವಲಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ. ಎಲ್.ಕೆ. ಅಡ್ವಾಣಿ, ಎಂ.ಎಂ. ಜೋಷಿ ತಲಾ 50 ಕೋಟಿ ರೂ, ನಿತಿನ್ ಗಡ್ಕರಿ ಮಗಳ ಮದುವೆಗೆ 10 ಕೋಟಿ ರೂ. ಬಿಎಸ್ ವೈ ಕೇಸುಗಳ ವಕಾಲತ್ತಿಗೆ 50 ಕೋಟಿ ರೂ.ಗಳನ್ನು ನೀಡಲಾಗಿದೆ. ಕೆಲವು ನ್ಯಾಯಾಧೀಶರು ಹಾಗು ವಕೀಲರಿಗೂ ಹಣ ಸಂದಾಯವಾಗಿದೆ ಎನ್ನುವುದೂ ಡೈರಿಯಲ್ಲಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಡೈರಿಯಲ್ಲಿ ಸ್ವತಃ ಯಡಿಯೂರಪ್ಪರ ಸಹಿ ಇದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲ ಆರೋಪಿಸಿದ್ದಾರೆ.
2017ರಿಂದಲೂ ಈ ಡೈರಿ ಆದಾಯ ತೆರಿಗೆ ಇಲಾಖೆ ಬಳಿಯಿದೆ. ಆದರೆ ಬಿಜೆಪಿ ಮತ್ತು ಮೋದಿಜಿ ಈ ಬಗ್ಗೆ ಯಾಕೆ ತನಿಖೆ ನಡೆಸಲಿಲ್ಲ ಎಂದವರು ಪ್ರಶ್ನಿಸಿದರು.