ಯಲ್ಲಾಪುರ: ತಾಲ್ಲೂಕಿನ ಉಮ್ಮಚಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೇಮನೆ ಎಂಬಲ್ಲಿ ಮಂಗಳವಾರ ವಿದ್ಯುತ್ ಸರ್ವಿಸ್ ಲೈನ್ ಸರಿಪಡಿಸಲು ಹೋಗಿದ್ದ ವ್ಯಕ್ತಿಯೊಬ್ಬರು ವಿದ್ಯುತ್ ಆಘಾತಕ್ಕೆ ಬಲಿಯಾಗಿದ್ದಾರೆ.
ಪಟ್ಟಣ ವ್ಯಾಪ್ತಿಯ ಸಬಗೇರಿಯ ಆದಂಸಾಬ್ ಇ ಶೇಖ್ (75) ಮೃತಪಟ್ಟವರು. ಆದಂ ಅವರು ಉಮ್ಮಚಗಿಯ ಹುಣಸೇಮನೆಯಲ್ಲಿ ಅತಿಕ್ರಮಣ ಜಮೀನಿನಲ್ಲಿರುವ ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಸರಿಪಡಿಸಲು ಸಮೀಪದ ವಿದ್ಯುತ್ ಕಂಬವನ್ನು ಏರಿದ್ದರು. ಸರ್ವಿಸ್ ಲೈನ್ ಸರಿಪಡಿಸುತ್ತಿದ್ದಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಗಡಿಭಾಗ ತಾಟವಾಳ ಬಳಿ 11 ಕೆ.ವಿ. ವಿದ್ಯುತ್ ತಂತಿಯ ಕಂಬ ಮುರಿದು ರಸ್ತೆಯ ಮೇಲೆ ಬಿದ್ದಿದೆ. ಇದರಿಂದ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಯಲ್ಲಾಪುರ- ಶಿರಸಿ ರಸ್ತೆಯಲ್ಲಿ ಬೇಡ್ತಿ ಬಳಿ ರಾಜ್ಯ ಹೆದ್ದಾರಿಯ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ ಸ್ವಲ್ಪ ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಯಲ್ಲಾಪುರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.