ಭಟ್ಕಳ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರೊಂದಿಗೆ ಸೇರಿಕೊಂಡು ಜೆಡಿಎಸ್ ಪಕ್ಷ ಚುನಾವಣೆಯನ್ನು ಎದುರಿಸುತ್ತಿದ್ದು, ಭಟ್ಕಳದಲ್ಲಿ ಮೈತ್ರಿ ಅಭ್ಯರ್ಥಿ ಆನಂದ ಆಸ್ನೋಟಿಕರ್ ಮುನ್ನೆಡೆ ಸಾಧಿಸಲಿದ್ದಾರೆ ಎಂದು ಭಟ್ಕಳ ಜೆಡಿಎಸ್ ಮುಖಂಡರು ತಿಳಿಸಿದರು.
ಅವರು ಶನಿವಾರ ಸಂಜೆ ಇಲ್ಲಿನ ಶ್ಯಾನಭಾಗ ಹೊಟೆಲ್ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯ ಪರವಾಗಿ ಭಟ್ಕಳದ ಉಸ್ತುವಾರಿಯನ್ನು ಮಾಜಿ ಶಾಸಕ ಮಂಕಾಳು ವೈದ್ಯರಿಗೆ ನೀಡಲಾಗಿದೆ. ಬಹುತೇಕ ಎಲ್ಲ ಮತಗಟ್ಟೆ ವ್ಯಾಪ್ತಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಒಟ್ಟುಗೂಡಿದ್ದಾರೆ. ಏ.21ರಂದು ಜೆಡಿಎಸ್ ವರಿಷ್ಠ ದೇವೇಗೌಡರು ಹೊನ್ನಾವರಕ್ಕೆ ಆಗಮಿಸಲಿದ್ದು, ಪಕ್ಷದ ಭಟ್ಕಳ ತಾಲೂಕಿನ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ಜೆಡಿಎಸ್ ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಭಟ್ಕಳ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಪಾಂಡು ನಾಯ್ಕ, ವೆಂಕಟೇಶ ನಾಯ್ಕ ತಲಗೋಡ, ದ್ಯಾವಯ್ಯ ನಾಯ್ಕ, ಶಂಕರ ನಾಯ್ಕ ಕೊಪ್ಪ, ವಿ.ಆರ್.ನಾಯ್ಕ, ಕೃಷ್ಣ ಹಳ್ಳೇರ, ಗಣೇಶ ಹಳ್ಳೇರ, ರಾಘು ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.