ಹಾಸನ:ನೀರು ಅಮೂಲ್ಯ ಪ್ರಾಕೃತಿಕ ಸಂಪತ್ತು. ಇದು ಪ್ರತಿಯೊಂದು ಜೀವಿಯು ಬದುಕುಳಿಯಲು ವಿಕಾಸಹೊಂದಲು ಜೀವಾಮೃತವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾದ ಕೆ.ಸಿ ದೇವರಾಜೇಗೌಡ ತಿಳಿಸಿದರು.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಇವರ ಸಂಯುಕ್ತಾಶ್ರಯದಲ್ಲಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ವಿಶ್ವಜಲ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಾಗರೀಕತೆ ಬೆಳೆದಂತೆಲ್ಲಾ ಅರಣ್ಯಗಳನ್ನು ಅಭಿವೃದ್ಧಿ ಹೆಸರಿನಲ್ಲಿ ನಾಶಮಾಡುತ್ತಿರುವುದು, ನೀರನ ಬಳಕೆ ಬಗ್ಗೆ ಸಾಕ್ಷಾರತೆ ಇಲ್ಲದಿರುವುದು. ಅಲ್ಲದೇ ನೀರಿನ ಬಳಕೆಯ ಸಾಮಾನ್ಯ ಜ್ಞಾನದ ಕೊರತೆಯಿಂದ ಇಂದು ಜೀವ ಸಂಕುಲದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹಾಗಾಗಿ ಆಪತ್ತು ಎದುರಾಗಿದೆ ಎಂದರು.
ಇಂದಿನ ದಿನಗಳಲ್ಲಿ ಮಕ್ಕಳಿಂದ ವೃದ್ದರವರೆಗೂ ಮರಗಳನ್ನು ಬೆಳೆಸುವುದು ಅತ್ಯಂತ ತುರ್ತಿನ ಜವಾಬ್ದಾರಿ ಇದೆ. ವಿಶ್ವ ಮಟ್ಟದಲ್ಲಿ ಜಾಗತಿಕ ತಾಪಮಾನ ತೀವ್ರ ರೀತಿಯಲ್ಲಿ ಏರಿಕೆಯಾಗುತ್ತಿದೆ. ಹಿಮಾಲಯದ ನಿರ್ಗಲ್ಲುಗಳು ಕರಗುತ್ತಿವೆ. ಉತ್ತರ ಹಾಗೂ ಉತ್ತರ ಧ್ರುವಗಳಲ್ಲಿರುವ ಹಿಮಪರ್ವತಗಳು ಸಡಿಲಗೊಲ್ಳುತ್ತಿದ್ದು, ಸಮುದ್ರದ ಮಟ್ಟ ಜಾಸ್ತಿಯಾಗುತ್ತಿದೆ. ಇದರಿಂದಾಗಿ ಒಂದಿಲ್ಲ ಒಂದು ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಭಾನುಪ್ರಕಾಶ್ ಮಾತನಾಡಿ ನೀರಿನ ಸಂರಕ್ಷಣೆ, ಬದುಗಳ ನಿರ್ಮಾಣ, ಜಲ ಮರುಪೂರಣ, ಕೃಷಿ ಹೊಂಡಗಳ ನಿರ್ಮಾಣ ಮಾಡುವ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರವಿಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಸುಂದರ್, ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಹರೀಶ್ ಹಾಗೂ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ ರೂಪ,ಹಾಸನ ಇವರು ವೇದಿಕೆಯಲ್ಲಿದ್ದರು.
ನಂತರ ಸಾಂಕೇತಿಕವಾಗಿ 25 ಗಿಡಗಳನ್ನು ತಾಲ್ಲೂಕು ಪಂಚಾಯತ್ ಹಾಗೂ ಬಾಲಮಂದಿರದಲ್ಲಿ ನೆಡಲಾಯಿತು.