ಭಟ್ಕಳ: ಜಿಲ್ಲೆಯ ಬಹುತೇಕ ತಾಲೂಕುಗಳ ಜನರು ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದೇ ನೆರೆಯ ಉಡುಪಿ, ಮಂಗಳೂರು, ಗೋವಾ ರಾಜ್ಯದ ಆಸ್ಪತ್ರೆಗಳನ್ನೇ ಅವಲಂಬಿತರಾಗಿದ್ದಾರೆ. ಆದರೆ, ಸದ್ಯ ಲಾಕ್ಡೌನ್ ಇರುವ ಹಿನ್ನಲೆಯಲ್ಲಿ ಹೊರ ಜಿಲ್ಲೆ, ರಾಜ್ಯಗಳಿಗೆ ತೆರಳಲು ಸಾಧ್ಯವಾಗದೇ ಪರದಾಟ ನಡೆಸುವಂತಾಗಿದೆ.
ಗಡಿಯ ಬಗ್ಗೆ ಈಗಾಗಲೇ ಉಡುಪಿ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಉಡುಪಿ, ಮಂಗಳೂರಿಗೆ ತೆರಳುವವರಿಗೆ ಅವಕಾಶ ನೀಡಲಾಗುತ್ತದೆ. ಆದರೆ, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಹೊರ ಜಿಲ್ಲೆಯ ಆಸ್ಪತ್ರೆಗಳನ್ನು ನಮ್ಮ ಜಿಲ್ಲೆಯ ಹೆಚ್ಚು ಅವಲಂಬಸಿದ್ದಾರೆ. ನಮ್ಮ ಜಿಲ್ಲೆಯಲ್ಲೂ ಉತ್ತಮ ಆಸ್ಪತ್ರೆಗಳಿದ್ದು, ಇಲ್ಲೇ ಚಿಕಿತ್ಸೆ ಪಡೆಯಬಹುದು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಬೇರೆಡೆ ಹೋಗುವುದನ್ನು ಕಡಿಮೆ ಮಾಡಬೇಕು. -ಡಾ.ಕೆ.ಹರೀಶಕುಮಾರ್, ಜಿಲ್ಲಾಧಿಕಾರಿ |
ಕೊರೋನಾ ಕಡಿವಾಣಕ್ಕೆ ಉಡುಪಿ ಜಿಲ್ಲೆಯ ಗಡಿಗಳನ್ನು ಈಗಾಗಲೇ ಸೀಲ್ ಮಾಡಲಾಗಿದೆ. ಅಲ್ಲದೇ, ಗೋವಾ ಗಡಿಯನ್ನು ಸಹ ಬಂದ್ ಮಾಡಲಾಗಿದ್ದು, ಪ್ರತಿನಿತ್ಯ ರೈಲು, ಬಸ್ಸು, ಖಾಸಗಿ ವಾಹನಗಳ ಮೂಲಕ ಮಣಿಪಾಲ್, ಬಾಂಬೋಲಿಯಮ್ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ಚಿಕಿತ್ಸೆಗೆ ತೆರಳುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಜನರೀಗ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದ ಕಾರಣ ಬೇರೆ ಜಿಲ್ಲೆಗಳ ಆಸ್ಪತ್ರೆಯತ್ತ ಜಿಲ್ಲೆಯ ಜನರು ಮುಖ ಮಾಡುವುದು ಅನಿವಾರ್ಯವಾಗಿತ್ತು. ಸದ್ಯ ಮೆಡಿಕಲ್ ಎಮರ್ಜೆನ್ಸಿ ಎಂದು ಬೇರೆ ಜಿಲ್ಲೆ ಅಥವಾ ಗೋವಾಕ್ಕೆ ತೆರಳಬೇಕಾದರೆ ಜಿಲ್ಲಾಧಿಕಾರಿಗಳಿಂದ ಪಾಸ್ ಪಡೆದು ತೆರಳಬೇಕಾಗಿದೆ. ಪಾಸ್ ಪಡೆದು ತೆರಳಿದರೂ ಆಯಾ ಜಿಲ್ಲೆಯ ಗಡಿಯಲ್ಲಿ ಜನರನ್ನು ಒಳಗೆ ಬಿಟ್ಟುಕೊಳ್ಳಲು ಹಿಂದೇಟು ಹಾಕುತ್ತಿದ್ದು, ಚಿಕಿತ್ಸೆಗೆ ತೆರಳುತ್ತಿದ್ದವರು ಆಸ್ಪತ್ರೆಗೆ ಹೋಗಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಂಬ್ಯುಲೆನ್ಸ್ ಗಳಲ್ಲಿ ಬಂದರೆ ಮಾತ್ರ ಬಿಡುತ್ತೇವೆ ಎಂದು ತಗಾದೆ ಎತ್ತಿದ್ದಾರೆ.
ಇನ್ನು ಹೊರ ಜಿಲ್ಲೆಗಳಲ್ಲಿ, ಗೋವಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಕೆಲವರಿಗೆ ಔಷಧಿಗಳು ಜಿಲ್ಲೆಯಲ್ಲಿ ಸಿಗುತ್ತಿಲ್ಲ. ಅದಕ್ಕಾಗಿ ಅನಿವಾರ್ಯವಾಗಿ ಬೇರೆಡೆ ತೆರಳಬೇಕಾಗಿದೆ. ಆದರೆ, ಗಡಿಗಳನ್ನು ಬಂದ್ ಮಾಡಿರುವುದರಿಂದ ಔಷಧಿಯನ್ನು ಸಹ ತರಲು ಹೋಗಲಾಗದೇ ಜಿಲ್ಲೆಯ ಹಲವರು ಪರದಾಡುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇದ್ದು, ಎಲ್ಲಾ ರೀತಿಯ ಚಿಕಿತ್ಸೆ ಸಿಕ್ಕಿದ್ದರೆ ಬೇರೆ ಜಿಲ್ಲೆಗಳಿಗೆ ತೆರಳುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಜನರ ಸಮಸ್ಯೆ ಅರಿತಾದರೂ ಜನಪ್ರತಿನಿಧಿಗಳು ಶೀಘ್ರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಬೇಕು ಎನ್ನುವುದು ಜಿಲ್ಲೆಯ ಜನರ ಆಗ್ರಹವಾಗಿದೆ.
ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲೆಯ ಕೆಲ ಯುವಕರು ನಡೆಸಿದ್ದ #WeNeedEmergencyHospitalinUK ಅಭಿಯಾನ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡಿತ್ತು. ಆದರೆ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅಭಿಯಾನ ಕೂಡ ಅರ್ಧಕ್ಕೆ ನಿಂತಿದೆ. ಇದೇ ಅಭಿಯಾನವನ್ನು ಹಿಂಬಾಲಿಸಿದ್ದ ಕೊಡಗು ಜಿಲ್ಲೆಯಲ್ಲಿ ಸಂಸದ ಪ್ರತಾಪ ಸಿಂಹ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಕೇಂದ್ರದಿಂದ ಅನುದಾನ ಮಂಜೂರಿಸಿಕೊಂಡು ಬಂದಿದ್ದಾರೆ. ಆದರೆ, ಉತ್ತರ ಕನ್ನಡದ ಜನತೆ ಮಾತ್ರ ಇದೀಗ ಸುಸಜ್ಜಿತ ಆಸ್ಪತ್ರೆಯೂ ಇರದೆ, ಅವಲಂಬಿತ ಆಸ್ಪತ್ರೆಗಳಿಗೂ ತೆರಳಲಾಗದೆ ಸಂಕಷ್ಟ ಅನುಭವಿಸುವಂತಾಗಿದೆ.