ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಬೆಂಗಳೂರು ರೈಲಿಗೆ ಹೊನ್ನಾವರದಲ್ಲಿ ಯಾಕಿಲ್ಲ ನಿಲುಗಡೆ?

Source: S O News Service | By Office Staff | Published on 18th February 2020, 9:58 PM | Coastal News |

ಹೊನ್ನಾವರ: ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ನಿಲುಗಡೆ ಹೊಂದಿರುವ ಬೆಂಗಳೂರು- ವಾಸ್ಕೊ ನೂತನ ರೈಲಿಗೆ ಹೊನ್ನಾವರ ತಾಲೂಕಿನಲ್ಲಿ ಎರಡು ನಿಲ್ದಾಣವಿದ್ದರೂ ನಿಲುಗಡೆ ನೀಡದಿರುವುದು ಇದೀಗ ತಾಲೂಕಿನೆಲ್ಲಡೆ ಚರ್ಚೆಗೆ ಕಾರಣವಾಗಿದೆ.
ವಾರದ ಹಿಂದಷ್ಟೆ ಕುಮಟಾ- ಹೊನ್ನಾವರ ಶಾಸಕ ದಿನಕರ ಶೆಟ್ಟಿ ಸುದ್ದಿಗೋಷ್ಠಿ ನಡೆಸಿ, ಜಿಲ್ಲೆಯ ಬಹುವರ್ಷದ ಬೇಡಿಕೆ ಈಡೇರಿರುವುದನ್ನು ತಿಳಿಸಿದ್ದರು. ಇದನ್ನು ಜಿಲ್ಲೆಯ ಎಲ್ಲರೂ ಸ್ವಾಗತಿಸಿದ್ದರು. ಆದರೆ, ಈ ಸಂಭ್ರಮ ಹೊನ್ನಾವರದ ಜನತೆಗೆ ಸ್ವಲ್ಪ ಕಡಿಮೆ ಸಿಕ್ಕಿದೆ. ಯಾಕೆಂದರೆ, ತಾಲೂಕು ವ್ಯಾಪ್ತಿಯಲ್ಲಿ ಕರ್ಕಿ ಹಾಗೂ ಮಂಕಿ ರೈಲ್ವೆ ನಿಲ್ದಾಣವಿದೆ. ಪ್ರತಿನಿತ್ಯ ಹಲವು ರೈಲ್ವೆ ಸಂಚಾರ ನಡೆದರೂ, ಕೆಲವೇ ರೈಲುಗಳು ಮಾತ್ರ ನಿಲ್ದಾಣದಲ್ಲಿ ನಿಲ್ಲುವ ಮೂಲಕ ಸಾರ್ವಜನಿಕರಿಗೆ ಅನನುಕೂಲವಾಗುತ್ತಿತ್ತು. ಈ ಹಿಂದೆಯೂ ನೆರೆಯ ಭಟ್ಕಳ ಹಾಗೂ ಕುಮಟಾಕ್ಕೆ ಹೋಗಿ ವಿಶೇಷ ರೈಲು ಏರಬೇಕಾದ ಅನಿವಾರ್ಯತೆ ತಾಲೂಕಿನ ಜನತೆಗೆ ಆವರಿಸಿತ್ತು. ಇದೀಗ ಬೆಂಗಳೂರು ರೈಲ್ವೆಗೆ ಭಟ್ಕಳ, ಮುರ್ಡೇಶ್ವರ, ಕುಮಟಾ, ಗೋಕರ್ಣ, ಅಂಕೋಲಾ, ಕಾರವಾರದಲ್ಲಿ ನಿಲ್ಲಲು ಅನುಮತಿ ನೀಡಲಾಗಿದ್ದು, ಹೊನ್ನಾವರಕ್ಕೆ ಮಾತ್ರ ಈ ಅವಕಾಶ ಸದ್ಯದ ಮಟ್ಟಿಗೆ ಕೈ ತಪ್ಪಿದೆ. 
