ಹೊಸದಿಲ್ಲಿ: ಪರಿಶಿಷ್ಟಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ಉಲ್ಬಣ
ಹೊಸದಿಲ್ಲಿ: ಕಳೆದ ಮೂರು ವರ್ಷಗಳಲ್ಲಿ ಪರಿಶಿಷ್ಟ ಜಾತಿ/ಪಂಗಡಗಳ ಮಹಿಳೆಯರು ಹಾಗೂ ಮಕ್ಕಳ ವಿರುದ್ಧ ನಡೆದ ದೌರ್ಜನ್ಯ ಪ್ರಕರಣಗಳಲ್ಲಿ ಶೇ.15.55 ಹೆಚ್ಚಳವಾಗಿದೆಯೆಂದು ರಾಜ್ಯಸಭೆಯಲ್ಲಿ ಕಳೆದ ವಾರ ಮಂಡಿಸಿದ ವರದಿಯೊಂದು ಬಹಿರಂಗಪಡಿಸಿದೆ. ಇದೇ ಅವಧಿಯಲ್ಲಿ ದೌರ್ಜನ್ಯಗಳ ತಡೆ ಕಾಯ್ದೆಯಡಿ (ಪಿಒಎ) ಅಪರಾಧಿಗಳಿಗೆ ಶಿಕ್ಷೆಯಾದ ಪ್ರಮಾಣವು ತೀರಾ ಕಡಿಮೆಯಿದ್ದು ಶೇ.26.86 ಆಗಿದೆ ಹಾಗೂ ವಿಚಾರಣೆಗೆ ಬಾಕಿಯಿರುವ ಪ್ರಕರಣಗಳ ಸಂಖ್ಯೆ ಶೇ.84.09 ಆಗಿದೆ ಎಂದು ಆಂತರಿಕ ವ್ಯವಹಾರಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿ ಸಲ್ಲಿಸಿದ ವರದಿ ತಿಳಿಸಿದೆ.
ಅತ್ಯಾಚಾರ, ಲೈಂಗಿಕ ಕಿರುಕುಳ ಇತ್ಯಾದಿ ಪ್ರಕರಣಗಳನ್ನು ದಾಖಲಿಸುವಾಗ ಪಿಓಎ
2017ರಿಂದ 2019ರ ಮಧ್ಯದ ಅವಧಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆ) ಕಾಯ್ದೆಯಡಿ ದಾಖಲಾದ 1,31,430 ಅಪರಾಧ ಪ್ರಕರಣಗಳ ಪೈಕಿ ಶೇ.15.73ರಷ್ಟು ಪ್ರಕರಣಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಅಪರಾಧಗಳು ನಡೆದಿವೆ ಎಂದು ಸಮಿತಿಯ ದತ್ತಾಂಶಗಳು ತಿಳಿಸಿವೆ. |
ಕಾಯ್ದೆಯ ನಿಯಮಗಳನ್ನು ಸೇರ್ಪಡೆಗೊಳಿಸುವಂತೆ ಸಮಿತಿಯು ಕಾನೂನು ಜಾರಿ ಸಂಸ್ಥೆಗಳಿಗೆ ಶಿಫಾರಸು ಮಾಡಿದೆ.
ಕಾಂಗ್ರೆಸ್ ಸಂಸದ ಆನಂದ ಶರ್ಮಾ ಈ ಸಮಿತಿಯ ನೇತೃತ್ವ ವಹಿಸಿದ್ದರು.
“ಅತ್ಯಾಚಾರ, ಅತ್ಯಾಚಾರ ಯತ್ನ, ಮಾನಭಂಗದ ಉದ್ದೇಶದಿಂದ ಮಹಿಳೆಯರ ಮೇಲೆ ಹಲ್ಲೆ ಮಾನಹಾನಿ, ಅಪಹರಣ ಹಾಗೂ ಮದುವೆಯಾಗುವಂತೆ ಬಲವಂತ ಪಡಿಸಲು ವಶದಲ್ಲಿರಿಸಿಕೊಳ್ಳುವುದು ಇತ್ಯಾದಿ ಅಪರಾಧ ಪ್ರಕರಣಗಳು ಇದರಲ್ಲಿ ಒಳಗೊಂಡಿವೆ'' ಎಂದು ವರದಿ ತಿಳಿಸಿದೆ.
ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು 2017ರಲ್ಲಿ 6,321 ಆಗಿದ್ದರೆ, 2018ರಲ್ಲಿ 6,800ಕೇರಿದೆ ಹಾಗೂ 2019ರಲ್ಲಿ 7,485ನ್ನು ತಲುಪಿದೆ ಎಂದು ವರದಿ ತಿಳಿಸಿದೆ.
ಮಹಿಳೆಯರ ಮಾನಹಾನಿ ಹಾಗೂ ಅತ್ಯಾಚಾರಕ್ಕೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿಯೂ ಗಣನೀಯ ಹೆಚ್ಚಳವಾಗಿದೆ.
ದೌರ್ಜನ್ಯ ಉಲ್ಬಣ
ಮಹಿಳೆಯರ ಮಾನಹಾನಿಗೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆಯಲ್ಲಿ ಶೇ.16.25 ಏರಿಕೆಯಾಗಿದೆ ಹಾಗೂ ಅತ್ಯಾಚಾರ ಪ್ರಕರಣಗಳ ಸಂಖ್ಯೆಯಲ್ಲಿ ಶೇ.15.32 ಹೆಚ್ಚಳವಾಗಿದೆ. ಆದರೆ ವಿವಾಹಕ್ಕಾಗಿ ಬಲವಂತಪಡಿಸಲು ಮಹಿಳೆಯರನ್ನು ಅಪಹರಿಸುವ ಪ್ರಕರಣಗಳ ಸಂಖ್ಯೆಯಲ್ಲಿ ಶೇ.47.61ರಷ್ಟು ಕುಸಿತವಾಗಿದೆ.
ವಿಶೇಷ ನ್ಯಾಯಾಲಯಗಳಲ್ಲಿ ದಲಿತ ಮಹಿಳೆಯರು ಹಾಗೂ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳ ವಿಚಾರಣೆಗೆ ಬಾಕಿಯುಳಿದಿರುವ ಪ್ರಕರಣಗಳ ಸಂಖ್ಯೆಯು ಅತ್ಯಧಿಕವೆಂದು ಎನ್ಸಿಆರ್ಬಿ ದತ್ತಾಂಶ ವರದಿ ತಿಳಿಸಿದೆ. ಪರಿಶಿಷ್ಟ ಜಾತಿಯ ಮಹಿಳೆಯರು ಹಾಗೂ ಮಕ್ಕಳ ವಿರುದ್ದ ಹಿಂಸಾಚಾರ ಹೆಚ್ಚಲು, ಪ್ರಸಕ್ತ ಚಾಲ್ತಿಯಲ್ಲಿರುವ ಕಾನೂನುಗಳ ಕಳಪೆ ಅನುಷ್ಠಾನ ಹಾಗೂ ಕಾನೂನು ಜಾರಿ ಸಂಸ್ಥೆಗಳ ಪಕ್ಷಪಾತದ ವರ್ತನೆ ಕಾರಣವೆಂದು ವರದಿ ಬೆಟ್ಟು ಮಾಡಿದೆ.
ಇದಕ್ಕಿಂತಲೂ ಹೆಚ್ಚಾಗಿ ಇಂತಹ ಪ್ರಕರಣಗಳಲ್ಲಿ ಆರೋಪಿಗಳ ದೋಷಮುಕ್ತಿ ಅತ್ಯಧಿಕ ಪ್ರಮಾಣದಲ್ಲಿರುವುದು, ಪ್ರಬಲ ಹಾಗೂ ಪ್ರಭಾವಿ ಸಮುದಾಯಗಳಿಗೆ ತಮ್ಮ ಅಪರಾಧಗಳನ್ನು ಮುಂದುವರಿಸಲು ಆತ್ಮವಿಶ್ವಾಸ ನೀಡಿದೆ ಎಂದು ವರದಿ ಹೇಳಿದೆ.