ಭಟ್ಕಳ: ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ಕೊರೋನ ಮಹಾಮಾರಿ ಮಂಗಳವಾರ (ಬೆಳಿಗ್ಗೆ ೮ಗಂಟೆಗೆ ಇದ್ದಂತೆ) ಮತ್ತೆ ತನ್ನ ಅಸಲಿಯತ್ತನ್ನು ತೋರ್ಪಡಿಸಿದ್ದು ದುಬೈಯಿಂದ ಮಾ.20ರಂದು ಗೋವಾದ ದಾಬೋಲಿಯಮ್ ವಿಮಾನ ನಿಲ್ದಾಣದಿಂದ ಭಟ್ಕಳಕ್ಕೆ ಬಂದಿದ್ದ ೨೬ ವರ್ಷದ ಯುವಕನಿಗೆ (P98) ಸೋಂಕು ದೃಢಪಡಿಸುವುದುರ ಮೂಲಕ ತಾಲೂಕಿನಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದ್ದು ಈ ಮೂಲಕ ಭಟ್ಕಳದಲ್ಲಿ ಒಟ್ಟು ೯ ಹಾಗೂ ರಾಜ್ಯದಲ್ಲಿ ಒಟ್ಟು 98 ಕೋವಿಡ್-19 ಸೋಂಕು ಪತ್ತೆಯಾದಂತಾಗಿದೆ.
ಈ ಮೊದಲು ದೃಢಪಟ್ಟಿದ್ದ ಭಟ್ಕಳ ಮೂಲದ 22 ವರ್ಷದ ಸೋಂಕಿತ ಯುವಕನ (ಸೋಂಕಿತ ಸಂಖ್ಯೆ: P62) ಸಹೋದರನಾಗಿರುವ ಈತ(P98), ಜತೆಯಾಗಿ ಇಬ್ಬರೂ ಗೋವಾದ ದಾಬೋಲಿಯಮ್ ವಿಮಾನ ನಿಲ್ದಾಣದಿಂದ ಕಾರವಾರದ ಮೂಲಕ ಭಟ್ಕಳಕ್ಕೆ ಬಂದಿದ್ದರು.
26 ವರ್ಷ ವಯಸ್ಸಿನ ಈತ(P98), ದುಬೈನಿಂದ ಮಾ.20ರಂದು ಸೋಂಕಿತ ಸಹೋದರನೊಂದಿಗೆ (ಸೋಂಕಿತ ಸಂಖ್ಯೆ: 62) ಗೋವಾ ದಾಬೋಲಿಯಮ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಅಲ್ಲಿಂದ ಸಹೋದರನ ಜೊತೆಯಲ್ಲಿ ಹಾಗೂ ಓರ್ವ ಮಹಿಳೆ ಸೇರಿದಂತೆ ಇನ್ನಿತರ ಮೂವರು ಕೂಡ ಈ ವೇಳೆ ಈ ಇಬ್ಬರೂ ಸೋಂಕಿತರ ಜೊತೆ ಇದ್ದರು. ಈ ಐವರೂ ಕಾರವಾರದ ಹೋಟೆಲ್ ನಲ್ಲಿ ಉಪಹಾರ ಸೇವಿಸಿ, ಕಾರಿನಲ್ಲಿ ಭಟ್ಕಳಕ್ಕೆ ತೆರಳಿದ್ದರು. ಇಂದು ದೃಢಪಟ್ಟ ಯುವಕನು ಸಹೋದರನೊಂದಿಗೆ ಸಂಪರ್ಕ ಹೊಂದಿದ್ದನೆಂದು ಮನೆಯಲ್ಲಿ ಪ್ರತ್ಯೇಕಿಸಿಡಲಾಗಿತ್ತು. ಅನುಮಾನದ ಮೇಲೆ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಮಂಗಳವಾರ ವರದಿ ಬಂದಿದ್ದು ಆ ಯುಕವನಲ್ಲಿ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಆ ಮೂಲಕ ಭಟ್ಕಳ ಮೂಲದ ಒಟ್ಟು ಒಂಬತ್ತು (8+1 ಮಂಗಳೂರಿನಲ್ಲಿರುವಾತ) ಮಂದಿಯಲ್ಲಿ ಕೋವಿಡ್- 19 ಸೋಂಕು ಇರುವುದು ದೃಢಪಟ್ಟಿದೆ.