ಧಾರವಾಡ : ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಗಾಗಿ ಹಾಗೂ ಕೋವಿಡ್ ಬಾಧಿತ ಹಾಗೂ ಸೋಂಕಿತ ಮಕ್ಕಳ ಅನುಕೂಲಕ್ಕಾಗಿ ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಕುರಿತು ಜಿಲ್ಲಾ ಮಟ್ಟದ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳಿಗೆ ವೆಬಿನಾರ್ ಕಾರ್ಯಕ್ರಮವನ್ನು ಇತ್ತೀಚೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಆಯೋಜಿಸಿತ್ತು.
ಈ ವೆಬಿನಾರನಲ್ಲಿ ಎಲ್ಲ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿ ತಮ್ಮ ತಮ್ಮ ಇಲಾಖೆಯಿಂದ ಕೋವಿಡ್-19 ಹಿನ್ನಲೆಯಲ್ಲಿ ಒದಗಿಸುತ್ತಿರುವ ಯೋಜನೆಗಳನ್ನು ವಿವರಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಒದಗಿಸಲಾಗುತ್ತಿರುವ ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಕೋವಿಡ್-19 ದಿಂದ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಪ್ರತಿ ತಿಂಗಳು 3500 ರೂ. ಗಳ ಆರ್ಥಿಕ ಸೌಲಭ್ಯ, ಬಾಲಹಿತೈಷಿ ಯೋಜನೆ, ಪಿ. ಎಮ್.ಕೇರ್ಸ ಯೋಜನೆ ಹಾಗೂ ಪ್ರಾಯೋಜಕತ್ವ ಯೋಜನೆಗಳ ಕುರಿತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ. ಕಮಲವ್ವ ಬೈಲೂರ ವಿವರಿಸಿದರು.
ಜಿಲ್ಲಾ ತನಿಖಾ ಸಮಿತಿಯ ಸದಸ್ಯರಾದ ಶಂಕರ ಹಲಗತ್ತಿ ಮಾತನಾಡಿ, ಮಕ್ಕಳಿಗಾಗಿ ಒದಗಿಸುತ್ತಿರುವ ಎಲ್ಲ ಯೋಜನೆಗಳನ್ನು ಕ್ರೋಢೀಕರಿಸಿ ಒಂದು ಪುಸ್ತಕ ರೂಪದಲ್ಲಿ ಹೊರ ತಂದರೆ ಎಲ್ಲರಿಗೂ ತುಂಬಾ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಬಾಲ್ಯನ್ಯಾಯ ಮಂಡಳಿಯ ಸದಸ್ಯರು, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು, ಪೋಲಿಸ್ ಇಲಾಖೆ, ಮಕ್ಕಳ ಸಹಾಯವಾಣಿ, ಮಕ್ಕಳ ಪಾಲನಾ ಸಂಸ್ಥೆಯ ಮುಖ್ಯಸ್ಥರು ಭಾಗವಹಿಸಿದ್ದರು. ರಕ್ಷಣಾಧಿಕಾರಿ (ಸಾಂಸ್ಥಿಕ), ಅಶ್ವಿನಿ ಉಳ್ಳಿಗೇರಿ, ರಕ್ಷಣಾಧಿಕಾರಿ (ಅಸಾಂಸ್ಥಿಕ) ಪ್ರಕಾಶ ಕೊಡ್ಲಿವಾಡ, ಲೀಗಲ್ ಕಂ ಪ್ರೋಬೇಷನರಿ ಆಫೀಸರ್ ನೂರಜಹಾನ್ ಕಿಲ್ಲೇದಾರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಎಲ್ಲ ಸಿಬ್ಬಂದಿ ಭಾಗವಹಿಸಿ ವೆಬಿನಾರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.