ಕಾರವಾರ: ಭೂ ಪರಿವರ್ತನೆ ಕಡತ ಇತ್ಯರ್ಥಕ್ಕೆ ಕಾಲಮಿತಿ ನಿಗದಿಪಡಿಸಿ ಡಿಸಿ ಸುತ್ತೋಲೆ

Source: S O News Service | By I.G. Bhatkali | Published on 31st May 2019, 3:38 PM | Coastal News |

ಕಾರವಾರ: ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಲು ಇರುವ ಭೂ ಪರಿವರ್ತನಾ ವಿಧಾನವನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಜಾರಿಗೆ ತಂದಿರುವ ಅಫಿಡೆವಿಟ್ ಬೇಸ್ಡ್ ಕನ್ವರ್ಷನ್ ತಂತ್ರಾಂಶವನ್ನು ಸರಿಯಾಗಿ ಬಳಸಿ ಕಡತಗಳನ್ನು ಇತ್ಯರ್ಥಪಡಿಸಲು ಕಾಲಮಿತಿ ನಿಗದಿಪಡಿಸಿ ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ. ಎಲ್ಲ ಅನುಷ್ಠಾನಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಕರ್ನಾಟಕ ಭೂಕಂದಾಯ ಕಾಯ್ದೆ 1964 ಕಲಂ 95 ರಡಿ ಕಲ್ಪಿಸಲಾದ ಅವಕಾಶದಂತೆ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಲು ಇರುವ ಭೂ ಪರಿವರ್ತನಾ ವಿಧಾನವನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಅಸ್ತಿತ್ವಕ್ಕೆ ತಂದಿರುವ ಅಫಿಡೆವಿಟ್ ಬೇಸ್ಡ್ ಕನ್ವರ್ಷನ್ ಎಂಬ ತಂತ್ರಾಂಶವನ್ನು ಸರಿಯಾಗಿ ಬಳಸಬೇಕು ಹಾಗೂ ಅದು ಪರಿಣಾಮಕಾರಿಯಾಗಲು ನಿಗದಿತ ಕಾಲಮಿತಿ ಅಗತ್ಯ ಎಂದು ಸುತ್ತೋಲೆಯಲ್ಲಿ ಅವರು ಸೂಚಿಸಿದ್ದಾರೆ.

ಹೊಸ ಭೂಪರಿವರ್ತನೆ ತಂತ್ರಾಂಶ ಅನುಷ್ಠಾನಕ್ಕೆ ಬಂದು ಈಗಾಗಲೇ ಸುಮಾರು 3 ತಿಂಗಳು ಗತಿಸಿದೆ. ಅಲ್ಲದೇ ತಂತ್ರಾಂಶದ ಬಗ್ಗೆ ಇಲಾಖೆಗಳಿಗೆ ಸೂಕ್ತ ತರಬೇತಿ ಸಹ ನೀಡಲಾಗಿದೆ. ಅದಾಗ್ಯೂ ಸಹ ಹೊಸ ತಂತ್ರಾಂಶದಲ್ಲಿ ಕಂದಾಯ ಇಲಾಖೆಯ ಆಧೀನ ಕಚೇರಿಗಳು ಒಳಗೊಂಡಂತೆ ಯಾವುದೇ ಇಲಾಖೆಗಳು ಸರಿಯಾಗಿ ಸ್ಪಂದಿಸದೇ ಸಕಾಲದಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತಿರುವುದು ಕಂಡುಬರುತ್ತಿಲ್ಲ. ಇದರಿಂದ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣಗಳನ್ನು ಪರಿಶೀಲಿಸಿ ತ್ವರಿತವಾಗಿ ಇತ್ಯರ್ಥಪಡಿಸಲು ಸಾಧ್ಯವಾಗದೇ ಸಾರ್ವಜನಿಕರಿಗೆ ತೀವ್ರ ಅನಾನುಕೂಲವಾಗುತ್ತಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಹೊಸ ವ್ಯವಸ್ಥೆಯಲ್ಲಿ ಕಂದಾಯ, ಅರಣ್ಯ, ನಗರಾಭಿವೃದ್ದಿ, ಪಂಚಾಯತ, ಪುರಸಭೆ/ಪಟ್ಟಣ ಪಂಚಾಯತ/ನಗರಸಭೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕರಾವಳಿ ನಿಯಂತ್ರಣ ವಲಯ, ಲೋಕೋಪಯೋಗಿ, ಭೂಸ್ವಾಧೀನಾಧಿಕಾರಿ, ನಗರ ಮತ್ತು ಗ್ರಾಮಾಂತರ ಯೋಜನೆ ಪ್ರಾಧಿಕಾರ ಹೀಗೆ ವಿವಿಧ ಇಲಾಖೆಗಳ ಅಭಿಪ್ರಾಯ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಸದರಿ ತಂತ್ರಾಂಶದ ಬಗ್ಗೆ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ತರಬೇತಿ ಸಹ ನೀಡಲಾಗಿದೆ. ಆದಾಗ್ಯೂ ಸಮರ್ಪಕವಾಗಿ ಪ್ರಕರಣಗಳು ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳಿಗೂ ಕಾಲಮಿತಿ ನಿಗದಿಪಡಿಸಿ ಮಾರ್ಗಸೂಚಿಸಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅದರಂತೆ ಕಂದಾಯ ಇಲಾಖೆಯಲ್ಲಿ ತಹಸೀಲ್ದಾರರ ಕಚೇರಿಯಲ್ಲಿ ಹೊಸ ತಂತ್ರಾಂಶದಲ್ಲಿ ಕೋರಿಕೆ ದಾಖಲಾದ ತಕ್ಷಣ ಭೂ ಪರಿವರ್ತನೆ ವಿಷಯ ನಿರ್ವಾಹಕರು ಕೋರಿಕೆಯನ್ನು ವಿಚಾರಣೆಗಾಗಿ 3 ದಿನದೊಳಗಾಗಿ ಕಂದಾಯ ನಿರೀಕ್ಷಕರಿಗೆ ವರ್ಗಾಯಿಸತಕ್ಕದ್ದು, ಕಂದಾಯ ನಿರೀಕ್ಷಕರು 4 ದಿನದೊಳಗಾಗಿ ಸ್ಥಾನಿಕ ವಿಚಾರಣೆಯಿಂದ ವರದಿಯನ್ನು ತಹಶೀಲ್ದಾರರಿಗೆ ಸಲ್ಲ್ಲಿಸತಕ್ಕದ್ದು.  ತಹಶೀಲ್ದಾರರು 1 ವಾರದೊಳಗಾಗಿ ಕ್ರಮಬದ್ಧವಾದ ಪ್ರಸ್ತಾವನೆಯನ್ನು ಭೌತಿಕವಾಗಿ ಮತ್ತು ತಂತ್ರಾಂಶದ ಮೂಲಕ ಸಹಾಯಕ ಆಯುಕ್ತರಿಗೆ ವರ್ಗಾಯಿಸತಕ್ಕದ್ದು. 

