ಭಟ್ಕಳ: ರಾಜ್ಯದ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಸಂತೃಸ್ತರ ರಕ್ಷಣೆಗೆ ಬಾರದ ರಾಜ್ಯ ಹಾಗೂ ಕೇಂದ್ರ ಸರ್ಕಾರ ದಯಾನೀಯ ಸ್ಥಿತಿಯಲ್ಲಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕದ ರಾಜ್ಯಧ್ಯಕ್ಷ ತಾಹೀರ್ ಹುಸೇನ್ ಲೆವಡಿ ಮಾಡಿದರು.
ಅವರು ಸೋಮವಾರ ಇಲ್ಲಿನ ವೆಲ್ಫೇರ್ ಆಸ್ಪತ್ರೆಯ ಸಭಾಲಯದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸಂತೃಸ್ಥರಿಗೆ ಸರಿಯಾದ ಮೂಲಭೂತ ಸೌಕರ್ಯವನ್ನು ನೀಡದ ರಾಜ್ಯ ಸರ್ಕಾರದ ಅಸಹಾಯಕ ನೀತಿ, ಪರಿಹಾರ ನೀಡದ ಕೇಂದ್ರ ಸರ್ಕಾರದ ನಿರ್ಲಕ್ಷ ದೋರಣೆಯಿಂದಾಗಿ ಗಂಜಿ ಕೇಂದ್ರಗಳಲ್ಲಿ ವಾಸಿಸುತ್ತಿರುವ ಬಡ ಕುಟುಂಬ ನರಕ ಯಾತನೆ ಅನುಭವಿಸುತ್ತಿದ್ದು ಬೆಳಗಾವಿಯ ಗಂಜಿ ಕೇಂದ್ರದಲ್ಲಿ 4ವರ್ಷದ ಬಾಲಕ ಸಾವನ್ನಪ್ಪಿರುವುದು ಸರ್ಕಾರದ ಅಧೋಗತಿಯನ್ನು ಸೂಚಿಸುತ್ತಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ದೇಶದ ಆರ್ಥಿಕ ಸ್ಥಿತಿಗತಿಗಳು ಕೊಚ್ಚಿ ಹೋಗುತ್ತಿದ್ದರೂ ಮಾತಿನಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿಯ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದರೂ ಇದುವರೆಗೂ ಪರಿಹಾರ ಸಿಗದೆ ಸಂತೃಸ್ತರು ಕಂಗಲಾಗುತ್ತಿದ್ದಾರೆ. ಕಟ್ಟಡ ಕಾರ್ಮಿಕ ವಿವಿಧ ರೀತಿಯ 14ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಅನ್ಯ ಕಾರ್ಯಗಳಿಗೆ ಬಳಕೆ ಮಾಡುವುದಕ್ಕೆ ಆಯಾ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದ್ದು ಅಧಿಕಾರಿಗಳನ್ನು ನಮ್ಮದಿಯಿಂದ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ತಾಹಿರ್ ಹುಸೇನ್ ಆರೋಪಿಸಿದರು. ಸಮಾಜದ ವಿವಿಧ ವರ್ಗಗಳ ನಡುವೆ ಬೇಧಭಾವನ್ನುಂಟು ಮಾಡುವ ಹೇಳಿಕೆಗಳನ್ನು ನೀಡುತ್ತಿರುವ ಈಶ್ವರಪ್ಪ ಬಿಜೆಪಿಗೆ ಮತ ಹಾಕದಿರುವ ಮುಸ್ಲಿಮರು ಪಾಕಿಸ್ತಾನದ ಸಮರ್ಥಕರು ಎಂದು ಹೇಳುವುದರ ಮೂಲಕ ಬೇಜವ್ದಾರಿತನವನ್ನು ಮೆರೆದಿದ್ದಾರೆ, ಒಂದು ಸಮುದಾಯದ ಕುರಿತು ಮಾತನಾಡುವಾಗ ನಾಲಗೆ ಸಡಿಲು ಮಾಡದೆ ಬಿಗಿ ಹಿಡಿದು ಮಾತನಾಡುವಂತೆ ಸಲಹೆ ನೀಡಿದ ಅವರು ನಾಗವರೀಕ ಮಧ್ಯ ಬೇಧಭಾವ ಮಾಡುವುದಿಲ್ಲ ಎಂದು ದೇವರ ಹೆಸರಲ್ಲಿ ಪ್ರಮಾಣಗೈದು ಸಚಿವರಾಗಿರುವ ಈಶ್ವರಪ್ಪ ದೇಶದ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಇದಕ್ಕಾಗಿ ಅವರು ದೇಶದ ಮುಂದೆ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು. 50 ವರ್ಷಗಳ ವರೆಗೆ ದೇಶದಲ್ಲಿ ಆಡಳಿತ ನಡೆಸುತ್ತೇವೆ ಎಂದು ಹೇಳುವ ಅಮಿತ ಶಾ ಈಗ ದೇಶದ ವಿರೋಧ ಪಕ್ಷದವರನ್ನು ಪದವಿ, ಹಣ ಹಾಗೂ ಬೆದರಿಕೆಗಳ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಲುಗಾಡುಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಉತ್ತರಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೌಕತ್ ಕತೀಬ್, ಮುಖಂಡರಾದ ಯೂನೂಸ್ ರುಕ್ನುದ್ದೀನ್, ಅಬ್ದುಲ್ ಜಬ್ಬಾರ್ ಅಸದಿ, ನಾಸಿರ್ ಮುಂತಾದವರು ಉಪಸ್ಥಿತರಿದ್ದರು.