ಶೇ.೧೦ರಷ್ಟು ಮೀಸಲಾತಿ ಪಡೆದುಕೊಳ್ಳುವವರಿಗೆ ಕೆಲಸ ಸಿಗಲಿದೆಯೇ?

Source: sonews | By Staff Correspondent | Published on 13th January 2019, 3:36 PM | State News | National News | Special Report | Don't Miss |

ಮೇಲ್ಜಾತಿ ಬಡವರಿಗೆ ನೀಡಲಾಗಿರುವ ಶೇ.೧೦ರಷ್ಟು ಮೀಸಲಾತಿಯು ನೈಜ ಉದ್ಯೋಗಾವಕಾಶವಾಗಿ ಪರಿವರ್ತನೆಗೊಳ್ಳುವ ಖಾತರಿಯೇನಿಲ್ಲ.

ಕೇಂದ್ರ ಸರ್ಕಾರವು ಇತ್ತೀಚೆಗೆ ಘೋಷಿಸಿರುವ ಶೇ.೧೦ ಮೀಸಲಾತಿಯೂ ಒಳಗೊಂಡಂತೆ ಕೈಗೊಂಡಿರುವ ಇತರ ಉದ್ಯೋಗ ರಕ್ಷಣಾ ಕ್ರಮಗಳು ೧೯ನೇ ಶತಮಾನದ ಬಂಗಾಳಿ ದ್ವಿಪದಿಯೊಂದರಲ್ಲಿರುವ ಕಾಲ್ನಡಿಗೆ ಸಾಧನವೊಂದನ್ನು ನೆನಪಿಸುತ್ತದೆ. ಸಾಧನವು ತನ್ನನ್ನು ತೊಟ್ಟಿರುವ ಹೆಗಲಿಗೆ ಬೆಸೆದುಕೊಂಡು ಮುಂದೆ ಒಂದು ಕ್ಯಾರಟ್ಟನ್ನು ಇಳಿಬಿಟ್ಟಿರುತ್ತದೆ. ಇದರಿಂದಾಗಿ ಅದನ್ನು ಹೊತ್ತುಕೊಂಡಿರುವವರು ಕ್ಯಾರೆಟ್ಟನ್ನು ಪಡೆದುಕೊಳ್ಳುವ ಸಲುವಾಗಿ ಮೈಲುಗಟ್ಟಲೇ ದೂರವನ್ನು ನಿಮಿಷಗಳಲ್ಲಿ ಕ್ರಮಿಸುವಂತೆ ಮಾಡುತ್ತದೆ. ಆದರೆ ಎಷ್ಟೇ ವೇಗವಾಗಿ ನಡೆದರೂ ಕ್ಯಾರೆಟ್ಟು ಮಾತ್ರ ಸಾಧನವನ್ನು ಹೊತ್ತುಕೊಂಡವನಿಂದ ಸಮಾನ ದೂರದಲ್ಲೆ ಇರುತ್ತದೆಯೇ ವಿನಃ ಬಾಯಿಗೆಟುಕುವುದೇ ಇಲ್ಲ. ಉದಾಹರಣೆಗೆ ಉದ್ಯೋಗಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಮೇಲ್ಜಾತಿಗಳಿಗೆ ನೀಡಲಾದ ಶೇ.೧೦ ಮೀಸಲಾತಿ ನೀತಿಯನ್ನೇ ಗಮನಿಸಿ. ಅದು ಹುಟ್ಟುಹಾಕಿರುವ ರಾಜಕೀಯ ಕೋಲಾಹಲವನ್ನು ಗಮನಿಸಿದಲ್ಲಿ ಒಂದು ರಾಜಕೀಯ ತಂತ್ರೋಪಾಯವಾಗಿ ಅದರ ಪರಿಣಾಮಕತೆಯನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಅದೇ ಸಮಯದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸಲಾಗದ ಅದರ ಪೊಳ್ಳುತನವನ್ನೂ ಸಹ ಯಾರೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಯಾವ ರೀತಿಯಲ್ಲಿ ಬಂಗಾಳಿ ದ್ವಿಪದಿಯಲ್ಲಿನ ಬಡಪಾಯಿಯು ಎದುರಿಗಿರುವ ಕ್ಯಾರೆಟ್ಟನ್ನು ಪಡೆದು ತನ್ನ ಹಸಿವನ್ನು ನೀಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಅದೇ ರೀತಿಯಲ್ಲಿ ಇತ್ತೀಚಿನ ಶೇ.೧೦ ಕೋಟಾ ಸಹ ಉದ್ಯೋಗವನ್ನು ಒದಗಿಸಲಾರದು.

