ಶ್ರೀನಿವಾಸಪುರ: ದೇವ ಶಿಲ್ಪಿ ವಿಶ್ವಕರ್ಮರ ಕಲಾ ಕೌಶಲ್ಯ ಜಗತ್ತಿಗೆ ಮಾದರಿಯಾಗಿದೆ. ವಿಶ್ವಕರ್ಮ ಸಮುದಾಯ ಆ ಮಾಹಾನ್ ಶಿಲ್ಪಿಯ ದಾರಿಯಲ್ಲಿ ಸಾಗಬೇಕು ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜದ ಒಳಿತಿಗಾಗಿ ಶ್ರಮಿಸಿದ ಮಹಾಜ್ ಚೇತನಗಳನ್ನು ಮರೆಯದೆ ಮನಸ್ಸಿಲ್ಲಿ ನೆನೆಯುವುದು ಕೃತಜ್ಞತೆಯ ಸಂಕೇತ. ಹಿರಿಯರು ತೋರಿದ ಮಾರ್ಗದಲ್ಲಿ ಸಾಗಿದರೆ ಮಾತ್ರ ಕ್ಷೇಮವಾಗಿ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಮೋಹನಾಚಾರಿ ಮಾತನಾಡಿ, ನಾಗರಿಕತೆ ಹಾಗೂ ಸಾಂಸ್ಕೃತಿಕ ಪರಂಪರೆ ನಿರ್ಮಿಸುವಲ್ಲಿ ವಿಶ್ವಕರ್ಮ ಜನಾಂಗದ ಪಾತ್ರ ಹಿರಿದು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಕುಲ ವೃತ್ತಿ ಕೈಗೊಳ್ಳುವುದು ಕಷ್ಟವಾಗಿದೆ. ಸೌಲಭ್ಯಗಳ ಕೊರತೆ ಕಾಡುತ್ತಿದೆ. ಈ ಜನಾಂಗ ವಿಶ್ವಕರ್ಮರ ಚೈತನ್ಯ ಪಡೆದು ಸಂಘಟಿತ ಪ್ರಯತ್ನದ ಮೂಲಕ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ರವಿಚಂದ್ರಾಚಾರಿ, ಉಪ ಕಾರ್ಯದರ್ಶಿ ರಾಮಚಂದ್ರಾಚಾರಿ, ರಾಜಸ್ವ ನಿರೀಕ್ಷಕ ಮುನಿರೆಡ್ಡಿ ಇದ್ದರು.