ಬಸ್ ಡಿಪೋ, ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಈ ಹಿಂದಿನಿಂದಲೂ ಬೇಡಿಕೆ ಇಡುತ್ತಲೇ ಬಂದರೂ ಇದುವರೆಗೂ ಅದು ಈಡೇರಿಲ್ಲ. ತಾಲೂಕಿಗೆ ಇಬ್ಬರು ಶಾಸಕರ ವ್ಯಾಪ್ತಿ ಬಂದರೂ ಈ ಹಿಂದೆ ಆಯ್ಕೆಯಾದವರು, ಪ್ರಸುತ್ತ ಇದ್ದವರು ಇದರ ಬಗ್ಗೆ ಉದಾಸೀನತೆ ತೋರುತ್ತಿದ್ದಾರೆನ್ನುವುದು ತಾಲೂಕಿನ ಜನತೆಯ ಆರೋಪವಾಗಿದೆ. ರೈಲು ನಿಲುಗಡೆ ಮಾಡಲು ಜನಪ್ರತಿನಿಧಿಗಳ ಗಮನ ಸೆಳೆಯಲು ಈಗಾಗಲೇ ಬೇಡಿಕೆಯ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನ ಪ್ರಾರಂಭವಾಗಿದೆ.
ಕಾರವಾರ- ಬೆಂಗಳೂರು ರೈಲು ಸಂಚಾರ ಆರಂಭವಾಗಲು ಸಾಕಷ್ಟು ಶ್ರಮವಹಿಸಿರುವ ಕುಮಟಾ ಶಾಸಕ ದಿನಕರ ಶೆಟ್ಟಿ ಆಯ್ಕೆಯಾಗಲು ಹೊನ್ನಾವರದ ಪಾತ್ರ ಬಹುಮುಖ್ಯವಾಗಿದೆ. ಕೇಂದ್ರ, ರಾಜ್ಯದಲ್ಲೂ ಬಿಜೆಪಿ ನೇತೃತ್ವದ ಸರ್ಕಾರವಿದ್ದು, ತಾಲ್ಲೂಕಿಗೆ ಸಂಬಂಧಿಸಿದ ಇಬ್ಬರು ಶಾಸಕರೂ ಬಿಜೆಪಿಯವರಾಗಿರುವುದರಿಂದ ಹೊನ್ನಾವರಕ್ಕೆ ಬೆಂಗಳೂರು ರೈಲು ನಿಲುಗಡೆ ಮಾಡಿಸಲು ಶ್ರಮ ವಹಿಸಬೇಕಿದೆ ಎನ್ನುವುದು ತಾಲ್ಲೂಕಿನ ಜನರ ಆಗ್ರಹವಾಗಿದೆ.
ಈ ಭರವಸೆ ಈಡೇರಿದ್ದೆ ಆದರೆ, ತಾಲೂಕಿನ ಜನತೆ ಕಡಿಮೆ ವೆಚ್ಚದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಬಹುದು. ಅಲ್ಲದೇ ನೆರೆಯ ಗೋವಾ ರಾಜ್ಯಕ್ಕೆ ಹೋಗಲು ಇನ್ನೊಂದು ರೈಲು ಏರಬಹುದಾಗಿದೆ. ಶಾಸಕರು, ಸಂಸದರು, ಸಚಿವರು ಈ ಭರವಸೆ ಉಳಿಸುಕೊಳ್ಳುತ್ತಾರಾ ಎಂದು ಮುಂದಿನ ದಿನದಲ್ಲಿ ಕಾದು ನೋಡಬೇಕಿದೆ. 

ಈಗಾಗಲೇ ಈ ಹಂತದ ಪ್ರಯತ್ನ ಮಾಡಿದ್ದೇನೆ. ರೈಲ್ವೆ ಮಂತ್ರಿಯವರನ್ನು ಸಂಪರ್ಕಿಸಲಾಗಿದೆ. ಜಿಲ್ಲೆಯ ಸಂಸದರ ಗಮನಕ್ಕೂ ತಂದಿದ್ದು, ರೈಲ್ವೆ ಪ್ರಾರಂಭವಾದ 15 ದಿನದೊಳಗೆ ನಿಲುಗಡೆ ವ್ಯವಸ್ಥೆ ಕಲ್ಪಿಸುತ್ತೇನೆ. ಇದು ಶತಸಿದ್ಧ. ಸಚಿವರ ಮೇಲೆ ವಿಶ್ವಾಸವಿದೆ.

-    ದಿನಕರ ಶೆಟ್ಟಿ, ಕುಮಟಾ- ಹೊನ್ನಾವರ ಶಾಸಕ

Read These Next