ಸಹಾಯಕ ಆಯುಕ್ತರ ಕಚೇಯಲ್ಲಿ ತಹಶೀಲ್ದಾರರಿಂದ ಭೌತಿಕವಾಗಿ ಪ್ರಕರಣಗಳನ್ನು ಸ್ವೀಕರಿಸಿದ 1 ವಾರದೊಳಗಾಗಿ ಸಹಾಯಕ ಆಯುಕ್ತರು ತಮ್ಮ ಅಭಿಪ್ರಾಯವನ್ನು ತಂತ್ರಾಂಶದಲ್ಲಿ ದಾಖಲಿಸುವುದಲ್ಲದೇ ಕಡತವನ್ನು ಭೌತಿಕವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸತಕ್ಕದ್ದು. 

ನಗರ ಮತ್ತು ಗ್ರಾಮೀಣ ಯೋಜನಾ ಇಲಾಖೆಯಲ್ಲಿ ಅಗತ್ಯ ದಾSಲೆಗಳು ಪೂರೈಸಿಲ್ಲದ ನಿಮಿತ್ತ ತಿರಸ್ಕರಿಸಿದೆ ಎಂಬ ಅಭಿಪ್ರಾಯವನ್ನು ನಗರಾಭಿವೃದ್ದಿ ಮತ್ತು ನಗರ/ಗ್ರಾಮೀಣ ಯೋಜನಾ ಇಲಾಖೆಗಳು ದಾಖಲಿಸುತ್ತಿರುವುದು ಕಂಡುಬಂದಿದ್ದು ವಾಸ್ತವಿಕವಾಗಿ ಅನುಮೋದಿತ ಸಿಡಿಪಿ/ಓಡಿಪಿ ಆಧರಿಸಿ ಯೋಜನಾ ಇಲಾಖೆಗಳು ಅಭಿಪ್ರಾಯಗಳನ್ನು ದಾಖಲಿಸತಕ್ಕದ್ದು. ಅಲ್ಲದೇ ಸರ್ಕಾರದ ಸೂಚನೆಯ ಪ್ರಕಾರ ಪಹಣಿ ಪತ್ರಿಕೆ ಅಥವಾ ನಕಾಶೆ ಅಥವಾ ಮ್ಯುಟೇಶನ ಎಂಟ್ರಿಗಳ ಅಗತ್ಯತೆ ಇದ್ದಲ್ಲಿ ಅದನ್ನು landrecord.Karnataka.gov.in  ವೆಬ್ ಸೈಟ್‍ನಿಂದ ಪಡೆದುಕೊಳ್ಳಬಹುದಾಗಿದೆ. ಆದ್ದರಿಂದ ಇನ್ನು ಮುಂದೆ ಯೋಜನಾ ಇಲಾಖೆಗಳ ಸ್ಪಷ್ಟ ಅಭಿಪ್ರಾಯ 25 ದಿನದೊಳಗಾಗಿ ಹೊಸ ತಂತ್ರಾಂಶದಲ್ಲಿ ಅಳವಡಿಸಲು ಈ ಮೂಲಕ ಸೂಚಿಸಿದೆ. ತಪ್ಪಿದ್ದಲ್ಲಿ, ಭೂಪರಿವರ್ತನೆಗೆ ಇಲಾಖೆಯಿಂದ ಯಾವುದೇ ಆಕ್ಷೇಪಣೆ ಇಲ್ಲವೆಂದು ಪರಿಭಾವಿಸಿ ನಿಯಮನುಸಾರ ಮುಂದಿನ ಕ್ರಮ ಜರುಗಿಸಲಾಗುವುದು.

ಕರಾವಳಿ ನಿಯಂತ್ರಣ ವಲಯ: ಕರಾವಳಿ ತಾಲ್ಲೂಕುಗಳಿಗೆ ಮತ್ತು ನದಿಯ ದಂಡೆಯ ಮೇಲೆ ನೆಲಸಿದ ಜಮೀನುಗಳಿಗೆ ಸಂಬಂಧಿಸಿದಂತೆ ಕರಾವಳಿ ನಿಯಂತ್ರಣ ವಲಯದ ಅಭಿಪ್ರಾಯ ತೀರಾ ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಭೂಪರಿವರ್ತನೆಗೆ ಕೋರಿದ ಜಮೀನು ಕರಾವಳಿ ನಿಯಂತ್ರಣ ವಲಯದ ಯಾವ ವಲಯದಲ್ಲಿ ಬರುತ್ತದೆ ಮತ್ತು ಅಲ್ಲಿ ಭೂಪರಿವರ್ತನೆಗೆ ಕೋರಿದ ಉದ್ದೇಶದನ್ವಯ ಜಮೀನು ಅಭಿವೃದ್ದಿಪಡಿಸಬಹುದೇ? ಎನ್ನುವ ವಿಷಯದಲ್ಲಿ ಪ್ರಾದೇಶಿಕ ನಿರ್ದೇಶಕರು (ಪರಿಸರ) ನಿಖರವಾದ ಅಭಿಪ್ರಾಯವನ್ನು 25 ದಿನದೊಳಗಾಗಿ ತಂತ್ರಾಂಶದಲ್ಲಿ ಅಳವಡಿಸತಕ್ಕದ್ದು. ಕರಾವಳಿ ನಿಯಂತ್ರಣ ವಲಯದ ವ್ಯಾಪ್ತಿಯಲ್ಲಿ ಭೂಪರಿವರ್ತನೆಗೆ ಅವಕಾಶ ನೀಡುವ ಕುರಿತು ಕೇವಲ ನಿಯಮಾವಳಿಗಳನ್ನು ಉಲ್ಲೇಖಿಸದೇ ಭೂಪರಿವರ್ತನೆಯ ಕೋರಿಕೆಯ ಕುರಿತು ಇಲಾಖೆಯ ಸ್ಪಷ್ಟ ಹಾಗೂ ನಿಖರ ಅಭಿಪ್ರಾಯ ದಾಖಲಿಸಬೇಕು. ನಿಗದಿತ ಅವಧಿಯಲ್ಲಿ ಅಭಿಪ್ರಾಯ ನೀಡದೇ ಇದ್ದಲ್ಲಿ ಇಲಾಖೆಯಿಂದ ಯಾವುದೇ ಆಕ್ಷೇಪಣೆ ಇಲ್ಲವೆಂದು ಪರಿಭಾವಿಸಿ ನಿಯಮನುಸಾರ ಮುಂದಿನ ಕ್ರಮ ಜರುಗಿಸಲಾಗುವುದು.
    ಇತರೆ ಇಲಾಖೆಗಳು ಈಗಾಗಲೇ ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ಸೂಚಿಸಿದಂತೆ ಇತರೆ ಇಲಾಖೆಗಳು ಸಹ ಭೂಪರಿವರ್ತನಾ ಕೋರಿಕೆಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯವನ್ನು 25 ದಿನದೊಳಗಾಗಿ ತಂತ್ರಾಂಶದಲ್ಲಿ ಅಳವಡಿಸತಕ್ಕದ್ದು. 

