ಭಟ್ಕಳ: ಸಿದ್ಧಾರ್ಥ ಪದವಿ ಮಹಾವಿದ್ಯಾಲಯ, ಶಿರಾಲಿಯ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಶುವೈದ್ಯ ಡಾ.ಗೌರೀಶ ಪಡುಕೋಣೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, “ ವಿದ್ಯಾರ್ಥಿಗಳು ಕಾಲೇಜಿನಲ್ಲಿ ದೊರೆಯುವ ಎಲ್ಲಾ ಶಿಕ್ಷಣ, ಕೌಶಲ್ಯ ತರಬೇತಿ ಹಾಗು ಪಠ್ಯೇತರ ಚಟುವಟಿಕೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿಯನ್ನಷ್ಟೆ ಅವಲಂಭಿಸದೆ ಇತರ ವ್ಯಕ್ತಿತ್ವ ಬೆಳವಣಿಗೆಯ ಕೌಶಲ್ಯಗಳನ್ನು ಬೆಳಸಿಕೊಳ್ಳಬೇಕು” ಎಂದು ನುಡಿದರು.
ಸಿದ್ಧಾರ್ಥ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ಕ್ಯಾಪ್ಟನ್ (ನಿವೃತ್ತ) ಕೆ. ಆರ್ ನಾಯ್ಕ ಅಧ್ಯಕ್ಷತೆ ವಹಿಸಿದರು. ಟ್ರಸ್ಟಿನ ಕಾರ್ಯದರ್ಶಿ ಹಾಗೂ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಅರ್ಚನಾ ಯು. ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಿದ್ಧಾರ್ಥ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ.ಸುಜ್ಞಾನ.ಎಸ್.ಬೈಂದೂರ ಪ್ರಾಸ್ಥಾವಿಕ ಭಾಷಣ ಮಾಡಿದರು.
ನಂತರ 2018-19ರ ಬಿ.ಎಸ್ಸಿ ಹಾಗೂ ಬಿ.ಕಾಂನ ಅಗ್ರಸ್ಥಾನಿಗಳಾದ ಕು.ಅಶ್ವಿನಿ ಪೈ ಹಾಗೂ ದಿವ್ಯಾ ನಾಯ್ಕ ಇವರನ್ನು ಪುರಸ್ಕರಿಸಲಾಯಿತು.
ಹಿರಿಯ ವಿದ್ಯಾರ್ಥಿಗಳಾದ ಕು.ವೈಶಾಲಿ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು, ಕು.ಕೃತಿಕಾ ನಾಡಕರ್ಣಿ ಸ್ವಾಗತಿಸಿದರು ಹಾಗೂ ಕು.ಕೇಶವ ನಾಯ್ಕ ಗೌರವ ವಂದಿಸಿದರು. ನಂತರ ನಡೆದ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಎಲ್ಲರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಯಿತು.