ಧಾರವಾಡ : ವಿಕಲಚೇತನರಿಗೆ ಅನುಕಂಪದ ಕಾರಣದಿಂದ ಅವಕಾಶ ವಂಚಿತರಾಗಬಾರದು, ಇಂತಹ ಮಕ್ಕಳಿಗೆ ಅಸಡ್ಯೆ ತೋರದೆ ಕಾಳಜಿ ಪೂರ್ವಕವಾಗಿ ಸಂರಕ್ಷಣೆ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಷ್ಪಲತ ಸಿ.ಎಮ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಅಂಗವಿಕಲರ, ಹಿರಿಯ ನಾಗರೀಕರ ಸಬಲಿಕರಣ ಇಲಾಖೆ, ಆರೂಡ ಸಂಸ್ಥೆ ಧಾರವಾಡ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಸಿವಿಲ್ ನ್ಯಾಯಾಲಯದ ಆವರಣದ ಎಡಿಆರ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನ ಮಕ್ಕಳ ರಕ್ಷಣೆ ಮತ್ತು ಪೋಷಣೆಯಲ್ಲಿ ಹಲವಾರು ಸಂಘ ಸಂಸ್ಥೆಗಳ ಮೂಲಕ ನಿರ್ವಹಣೆ ಮಾಡುತ್ತಿರುವದು ಶ್ಲಾಘನೀಯ ಜೊತೆಗೆ ಎಲ್ಲರು ಕೋವಿಡ್ ಲಸಿಕೆ ಪಡೆಯುವುದು ಅಗತ್ಯ ಎಂದರು.
ಆರೂಡ ಸಂಸ್ಥೆ ಹಾಗೂ ಅಕ್ಷರ ಕಿಡ್ಸ್ ಹೋಮ್ ಮುಖ್ಯಸ್ಥರಾದ ಮಾಧವಿ ನಾಗರಾಜ ಹೂಗಾರ, ಧಾರವಾಡ ಬಾರ ಅಸೋಸಿಯೇಷನ್ ಅದ್ಯಕ್ಷರಾದ ಎಸ್ ವಿ ಘೋಡಸೆ ಅವರು ವಿಕಲಚೇತನರ ಮತ್ತು ವಿಶೇಷ ಮಕ್ಕಳ ಪಾಲನೆ ಪೋಷಣೆ ಕುರಿತು ಮಾತನಾಡಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ಡಿ.ಎನ್ ಮೂಲಿಮನಿ ಮಾತನಾಡಿ, ಮಕ್ಕಳಲ್ಲಿ ವಿಕಲಚೇತನತೆ ಲಕ್ಷಣಗಳನ್ನು ಪ್ರಾಥಮಿಕ ಹಂತಗಳಲ್ಲಿ ಗುರುತಿಸಿ ಶೀಘ್ರ ಗುಣ ಮುಖರನ್ನಾಗಿ ಮಾಡುವಲ್ಲಿ ಪಾಲಕರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ವಿಕಲಚೇತನರ ಕಲ್ಯಾಣ ಇಲಾಖೆ ಜಿಲ್ಲಾ ಸಂಯೋಜಕ ಆಸೀಪ್ ಆಡಿನ್, ಗೀತಾ ಮಗರ, ಮಹೇಶ ಹೂಗಾರ, ಹೊನ್ನಮ್ಮ ಶಿಕ್ಷಣ ಸಂಸ್ಥೆ ಕವಿತಾ, ಬಸವರಾಜ ಸಂಗಾನಟ್ಟಿ, ಹನಮಂತ ಬಾರಕೇರ, ಶಿಕ್ಷಕರು ಮಕ್ಕಳು, ರುಡಾಲ್ಫ್ ಸ್ಟಾಯಿನರ ಶಾಲೆ ಮಕ್ಕಳು ಶಿಕ್ಷಕರು, ನ್ಯಾಯಾಲಯದ ವಿಕಲಚೇತನ ಸಿಬ್ಬಂದಿಗಳು ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.
ಡಾ. ರುಡಾಲ್ಪ ಸ್ಟಾಯಿನರ ಬುದ್ದಿಮಾಂದ್ಯ ಮಕ್ಕಳ ಶಾಲೆ ಮಕ್ಕಳು ಪ್ರಾರ್ಥಿಸಿದರು. ಸ್ಟಾಯಿನರ ಶಾಲೆ ಶಿಕ್ಷಕರಾದ ಗೀತಾ ಕೋಡೆ ವಂದಿಸಿದರು. ವಿಕಲಚೇತನರ ಪುನರ್ವಸತಿ ಕೇಂದ್ರ ಮುಖ್ಯಸ್ಥರಾದ ನಾಗರಾಜ ಹೂಗಾರ ಸ್ವಾಗತಿಸಿ, ನಿರೂಪಿಸಿದರು.