ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಾನೇಕೆ ಬಿಜೆಪಿ ಪರ ಪ್ರಚಾರ ಮಾಡಬೇಕು ಎಂದು ಯೋಗ ಗುರು ಬಾಬಾ ರಾಮದೇವ್ ಪತ್ರಕರ್ತರನ್ನೇ ಪ್ರಶ್ನಿಸಿ ಹುಬ್ಬೇರುವಂತೆ ಮಾಡಿದ್ದಾರೆ. ಬೆಲೆಏರಿಕೆಯನ್ನು ನಿಯಂತ್ರಿಸದಿದ್ದರೆ ಅದು ಈ ಸರಕಾರಕ್ಕೆ ದುಬಾರಿಯಾಗಿ ಪರಿಣಮಿಸಲಿದೆ ಎಂದು ಹೇಳುವ ಮೂಲಕ ಯೋಗಗುರು ರಾಮದೇವ್ ಅವರು ರವಿವಾರ ನರೇಂದ್ರ ಮೋದಿ ಸರಕಾರಕ್ಕೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ.
ಅವರು ಎನ್ಡಿಟಿವಿ ಯುವ ಸಮ್ಮೇಳದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತಾನು ಬಿಜೆಪಿ ಪರ ಪ್ರಚಾರ ಕಾರ್ಯವನ್ನು ನಡೆಸುವುದಿಲ್ಲ ಎಂದೂ ಹೇಳಿದ ಅವರು,ಸರಕಾರವು ತನಗೆ ಅವಕಾಶ ನೀಡಿದರೆ ಮತ್ತು ತೆರಿಗೆಯನ್ನು ಸ್ವಲ್ಪ ತಗ್ಗಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಈಗಿ ಅರ್ಧದಷ್ಟು ಬೆಲೆಗಳಲ್ಲಿ ತಾನು ಮಾರಾಟ ಮಾಡಬಲ್ಲೆ ಎಂದೂ ತಿಳಿಸಿದರು.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ರಾಮದೇವ್ ಬಿಜೆಪಿಯನ್ನು ಬೆಂಬಲಿಸಿದ್ದರು. ಒಂದು ವರ್ಷದ ಬಳಿಕ ಅವರನ್ನು ಹರ್ಯಾಣದ ಬ್ರಾಂಡ್ ರಾಯಭಾರಿಯನ್ನಾಗಿ ಮಾಡಿ ಸಂಪುಟ ಸಚಿವರ ಸ್ಥಾನಮಾನವನ್ನು ನೀಡಲಾಗಿತ್ತು.
ಎನ್ಡಿಟಿವಿ ಯುವ ಸಮ್ಮೇಳದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ರಾಮದೇವ್,ನೀವು ಈ ಬಾರಿಯೂ ಬಿಜೆಪಿ ಪರ ಪ್ರಚಾರ ಮಾಡುತ್ತೀರಾ ಎಂಬ ಪ್ರಶ್ನೆಗೆ,ತಾನೇಕೆ ಅದನ್ನು ಮಾಡಬೇಕು ಎಂದು ಮರುಪ್ರಶ್ನಿಸಿದರು.
ತಾನು ಇತ್ತೀಚಿಗೆ ರಾಜಕೀಯದಿಂದ ದೂರವಾಗಿದ್ದೇನೆ ಎಂದು ಅವರು ಒಪ್ಪಿಕೊಂಡರು.
ಪ್ರಧಾನಿ ಮೋದಿಯವರನ್ನು ಟೀಕಿಸುವುದು ಜನರ ಮೂಲಭೂತ ಹಕ್ಕು ಆಗಿದೆ ಎಂದ ಅವರು ಅದಕ್ಕೆ ಕಾರಣಗಳನ್ನು ನೀಡಲಿಲ್ಲ. ಆದರೆ ಮೋದಿಯವರು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದ್ದಾರೆ. ಯಾವುದೇ ದೊಡ್ಡ ಹಗರಣಗಳಿಗೆ ಅವಕಾಶ ನೀಡಿಲ್ಲ ಎಂದರು. ಸರಕಾರವು ಇಂಧನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕು. ಆದರೆ ಗರಿಷ್ಠ ಶೇ.28ರ ತೆರಿಗೆಯನ್ನು ವಿಧಿಸಕೂಡದು. ಆದಾಯ ನಷ್ಟವು ದೇಶವನ್ನು ಮುನ್ನಡೆಯುವುದನ್ನು ತಡೆಯುವುದಿಲ್ಲ. ನಾವು ಶ್ರೀಮಂತರಿಗೆ ತೆರಿಗೆಯನ್ನು ವಿಧಿಸಬಹುದು ಎಂದರು.