ಶ್ರೀನಗರ: ಭಾರತೀಯ ಸೇನಾ ವಾಹನವೊಂದು ರಸ್ತೆಯಿಂದ ಜಾರಿ ಲಡಾಖ್ನ ಶ್ಲೋಕ ನದಿಗುರುಳಿದ ಪರಿಣಾಮ ಕನಿಷ್ಠ 9 ಯೋಧರು ಮೃತಪಟ್ಟಿದ್ದು, ಇತರ ಹಲವರು ಗಾಯಗೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ ಸುಮಾರು 9:00 ಗಂಟೆಗೆ ಫೋಯ್ಸ ಪ್ರದೇಶದಿಂದ 25 ಕಿ.ಮೀ. ದೂರದಲ್ಲಿ ಈ ದುರ್ಘಟನೆ ನಡೆದಿದೆ. 26 ಸೇನಾ ಯೋಧರ ತಂಡವು ಪಾರ್ತಪುರದ ತಾತ್ಕಾಲಿಕ ಶಿಬಿರದಿಂದ ಸಬ್ ಸೆಕ್ಟರ್ ಹನೀಫ್ನಲ್ಲಿಯ ಮುಂಚೂಣಿ ನೆಲೆಗೆ ಪ್ರಯಾಣಿಸುತ್ತಿದ್ದಾಗ ವಾಹನವು ರಸ್ತೆಯಿಂದ ಜಾರಿ ಶ್ಲೋಕ ನದಿಗೆ ಬಿದ್ದಿದೆ. ವಾಹನದಲ್ಲಿದ್ದ ಎಲ್ಲ26 ಯೋಧರು ಗಾಯಗೊಂಡಿದ್ದು, ಅವರನ್ನು ಪಾರ್ತ ಪುರದಲ್ಲಿಯ ಸೇನೆಯ ಕ್ಷೇತ್ರ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಲೇಡ್ನಿಂದ ಶಸ್ತ್ರಚಿಕಿತ್ಸಾ ತಂಡಗಳನ್ನು ರವಾನಿಸಲಾಗಿದೆ. ಗಾಯಾಳುಗಳ ಪೈಕಿ 9 ಯೋಧರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ದುರಂತದಲ್ಲಿ ಇತರ ಕೆಲವು ಯೋಧರಿಗೂ ಗಂಭೀರ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಯೋಧರಿದ್ದ ವಾಹನವು ರಸ್ತೆಯಿಂದ ಜಾರಿ 50-60 ಅಡಿ ಆಳದಲ್ಲಿರುವ ನದಿಗೆ ಬಿದ್ದಿರುವುದಾಗಿ ಅವರು ಹೇಳಿದ್ದಾರೆ. ಗಾಯಾಳುಗಳನ್ನು ಆರಂಭದಲ್ಲಿ ಪಾರ್ತಪುರದಲ್ಲಿರುವ 403 ಫೀಲ್ಡ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಎಲ್ಲಾ 19 ಮಂದಿ ಗಾಯಾಳುಗಳನ್ನು ಸಿ-17 ಗ್ಲೋಬ್ ಮಾಸ್ಟರ್ ಹೆಲಿಕಾಪ್ಟರ್ ಮೂಲಕ ಹರ್ಯಾಣದಲ್ಲಿರುವ ಪಂಚಕುಲಾ ಜಿಲ್ಲೆಯಲ್ಲಿ ಚಂಡಿಮಂದಿರದ ಸೇನಾಸ್ಪತ್ರೆಗೆ ಕೊಂಡೊಯ್ಯಲಾಗಿದೆಯೆಂದವರು ಹೇಳಿದ್ದಾರೆ.