ಉದ್ಯೋಗಾವಕಾಶಗಳು ಎಲ್ಲಿವೆ? ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ ಭಾರತದ ಉದ್ಯೋಗ ಮಾರುಕಟ್ಟೆಯ ಪರಿಸ್ಥಿತಿ ನಿರಾಶಾದಾಯಕವಾಗಿದೆ; ಮೊದಲನೆಯದಾಗಿ ೨೦೧೮ರ ಡಿಸೆಂಬರ್ ವೇಳೆಗೆ ಭಾರತದ ನಿರುದ್ಯೋಗ ದರವು ಶೇ..೪ಕ್ಕೇರಿದ್ದು ಕಳೆದ ೧೫ ತಿಂಗಳಲ್ಲೇ ಅತಿ ಹೆಚ್ಚಿನ ಮಟ್ಟವನ್ನು ಮುಟ್ಟಿದೆ; ಎರಡನೆಯದಾಗಿ ೨೦೧೭ ಮತ್ತು ೨೦೧೮ರಲ್ಲಿ ಕೆಲಸ ಕಳೆದುಕೊಂಡ ಸುಮಾರು . ಕೋಟಿಯಷ್ಟು ಜನರು ನಿರುದ್ಯೋಗಿ ಪಡೆಯಲ್ಲಿ ಸೇರಿಕೊಂಡಿದ್ದಾರೆ; ಮತ್ತು ಮೂರನೆಯದಾಗಿ ನಿರುದ್ಯೋಗದ ಪ್ರಮಾಣವು ಆರ್ಥಿಕವಾಗಿ ತ್ರಾಣರಹಿತವಾಗುತ್ತಿರುವ ಕ್ಷೇತ್ರ ಮತ್ತು ಸಮುದಾಯಗಳಲ್ಲಿ ಹೆಚ್ಚಾಗಿದೆ. ಉದಾಹರಣೆಗೆ ಈಗಾಗಲೇ ಕೃಷಿ ಬಿಕ್ಕಟ್ಟನ್ನು ಎದುರಿಸುತ್ತಿರುವ ಗ್ರಾಮೀಣ ಕ್ಷೇತ್ರದಲ್ಲಿ ಶೇ.೮೨ರಷ್ಟು ಉದ್ಯೋಗಗಳು ನಷ್ಟವಾಗಿವೆ ಮತ್ತು ನಿರುದ್ಯೋಗದ ಶೇ.೮೦ರಷ್ಟು ಹೊರೆಯನ್ನು ಮಹಿಳೆಯರೇ ಹೊರುತ್ತಿದ್ದಾರೆ. ವಿಪರ್ಯಾಸವೆಂದರೆ ಭಾರತೀಯ ಜನತಾ ಪಕ್ಷದ ಹೊಸ ಅತಂತ್ರರ ರಾಜಕಾರಣದ ಮುಖ್ಯ ಗಮನವೂ ಇದೇ ಕ್ಷೇತ್ರ ಸಮುದಾಯಗಳ ಮೇಲಿದೆ.

ಸಿಎಂಐಇ ಂಸ್ಥೆಯು ತನ್ನ  ಅಂಕಿಅಂಶಗಳು ತಾತ್ಕಾಲಿವಾದದ್ದೆಂದು ಹೇಳಿದ್ದರೂ ಅಂತಿಮ ವರದಿಯಲ್ಲು ದೇಶದ ಒಟ್ಟಾರೆ ಪರಿಸ್ಥಿತಿ ಇದಕ್ಕಿಂದ ಹೆಚ್ಚು ಭಿನ್ನವಾಗಿರಲು ಸಾಧ್ಯವಿಲ್ಲ. ಸರ್ಕಾರಿ ಕ್ಷೇತ್ರದಲ್ಲಿನ ನೇಮಕಾತಿ ಆಮೆಗತಿಯಲ್ಲಿದೆ; ಅಷ್ಟೇ ಅಲ್ಲದೆ ಭರ್ತಿಯಾಗದೆ ಉಳಿದುಕೊಂಡಿರುವ ಬ್ಯಾಕ್ ಲಾಗ್ ಹುದ್ದೆಗಳ ಮೂರನೇ ಒಂದು ಭಾಗದಷ್ಟು ಹುದ್ದೆಗಳು ಮೀಸಲುವರ್ಗಕ್ಕೆ ಸೇರಿದವಾಗಿವೆ; ಅದೇ ಸಮಯದಲ್ಲಿ ಉದ್ಯೋಗಾವಕಾಶಗಳ ಪ್ರಮುಖ ಮೂಲವಾಗಿದ್ದ ಅಸಂಘಟಿತ ಮತ್ತು ಅನೌಪಚಾರಿಕ ಕ್ಷೇತ್ರಗಳು ನೋಟು ನಿಷೇಧ ಮತ್ತು ಜಿಎಸ್ಟಿಯೆಂಬ ಅವಳಿ ಸರ್ಜಿಕಲ್ ದಾಳಿಗೆ ಸಿಲುಕಿ ತತ್ತರಿಸಿದ್ದು ಇನ್ನೂ ಚೇತರಿಸಿಕೊಂಡಿಲ್ಲ. ಇಂಥಾ ಸಂದರ್ಭದಲ್ಲಿ ಮೀಸಲಾತಿಯು ಶೇ. ೫೦ರ ಮಿತಿಯನ್ನು ಮೀರಬಾರದೆಂಬ ಸುಪ್ರೀಂ ಕೋರ್ಟಿನ ನಿರ್ದೇಶನಗಳನ್ನು ಉಲ್ಲಂಘಿಸಿ ಕೇಂದ್ರ ಸರ್ಕಾರವು ಘೋಷಿಸಿರುವ ಶೇ.೧೦ರ ಮೀಸಲಾತಿಯು ಬಿಜೆಪಿಗೆ ತನ್ನ ಚುನಾವಣಾ ಮಿತ್ರರನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡಬಹುದು. ಹಾಗೆಯೇ ಹಿಂದಿ ಹೃದಯ ಭಾಗದಲ್ಲಿ ನಡೆದ ೨೦೧೮ರ ಶಾಸನಾಸಭಾ ಚುನಾವಣೆಗಳಲ್ಲಿ ತಾನು ಕಳೆದುಕೊಂಡ ದುರ್ಬಲ ಮತದಾರರ ನಡುವೆ ತನ್ನ ಬಗ್ಗೆ ಒಂದಷ್ಟು ಸದಭಿಪ್ರಾಯವನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಬಹುದು. ಆದರೆ ವಾಸ್ತವದಲ್ಲಿ ಅದು ಅತಂತ್ರ ಮತ್ತು ನಿತ್ರಾಣ ಮತದಾರರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಮೀಸಲಾತಿಯಿಂದ ಹೊರಗುಳಿದ ಅರ್ಧಕ್ಕಿಂತ ಕಡಿಮೆ ಉದ್ಯೋಗಗಳಿಗಾಗಿ ಎಷ್ಟೋಪಟ್ಟು ಅಧಿಕ ಉದ್ಯೋಗಾಕಾಂಕ್ಷಿಗಳು ಸ್ಪರ್ಧಿಸುತ್ತಿದ್ದು ಮೀಸಲಾತಿಯ ಫಲಾನುಭವಿಗಳಿಗೆ ಅದರಿಂದ ಯಾವ ಲಾಭವು ಸಿಗುವುದಿಲ್ಲ.

ಇಂದಿನ ರಾಜಕೀಯ ಪರಿಭಾಷೆಗಳಲ್ಲಿ ಯುವಕರ ಆಶೋತ್ತರಗಳು ಎಂಬ ಶಬ್ಧವು ಪದೇಪದೇ ಬಳಕೆಯಾಗುತ್ತಿದ್ದರೂ ಅಂಥಾ ಆಶೋತ್ತರಗಳ ಬಗೆಗೆ ರಾಜಕಾರಣಿಗಳಲ್ಲಿ ಅರೆಮನಸ್ಸಿನ ತಿಳವಳಿಕೆಯೇ ಇದೆ. ಮತ್ತದು ಉದ್ಯೋಗವಾಕಾಶಗಳ ಹೆಸರಲ್ಲಿ ಒಂದಷ್ಟು ಪಕೋಡಾಗಳನ್ನು ಎಸೆದರೆ, ಅಥವಾ ಒಂದಷ್ಟು ಹೀನಾಯ ಉದ್ಯೋಗವನ್ನು ನೀಡಿದರೆ ಸಾಕು ಯುವಜನರ ರಾಜಕೀಯ ಬೆಂಬಲವನ್ನು ಪಡೆದುಕೊಳ್ಳಬಹುದೆಂಬ ಸಂವೇದನಾ ರಹಿತ ಗ್ರಹಿಕೆಗಳನ್ನು ಆಧರಿಸಿದೆ. ಉದ್ಯೋಗ ಮಾರುಕಟ್ಟೆಯಲ್ಲಿ ಯುವಜನರ ಸಕ್ರಿಯ ಮತ್ತು ಸ್ವಕೀಯ ಪಾತ್ರವನ್ನು ಉದ್ದೇಶಪೂರ್ವಕವಾಗಿ ನಿರಾಕರಿಸುವ ಮೂಲಕ ವಾಸ್ತವದಲ್ಲಿರುವ ಅರೆಉದ್ಯೋಗದ ಸಮಸ್ಯೆಯ ಬಗ್ಗೆ ಕುರುಡು ಪ್ರದರ್ಶಿಸುತ್ತಿದೆ.

ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್)ಯು ೨೦೧೮ರಲ್ಲಿ ಹೊರತಂದಿರುವ ವರ್ಲ್ಡ್ ಎಂಪ್ಲಾಯ್ಮೆಂಟ್ ಅಂಡ್ ಸೋಷಿಯಲ್ ಔಟ್ಲುಕ್ (ಜಾಗತಿಕ ಉದ್ಯೋಗ ಮತ್ತು ಸಾಮಾಜಿಕ ದರ್ಶನ) ವರದಿಯು ಭಾರತದ ಶೇ.೮೦ರಷ್ಟು ಉದ್ಯೋಗಗಳನ್ನು ಅಭದ್ರವೆಂದು ಪರಿಗಣಿಸಿದೆ. ಅದರಲ್ಲಿ ಕೇವಲ ಶೇ.೨೦ ಭಾಗದಷ್ಟು ಉದ್ಯೋಗಿಗಳು ಮಾತ್ರ ನಿಯಮಿತವಾಗಿ ಸಂಬಳ ಪಡೆಯುವ ಉದ್ಯೋಗಿಗಳಾಗಿದ್ದು ಇನ್ನುಳಿದ ಶೇ.೪೦ರಷ್ಟು ಉದ್ಯೋಗಿಗಳು ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದೇವೆಂಬ ಅಭಿಪ್ರಾಯವನ್ನೇ ಹೊಂದಿದ್ದಾರೆ. ೨೦೧೮ರಲ್ಲಿ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯವು ಹೊರತಂದಿರುವ ಸ್ಟೇಟ್ ಆಫ್ ವರ್ಕಿಂಗ್ ಇನ್ ಇಂಡಿಯಾ (ಭಾರತದ ಕೆಲಸ ಮಾಡುವ ಪರಿಸ್ಥಿತಿ) ವರದಿಯು ಸೌಲಭ್ಯರಹಿತ ಕೆಲಸಗಾರರ ತುಲನಾತ್ಮಕ ವರದಿಯನ್ನು ನೀಡಿದ್ದು ಅಸಂಘಟಿತ ಕ್ಷೇತ್ರದಲ್ಲಿನ ಕಡಿಮೆ ವೇತನದ ಸಮಸ್ಯೆ ಹೇಳತೀರದ್ದಾಗಿದ್ದರೂ ಸಂಘಟಿತ ಕ್ಷೇತ್ರದಲ್ಲೂ ಸಹ ಸಮಸ್ಯೆ ಮುಂದುವರೆದಿದೆ ಎಂಬ ಸಂಗತಿಯನ್ನು ಹೊರಹಾಕಿದೆ. ಶೇ.೩ರಷ್ಟು ಹಣದುಬ್ಬರದ ಏರಿಕೆಯ ಲೆಕ್ಕಾಚಾರಕ್ಕೆ ತಕ್ಕಂತೆ ಕೂಲಿ ದರವನ್ನು ಹೊಂದಾಣಿಕೆ ಮಾಡಿ ನೋಡಿದಾಗಲೂ, ೨೦೧೫ರಲ್ಲಿ  ವಿಶೇಷವಾಗಿ ಸರ್ಕಾರೇತರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಶೇ.೮೨ರಷ್ಟು ಪುರುಷರೂ ಮತ್ತು ಶೇ.೯೨ರಷ್ಟು ಮಹಿಳೆಯರು ಏಳನೇ ವೇತನ ಅಯೋಗ ನಿಗದಿಗೊಳಿಸಿದ ಕನಿಷ್ಟ ವೇತನಕ್ಕಿಂತ ಶೇ.೪೦ರಷ್ಟು ಕಡಿಮೆ ವೇತನವನ್ನು ಪಡೆಯುತ್ತಿದ್ದರು. ಅದೆರ ಜೊತೆಜೊತೆಗೆ ಕಾರ್ಮಿಕ ಉತ್ಪಾದಕತೆಗೂ ಮತ್ತು ವೇತನಕ್ಕೂ ಇರುವ ಅಂತರ ಹೆಚ್ಚಾಗುತ್ತಲೇ ಇದೆ. ಉದಾಹರಣೆಗೆ ಕಳೆದ ಮೂರು ದಶಕಗಳಲ್ಲಿ ಸಂಘಟಿತ ಉತ್ಪಾದಕ ಕ್ಷೇತ್ರದಲ್ಲಿನ ಕಾರ್ಮಿಕ ಉತ್ಪಾದಕತೆಯು ಆರು ಪಟ್ಟು ಹೆಚ್ಚಾಗಿದ್ದರೆ ಕೂಲಿ ದರವು ಮಾತ್ರ ಕೇವಲ ಒಂದೂವರೆ ಪಟ್ಟು ಮಾತ್ರ ಹೆಚ್ಚಾಗಿದೆ.

