ಕೊರೊನಾ ಎದುರಿಸಲು ಲಸಿಕೆ ಅತಿ ಅವಶ್ಯಕ: ಮೋದಿ
ನವದೆಹಲಿ: ‘ಕೋವಿಡ್ ಬಳಿಕ ಜಗತ್ತು ಮೊದಲಿನಂತೆ ಇರುವುದಿಲ್ಲ. ಭವಿಷ್ಯದಲ್ಲಿ ನಡೆಯಲಿರುವ ಘಟನೆಗಳನ್ನು ಕೋವಿಡ್ ಪೂರ್ವ ಅಥವಾ ಕೋವಿಡ್ ನಂತರದ ಘಟನೆಗಳು ಎಂದು ನೆನಪಿಸಲಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದರು.
ಬುದ್ಧಪೂರ್ಣಿಮೆಯ ಅಂಗವಾಗಿ ಆಯೋಜಿಸಿದ್ದ ‘ವರ್ಚುವಲ್ ವೆಸಾಕ್ ಗ್ಲೋಬಲ್ ಸೆಲೆಬ್ರೇಷನ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ ವಿಶ್ವವು ಶತಮಾನಗಳಲ್ಲಿ ಈ ರೀತಿಯ ಸಾಂಕ್ರಾಮಿಕವನ್ನು ಕಂಡಿಲ್ಲ. ಆದರೆ, ಈಗ ಸಾಂಕ್ರಾಮಿಕದ ಬಗ್ಗೆ ಮೊದಲಿಗಿಂತ ಹೆಚ್ಚಿನ ತಿಳುವಳಿಕೆ ಇದೆ. ಕೊರೊನಾ ವಿರುದ್ಧದ ಹೋರಾಟ ಮತ್ತು ಜೀವಗಳನ್ನು ಉಳಿಸಲು ಲಸಿಕೆಯು ಬಹಳ ಮಹತ್ವದಾಗಿದೆ’ ಎಂದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ, ಸಾಂಕ್ರಾಮಿಕದಿಂದಾಗಿ ತಮ್ಮ ಹತ್ತಿರದವರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸಿದರು.