ಶಿವಮೊಗ್ಗ : ಮಹಿಳಾ ಕೇಂದ್ರ ಕಾರಾಗೃಹ, ಶಿವಮೊಗ್ಗ ಇಲ್ಲಿ ಸೆ.17 ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ ಇವರ ವತಿಯಿಂದ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ” ನಡೆಸಲಾಯಿತು.
ಈ ವೇಳೆ ಏರ್ಪಡಿಸಲಾಗಿದ್ದ ಬಂಧಿಗಳು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನವನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧೀಕಾರ ಅಧ್ಯಕ್ಷರಾದ ಮುಸ್ತಫಾ ಹುಸೇನ್ ಉದ್ಘಾಟಿಸಿ, ಕಾರಾಗೃಹದ ಬಂಧಿಗಳ ಮಾನಸಿಕ ಆರೋಗ್ಯ ನಿರ್ವಹಣೆ ಹಾಗೂ ಪ್ರಕರಣಗಳ ತ್ವರಿತ ಇತ್ಯರ್ಥ ಕುರಿತಂತೆ ಮಾತನಾಡಿದರು ಹಾಗೂ ಇಗ್ನೋ ದೂರಶಿಕ್ಷಣ ವಿಭಾಗದಲ್ಲಿ 23 ವಿವಿಧ ಸರ್ಟಿಫಿಕೇಟ್ ಕೋರ್ಸ್ಗಳನ್ನು ಪೂರೈಸಿರುವ ಮಹಿಳಾ ಬಂಧಿಗಳಿಗೆ ಪ್ರಮಾಣ ಪತ್ರ ವಿತರಿಸಿ, ಅಭಿನಂದಿಸಿದರು.
ಕಾರಾಗೃಹದಲ್ಲಿ ಸುಮಾರು 60 ಜನ ಬಂಧಿ ನಿವಾಸಿಗಳಿಗೆ ಬ್ಯೂಟಿಷಿಯನ್ ಹಾಗೂ ಜಾಮ್, ಜೆಲ್ಲಿ ಕೆಚಪ್ ತಯಾರಿಕೆಯ 04 ತಿಂಗಳ ತರಬೇತಿಯನ್ನು ಆಯೋಜಿಸಿ ಬಂಧಿಗಳ ಬಿಡುಗಡೆಯ ನಂತರದ ಗೌರವಯುತ ಜೀವನಕ್ಕೆ ಅವಕಾಶ ನೀಡುತ್ತಿರುವ ಬಗ್ಗೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಸರಸ್ವತಿ .ಕೆ.ಎನ್ ಶ್ಲಾಘನೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೈದ್ಯರು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಡಾ|| ಪ್ರೀತಿ ವಿ ಶಾನ್ಬೋಗ್, ಬಂಧಿಗಳಿಗೆ ಭಾವನಾತ್ಮಕ ಒತ್ತಡ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯ ಕುರಿತು ಮಾತನಾಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಕಟೀಲ್ದು ಅಶೋಕ್ ಪೈ ಮೆಮೋರಿಯಲ್ ಕಾಲೇಜಿನ ಡಾ|| ಸಂದ್ಯಾ ಕಾವೇರಿ ಕೆ, ಇವರು ಬಂಧಿಗಳೊಂದಿಗೆ ಮಾನಸಿಕ ಆರೋಗ್ಯ ನಿರ್ವಹಣೆ ಬಗ್ಗೆ ಸುದೀರ್ಘ ಆಪ್ತಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಎಂ.ಜಿ.ಆರ್.ಡಿ.ಎಸ್ ಟ್ರಸ್ಟ್ ವತಿಯಿಂದ ಕಾರಾಗೃಹದ ಬಂಧಿಗಳಿಗೆ ಆರೋಗ್ಯ ಕಿಟ್ ವಿತರಣೆ ಮಾಡಲಾಯಿತು. ಹಾಗೂ ಕಟೀಲು ಅಶೋಕ್ ಪೈ ಮೆಮೋರಿಯಲ್ ಕಾಲೇಜಿನ ಸುಮಾರು 20 ಜನ ಸ್ನಾತಕೋತ್ತರ ವಿದ್ಯಾರ್ಥಿನಿಯರು ಮಾನಸಿಕ ಆರೋಗ್ಯ ಕುರಿತ ಕಿರು ನಾಟಕ ಪ್ರದರ್ಶನ ನಡೆಸಿಕೊಟ್ಟರು.
ಮಹಿಳಾ ಕೇಂದ್ರ ಕಾರಾಗೃಹ ಅಧೀಕ್ಷಕರು ಶ್ರೀಮತಿ ಅನಿತಾ ಎಸ್ ಹಿರೇಮನಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಧಾನ ಮತ್ತು ಜೆ.ಎಂ.ಎಫ್.ಸಿ ಸಿವಿಲ್ ನ್ಯಾಯಾಧೀಶ ಸತೀಶ್, ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಮಹೇಶಕುಮಾರ್ ಜಿಗಣಿ, ಎನ್. ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ದೇವೇಂದ್ರಪ್ಪ, ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ನ ನಿರ್ದೇಶಕ ಕೆ.ಸಿ ಬಸವರಾಜ್, ಸಿಸ್ಟರ್ ಮೇರಿ ಇವ್ಲಿನ್, ಡಾ|| ಅರ್ಚನಾ ಭಟ್ ಕೆ, ವಕೀಳೆ ಕವಿತಾ ಪಿ.ಸಿ, ಪಾಲ್ಗೊಂಡಿದ್ದರು. ಬಂಧಿ ನಿವಾಸಿ ನಾಗರತ್ನ ಪ್ರಾರ್ಥಿಸಿ. ಸಂಸ್ಥೆಯ ಶಿಕ್ಷಕಿ ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು.