ಹಾಸನ: ಲೋಕಸಭಾ ಚುನಾವಣೆಯ ವೆಚ್ಚ ವೀಕ್ಷಕರು ಈಗಾಗಲೇ ಆಗಮಿಸಿದ್ದು, ಕ್ಷೇತ್ರಗಳಲ್ಲಿ ಸಂಚಾರ ಮಾಡುತ್ತಾ ಜಿಲ್ಲೆಯಲ್ಲಿ ಮಾಡಲಾಗಿರುವ ಸಿದ್ದತೆಗಳನ್ನು ಪರಿಶೀಲಿಸುತ್ತಿದ್ದಾರೆ.
ಅವರು ಇಂದು ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ಗಳಿಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ತಪಾಸಣೆಗಳ ವ್ಯವಸ್ಥೆಯನ್ನು ಗಮನಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎ.ಎನ್ ಪ್ರಕಾಶ್ಗೌಡ ಅವರು ವೀಕ್ಷಕರೊಂದಿಗೆ ಹಾಜರಿದ್ದು ಲೋಕಸಭಾ ಚುನಾವಣೆಗೆ ಮಾಡಿಕೊಂಡಿರುವ ಸಿದ್ದತೆಗಳು, ಚೆಕ್ಪೋಸ್ಟ್ಗಳ ಬಗ್ಗೆ ವಿವರಿಸಿದರು.
ಮಾಧ್ಯಮ ಮೇಲ್ವಿಚಾರಣೆ ಘಟಕಕ್ಕೆ ವೆಚ್ಚ ವೀಕ್ಷಕರ ಭೇಟಿ:ಲೋಕಸಭಾ ಚುನಾವಣೆ ವೆಚ್ಚ ವೀಕ್ಷಕರಾದ ರಾಜೀವ್ ಮಗೊ ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ತೆರೆಯಲಾಗಿರುವ ಮಾಧ್ಯಮ ಮೇಲ್ವಿಚಾರಣೆ ಘಟಕಕ್ಕೆ ಭೇಟಿ ನೀಡಿ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಮೇಲ್ವಿಚಾರಣೆಗೆ ಮಾಡಲಾಗಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಅವರು ಮಾಧ್ಯಮ ದೃಢೀಕರಣ ಮತ್ತು ಮೇಲ್ವಿಚಾರಣೆಗೆ ಮಾಡಿಕೊಂಡಿರುವ ವ್ಯವಸ್ಥೆಗಳ ಕುರಿತು ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸ್ಗೌಡ, ತಹಶೀಲ್ದಾರ್ ಶ್ರೀನಿವಾಸಯ್ಯ, ಚುನಾವಣಾ ತಹಶೀಲ್ದಾರ್ ನಾಗಭೂಷಣ್ ಹಾಜರಿದ್ದರು.