ಪಂಚಾಯತ, ಪುರಸಭೆ/ಪಟ್ಟಣ ಪಂಚಾಯತ/ನಗರಸಭೆ:  ಸ್ಥಳೀಯ ಸಂಸ್ಥೆಗಳು ಭೂ ಪರಿವರ್ತನೆಗೆ ಕೋರಿದ ಜಮೀನಿಗೆ ತೆರಳಲು ಅಧಿಕೃತ ರಸ್ತೆ/ಚರಂಡಿ ಸೌಲಭ್ಯ ಇದೆಯೇ ಎಂಬುವುದನ್ನು ಖಚಿತಪಡಿಸಿ ಅಭಿಪ್ರಾಯವನ್ನು 25 ದಿನದೊಳಗಾಗಿ ತಂತ್ರಾಂಶದಲ್ಲಿ ಅಳವಡಿಸತಕ್ಕದ್ದು. ತಪ್ಪಿದ್ದಲ್ಲಿ, ಭೂಪರಿವರ್ತನಾ ಕೋರಿಕೆಗೆ ಸ್ಥಳೀಯ ಸಂಸ್ಥೆಗಳ ಯಾವುದೇ ಆಕ್ಷೇಪಣೆ ಇಲ್ಲವೆಂದು ಪರಿಭಾವಿಸಲಾಗುವುದು.

ಜಿಲ್ಲಾಧಿಕಾರಿಗಳ ಕಚೇರಿ: ಭೂಪರಿವರ್ತನೆ ವಿಷಯ ನಿರ್ವಾಹಕರು ಮತ್ತು ಶಿರಸ್ತೇದಾರರು ಎಲ್ಲಾ ಕೋರಿಕೆಗಳನ್ನು ಪರಿಶೀಲಿಸಿ 3 ದಿನದೊಳಗಾಗಿ ತಂತ್ರಾಂಶದಲ್ಲಿ ಅಭಿಪ್ರಾಯವನ್ನು ಅಳವಡಿಸಿ ಭೌತಿಕ ಕಡತವನ್ನು ಅಪರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸತಕ್ಕದ್ದು. ಅಪರ ಜಿಲ್ಲಾಧಿಕಾರಿಗಳಿಗೆ ಅಭಿಪ್ರಾಯವನ್ನು ದಾಖಲಿಸಲು ತಂತ್ರಾಂಶದಲ್ಲಿ 1 ತಿಂಗಳ ಕಾಲಾವಕಾಶ ಮಾತ್ರ ಇರುತ್ತದೆ. ಈ 1 ತಿಂಗಳ ಅವಧಿಯು ಭೂಪರಿವರ್ತನಾ ಕೋರಿಕೆ ಸೃಜಿಸಿದ ದಿನಾಂಕದಿಂದ ಆರಂಭಗೊಳ್ಳುತ್ತದೆ. ಆದ್ದರಿಂದ ನಿಗಧಿತ ಅವಧಿಯಲ್ಲಿ ಅಭಿಪ್ರಾಯವನ್ನು ದಾಖಲಿಸಲು ಅಪರ ಜಿಲ್ಲಾಧಿಕಾರಿಗಳು ವೈಯಕ್ತಿಕ ಗಮನ ಹರಿಸತಕ್ಕದ್ದು. 

ಪ್ರಸ್ತುತ ತಂತ್ರಾಂಶದಲ್ಲಿ ಪ್ರತಿಯೊಂದು ಹಂತಕ್ಕೆ ಕಾಲಮಿತಿಯನ್ನು ನಿಗಧಿಪಡಿಸಿರುವುದರಿಂದ ಮತ್ತು ಕೋರಿಕೆಗಳನ್ನು 60 ದಿನದೊಳಗಾಗಿ ಇತ್ಯರ್ಥಪಡಿಸಬೇಕಾಗಿರುವುದರಿಂದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ಮರು ವಿಚಾರಣೆಗೆ ಆಸ್ಪದ ನೀಡದಂತೆ ಪ್ರಕರಣಗಳನ್ನು ಪರಿಶೀಲಿಸಿ ಅಭಿಪ್ರಾಯವನ್ನು ವ್ಯಕ್ತಪಡಿಸತಕ್ಕದ್ದು. ನಿಗದಿತ ಅವಧಿಯೊಳಗೆ ಸಂಬಂಧಿತ ಇಲಾಖೆಯು ಅಭಿಪ್ರಾಯ ನೀಡುವುದು ಕಡ್ಡಾಯವಾಗಿದ್ದು, ತಪ್ಪಿದ್ದಲ್ಲಿ ಮುಂದಿನ ಎಲ್ಲಾ ಆಗುಹೋಗುಗಳಿಗೆ ಸಂಬಂಧಿತ ಅಧಿಕಾರಿಯನ್ನೇ ವೈಯುಕ್ತಿಕ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಯವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...