ಹಾವೇರಿ: ಗೃಹಾಧಾರಿತ ಶಿಕ್ಷಣ ಪಡೆಯುವ ವಿಕಲಚೇತನ ಮಕ್ಕಳ ಮನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಹೆಚ್.ಪಾಟೀಲ್ ಅವರು ಶುಕ್ರವಾರ ಭೇಟಿ ನೀಡಿ ಪಾಲಕರಿಗೆ ಹಾಗೂ ಮಕ್ಕಳಿಗೆ ಕಾಳಜಿ ಮತ್ತು ಆರೋಗ್ಯ ವೃದ್ಧಿಯ ಬಗ್ಗೆ ಮಾರ್ಗದರ್ಶನ ನೀಡಿದರು.
ಈ ಮಕ್ಕಳು ವೈದ್ಯಕೀಯವಾಗಿ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಆಗಾಗ್ಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಲು ಸೂಚಿಸಿದರು. ತಾಲೂಕಿನ ಎಲ್ಲಾ ಮೇಲುಸ್ತುವಾರಿ ಅಧಿಕಾರಿಗಳು, ಮುಖ್ಯಶಿಕ್ಷಕರು, ಹಾಗೂ ಶಿಕ್ಷಕರು ಸುಮಾರು 228 ವಿಕಲಚೇತನ ಮಕ್ಕಳ ಮನೆ ಭೇಟಿ ನೀಡಿ ಮಾರ್ಗದರ್ಶನ ನೀಡಿದರು.
ಇದೇ ರೀತಿ ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಗುತ್ತಲ ಪಟ್ಟಣ ಪಂಚಾಯತಿಯ ವ್ಯಾಪ್ತಿಯ 16 ವಿಕಲಚೇತನ ಮಕ್ಕಳನ್ನು ಭೇಟಿ ನೀಡಿ, ಪಾಲಕರಿಗೆ ಹಾಗೂ ಮಕ್ಕಳಿಗೆ ದೈನಂದಿನ ಕೌಶಲ್ಯಗಳನ್ನು ಕಲಿಸುವುದು, ಸ್ವಚ್ಛತೆ ಬಗ್ಗೆ, ಎಸ್.ಓ.ಪಿ. ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಸುವುದು, ಸಾಮಾಜಿಕ ಅಂತರ ಕಾಪಾಡುವುದು, ವಿಕಲಚೇತನ ಮಕ್ಕಳು ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಸಾಮಾನ್ಯ ಮಕ್ಕಳಂತೆ ಭಾಗವಹಿಸಿ ಕಲಿಕೆಯಲ್ಲಿ ಆಸಕ್ತಿ ವಹಿಸುವುದು, ಮಕ್ಕಳಿಗೆ ಯಾವುದಾದರೂ ವಿಷಯದ ಬಗ್ಗೆ ಅರ್ಥವಾಗದಿದ್ದರೆ ತಮ್ಮ ತರಗತಿ ಶಿಕ್ಷಕರನ್ನು ಕೇಳಿ ಅರ್ಥೈಸಿಕೊಳ್ಳುವುದು, ಶಿಕ್ಷಕರು ಈ ಮಕ್ಕಳ ಕಲಿಕೆ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಹೀಗೆ ಹಲವು ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಕುರಿತು ಮಾರ್ಗದರ್ಶನ ನೀಡಿದರು.
ಹಾವೇರಿ ತಾಲೂಕಿನಲ್ಲಿ ಒಟ್ಟು 612 ವಿಕಲಚೇತನ ಮಕ್ಕಳಿದ್ದು, ಎಸ್.ಎ.ಟಿ.ಎಸ್.ನಲ್ಲಿ ದಾಖಲು ಮಾಡಲಾಗಿದೆ. ದೃಷ್ಠಿದೋಷ, ಪೂರ್ಣದೃಷ್ಠಿದೋಷ, ಮಾತಿನ ವಿಕಲತೆ, ದೈಹಿಕ ವಿಕಲತೆ, ಬುದ್ದಿ ಮಾಂದ್ಯತೆ, ಬಹುವಿಕಲತೆ, ಸೆರಬ್ರಲ್ ಪಾಲಿಸಿ, ಆಟಿಸಂ, ವಿಕಲತೆಯಿಂದ ಬಳಲುತ್ತಿದ್ದಾರೆ. ಈ ಮಕ್ಕಳಲ್ಲಿ 64ಮಕ್ಕಳು ಶಾಲೆಗೆ ಬರಲು ಆಗದೆ ಮನೆಯಲ್ಲಿ ಉಳಿದಿದ್ದು, ಗೃಹಾಧಾರಿತ ಶಿಕ್ಷಣ ಪಡೆಯುತ್ತಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ವಿಕಲಚೇತನ ಮಕ್ಕಳು ಶಾಲೆಗೆ ಬರಲು ಸಾಧ್ಯವಾಗದೇ ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಶಿಕ್ಷಣವನ್ನು ಪಡೆಯುತ್ತಾರೆ. ಈ ವಿಕಲಚೇತನ ಮಕ್ಕಳ ಶೈಕ್ಷಣಿಕ ಹಾಗೂ ವೈಧ್ಯಕೀಯ ಮಾರ್ಗದರ್ಶನವನ್ನು ಎಲ್ಲಾ ಮೇಲುಸ್ತುವಾರಿ ಅಧಿಕಾರಿಗಳು ವಿಕಲಚೇತನ ಮಕ್ಕಳ ಮನೆ-ಮನೆ ಭೇಟಿ ನೀಡಲಾಗುತ್ತಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ತಾಲೂಕಿನ ಎಲ್ಲಾ 32 ಮೇಲುಸ್ತುವಾರಿ ಅಧಿಕಾರಿಗಳಾದ ಕ್ಷೇತ್ರ ಸಮನ್ವಯಾಧಿಕಾರಿUಳು, ಇ.ಸಿ.ಓ.ಗಳು, ಬಿ.ಆರ್.ಪಿ.ಗಳು, ಬಿ.ಐ.ಇ.ಆರ್.ಟಿ.ಗಳು ಶುಕ್ರವಾರ ವಿಕಲಚೇತನ ಮಕ್ಕಳ ಮನೆಗೆ ಭೇಟಿ ಹಾಗೂ ಸ್ಥಳೀಯ ಶಾಲಾ ಶಿಕ್ಷಕರೊಂದಿಗೆ ಭೇಟಿ ಮಾಡಿ ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಸ್.ಭಗವಂತಗೌಡ್ರ ಅವರು ಉಪಸ್ಥಿತರಿದ್ದರು.