ಹೊಸದಿಲ್ಲಿ: ವಾಜಪೇಯಿ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದ ಯಶವಂತ್ ಸಿನ್ಹಾ ಶನಿವಾರ ಕೋಲ್ಕತಾದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
83 ವರ್ಷದ ಸಿನ್ಹಾ 2018ರಲ್ಲಿ ಬಿಜೆಪಿಯನ್ನು ತೊರೆದಿದ್ದರು. ದೇಶದಲ್ಲಿ ಈಗ ಹಿಂದೆಂದೂ ಕಂಡಿರದ ಪರಿಸ್ಥಿತಿಯಿದೆ. ನ್ಯಾಯಾಂಗ ವ್ಯವಸ್ಥೆ ಸಹಿತ ದೇಶದ ಪ್ರಜಾತಂತ್ರ ಸಂಸ್ಥೆಗಳು ಶಕ್ತಿ ಕಳೆದುಕೊಂಡಿವೆ ಎಂದು ಟಿಎಂಸಿ ಸೇರಿದ ಬಳಿಕ ಸಿನ್ಹಾ ಹೇಳಿದ್ದಾರೆ. ಶನಿವಾರ ಬೆಳಗ್ಗೆ ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ನಿವಾಸಕ್ಕೆ ತೆರಳಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಕೋಲ್ಕತಾದ ತೃಣಮೂಲ ಭವನದಲ್ಲಿ ಹಿರಿಯ ಮುಖಂಡರಾದ ಡೆರೆಕ್ ಓ'ಬ್ರಿಯಾನ್ , ಸುದೀಪ್ ಬಂಡೋಪಾಧ್ಯಾಯ ಮತ್ತು ಸುಬ್ರತಾ ಮುಖರ್ಜಿ ಉಪಸ್ಥಿತಿಯಲ್ಲಿ ಅವರು ಟಿಎಂಸಿಗೆ ಸೇರ್ಪಡೆಗೊಂಡರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿನ್ಹಾ, ಕೇಂದ್ರ ಸರಕಾರದ ಅಕ್ರಮಗಳನ್ನು ತಡೆಯುವವರು ಯಾರೂ ಇಲ್ಲ ಎಂಬಂತಾಗಿದೆ. ವಾಜಪೇಯಿಯವರ ಸಂದರ್ಭದಲ್ಲಿ ಬಿಜೆಪಿಯಲ್ಲಿ ಒಮ್ಮತದ ಅಭಿಪ್ರಾಯಕ್ಕೆ ಬೆಲೆಯಿತ್ತು. ಆದರೆ ಈಗಿನ ಸರಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ಅಕಾಲಿದಳ, ಬಿಜೆಡಿ ಇತ್ಯಾದಿ ಪಕಗಳು ಬಿಜೆಪಿಯ ಮೈತ್ರಿ ಕಡಿದುಕೊಂಡಿವೆ ಎಂದ ಅವರು, ಈಗ ಚುನಾವಣಾ ಆಯೋಗವೂ ತಟಸ್ಥ ಸಂಸ್ಥೆಯಾಗಿ ಉಳಿದಿಲ್ಲ ಎಂದರು.
ಚಂದ್ರಶೇಖರ್ ಪ್ರಧಾನಿಯಾಗಿದ್ದ ಸಂದರ್ಭ 1990ರ ನವೆಂಬರ್ನಿಂದ 1991ರ ಜೂನ್ವರೆಗೆ ವಿತ್ತಸಚಿವರಾಗಿ ಕಾರ್ಯನಿರ್ವಹಿಸಿದ್ದ ಯಶವಂತ್ ಸಿನ್ಹಾ, ವಾಜಪೇಯಿ ಸರಕಾರವಿದ್ದಾಗ 1998ರ ಡಿಸೆಂಬರ್ನಿಂದ 2002ರ ಜುಲೈವರೆಗೆ ಎರಡನೇ ಬಾರಿ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಜುಲೈ 2002ರಿಂದ ಮೇ 2004ರವರೆಗೆ ವಿದೇಶ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಬಿಜೆಪಿಯ ಪ್ರಭಾವಿ ಮುಖಂಡರೆನಿಸಿಕೊಂಡಿದ್ದ ಸಿನ್ಹಾ, ಬಿಜೆಪಿಯಲ್ಲಿ ಹೊಸ ಪೀಳಿಗೆಯ ಮುಖಂಡರು ಮುಂಚೂಣಿಗೆ ಬಂದಾಗ ಮೂಲೆಗುಂಪಾಗಿದ್ದರು. 2018ರಲ್ಲಿ ಪಕ್ಷ ತ್ಯಜಿಸಿದ್ದರು.
ಅವರ ಪುತ್ರ ಜಯಂತ್ ಸಿನ್ಹಾ ಬಿಜೆಪಿ ಸಂಸದರಾಗಿದ್ದು ಮೋದಿ ಸರಕಾರದ ಮೊದಲ ಅವಧಿಯಲ್ಲಿ ಸಚಿವರಾಗಿದ್ದರು. ಆದರೆ ದ್ವಿತೀಯ ಅವಧಿಯಲ್ಲಿ ಜಯಂತ್ ಸಿನ್ಹಾಗೆ ಸಚಿವ ಹುದ್ದೆ ದೊರಕಿಲ್ಲ.