 

ಎಲ್ಲಾ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಭಾರತದಲ್ಲಿನ ಹಾಲಿ ನಿರುದ್ಯೋಗವು ಅದರಲ್ಲೂ ಯುವಜನರ ನಿರುದ್ಯೋಗದ ಪ್ರಮಾಣವು ಭಾವಿ ಪ್ರಮಾಣವೇ ಹೊರತು ಹಾಲಿಯಲ್ಲವೆಂದು ಕೆಲವರು ವಾದಿಸಬಹುದು. ಅಂದರೆ, ಈಗ ಹಾಲಿ ಇರುವ ಉದ್ಯೋಗಾವಕಾಶಗಳು ತಮ್ಮ ಆಶೋತ್ತರಗಳಿಗೆ ಪೂರಕವಾದ ವೇತನ ಮತ್ತು ಸೌಲಭ್ಯಗಳನ್ನು ನೀಡುವುದಿಲ್ಲ ಎಂದು ಭಾವಿಸುತ್ತಿರುವುದರಿಂದ ಯುವಜನರು ಉದ್ಯೋಗ ಅರಸುತ್ತಿಲ್ಲ ಎಂಬುದು ವಾದದ ಸಾರಾಂಶ. ಹೀಗೆ, ನಿಗದಿತ ವೇತನವಿರುವ ಅದರಲ್ಲೂ ಸರ್ಕಾರಿ ಉದ್ಯೋಗಗಳಿಗಾಗಿ  ಯುವಜನರು ತೋರುವ ಆದ್ಯತೆಯೇ ನಿರುದ್ಯೋಗಕ್ಕೆ ಕಾರಣವೆಂದು ಹೇಳುತ್ತಾ ನಿರುದ್ಯೋಗದ ಹೊಣೆಗಾರಿಕೆಯನ್ನು ನಿರುದ್ಯೋಗಿಗಳ ಹೆಗಲಿಗೇ ವರ್ಗಾಯಿಸಿಬಿಡಬಹುದು. ಆದರೆ ವಾದದಿಂದ ವಾಸ್ತವದಲ್ಲಿರುವ ನಿರುದ್ಯೋಗ, ಅರೆ ಉದ್ಯೋಗ ಅಥವಾ ಭಾವಿ ನಿರುದ್ಯೋಗಗಳಿಗೂ ಮತ್ತು ಉದ್ಯೋಗ ಸೃಷ್ಟಿಯಾಗದಿರುವುದಕ್ಕೂ ಇರುವ ಬಲವಾದ ಸಂಬಂಧಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಅಲ್ಲದೆ ಆರ್ಥಿಕ ಅಭಿವೃದ್ಧಿಗೂ ಮತ್ತು ಉದ್ಯೋಗ ಸೃಷ್ಟಿಗೂ ಇರುವ ಸಂಬಂಧಗಳನ್ನು ದುರ್ಬಲಗೊಳಿಸುತ್ತಿರುವ ರಾಚನಿಕ ಕಾರಣಗಳನ್ನು ಗುರುತಿಸುವ ಮತ್ತು ಅದನ್ನು ನಿವಾರಿಸುವ ಹೊಣೆಗಾರಿಕೆ ಸರ್ಕಾರದ್ದೇ ಆಗಿದೆ. ಅದರ ಜೊತೆಜೊತೆಗೆ ಈಗಾಗಲೇ ನಿತ್ರಾಣಗೊಂಡು ಜರ್ಝರಿತವಾಗಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಮೀಸಲಾತಿಯನ್ನುಅಂದರೆ ಅತ್ಯಂತ ಅತಂತ್ರತೆಯ ಅಂಚಿನಲ್ಲಿರುವ ವ್ಯಕ್ತಿಯನ್ನು ರಕ್ಷಿಸುವ ಕ್ರಮವನ್ನು, ಹೆಚ್ಚಿಸುತ್ತಿರುವ  ಕ್ರಮದ ಹಿಂದಿರುವ ಸರ್ಕಾರದ ಸೋಗಲಾಡಿತನವನ್ನೂ ಯಾರೂ ಅಲ್ಲಗೆಳಯ್ಲು ಸಾಧ್ಯವಿಲ್ಲ್ಲ.

ಹೆಚ್ಚೆಚ್ಚು ವಿದ್ಯಾಭ್ಯಾಸವನ್ನು ಪಡೆವರ ನಡುವೆ ಇರುವ ಅತಿ ಹೆಚ್ಚು ನಿರುದ್ಯೋಗ ದರಕ್ಕೆ ಅವರ ಆಯ್ಕೆ ಮತ್ತು ಆದ್ಯತೆಗಳೇ ಕಾರಣ ಎಂದು ಸರ್ಕಾರವು ವಿವರಿಸಿ ಕೈತೊಳೆದುಕೊಳ್ಳುವ ಪ್ರಯತ್ನ ಮಾಡುತ್ತದೆ. ಅದೇನೇ ಇದ್ದರೂ ಅವರ ಆಯ್ಕೆಗಳು ನಿರ್ದಿಷ್ಟ ಪಥವನ್ನೇ ಅವಲಂಬಿಸುವಂತೆ ಮಾಡಿರುವ ಹೊಣೆಗಾರಿಕೆಯಿಂದ ಸರ್ಕಾರವು ನುಣುಚಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರವು ಮತದಾರರಿಗೆ ನೀಡು ಮೀಸಲಾತಿಯಂಥ ಹುಸಿ ರಕ್ಷಣಾ ಕ್ರಮಗಳು ಭ್ರಮ ನಿರಸನಗಳನ್ನು ಹುಟ್ಟುಹಾಕುತ್ತದೆ. ಆದರೆ ಅದು ವ್ಯಗ್ರವಾಗದಂತೆ ನೋಡಿಕೊಳ್ಳಲು ಕೂಡಲೇ ದೊಡ್ಡ ದೊಡ್ಡ ಭರವಸೆಗಳನ್ನು ಘೋಷಿಸಲಾಗುತ್ತದೆ ಆದರೆ ಅದರೊಟ್ಟಿಗೆ ಜನರ ಅಭದ್ರತೆಯನ್ನು ಹೆಚ್ಚಿಸುವ ನೀತಿಗಳ ಬೆದರಿಕೆಯನ್ನೂ ಒಡ್ಡಲಾಗುತ್ತದೆ. ಇದು ಮತ್ತಷ್ಟು ಹುಸಿ ಭರವಸೆಗಳ ಘೋಷಣೆಗೆ ಜನರನ್ನು ಬಲಿ ಮಾಡುವ ರಾಜಕೀಯ ವಿಷಚಕ್ರಕ್ಕೆ ದೂಡುತ್ತದೆ.

ಕೃಪೆ: Economic and Political Weekly ಅನು: ಶಿವಸುಂದರ್ 

 

 

 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...