ಭಟ್ಕಳ: ಸಾರ್ವಜನಿಕರು ಹೊತ್ತು ತರುವ ಸಮಸ್ಯೆಗಳಿಗೆ ಲೋಕಾಯುಕ್ತ ಕಾಯ್ದೆಯಡಿ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಲೋಕಾಯುಕ್ತ ಡಿವಾಯ್ಎಸ್ಪಿ ಅರವಿಂದ ಕಲಗುಜ್ಜಿ ಹೇಳಿದರು.
ಯಾವುದೇ ಇಲಾಖೆಯ ಅಧಿಕಾರಿಗಳಿರಲಿ, ಶಿಫಾರಸ್ಸು ಅಥವಾ ಹಣವನ್ನು ಆಧರಿಸಿ ಕೆಲಸ ಮಾಡುವಂತಿಲ್ಲ. ಸಾರ್ವಜನಿಕರ ಅರ್ಜಿಗೆ ನಿಗದಿತ ಕಾಲಾವಧಿಯೊಳಗೆ ಸ್ಪಂದಿಸಬೇಕು. ಜನರ ಪ್ರಶ್ನೆಗೆ ಉತ್ತರ ದೊರಕಿಸಿಕೊಡುವುದನ್ನು ಬಿಟ್ಟು ಸುಳ್ಳು ಹೇಳಿ ಕಾಲ ತಳ್ಳುವಂತಿಲ್ಲ. |
ಅವರು ಸೋಮವಾರ ತಾಲೂಕು ಪಂಚಾಯತ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಲೋಕಾಯುಕ್ತ ಸಾರ್ವಜನಿಕ ಕುಂದು ಕೊರತೆಗಳ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದರು. ಯಾವುದೇ ಇಲಾಖೆಯ ಅಧಿಕಾರಿಗಳಿರಲಿ, ಶಿಫಾರಸ್ಸು ಅಥವಾ ಹಣವನ್ನು ಆಧರಿಸಿ ಕೆಲಸ ಮಾಡುವಂತಿಲ್ಲ. ಸಾರ್ವಜನಿಕರ ಅರ್ಜಿಗೆ ನಿಗದಿತ ಕಾಲಾವಧಿಯೊಳಗೆ ಸ್ಪಂದಿಸಬೇಕು. ಜನರ ಪ್ರಶ್ನೆಗೆ ಉತ್ತರ ದೊರಕಿಸಿಕೊಡುವುದನ್ನು ಬಿಟ್ಟು ಸುಳ್ಳು ಹೇಳಿ ಕಾಲ ತಳ್ಳುವಂತಿಲ್ಲ. ಜನರ ಅರ್ಜಿಗೆ ಕನಿಷ್ಠ ಹಿಂಬರಹವನ್ನಾದರೂ ನೀಡಬೇಕು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಪಟ್ಟಿ ನಮ್ಮ ಬಳಿ ಇದೆ. ಕಾನೂನು ಬಾಹೀರ ಕೆಲಸವನ್ನು ದೂರ ಇಡಿ ಎಂದು ಸೂಚಿಸಿದರು.
ಇದಕ್ಕೂ ಪೂರ್ವದಲ್ಲಿ ಮಾವಳ್ಳಿ-1 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ 2 ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿಗಳು ಆದೇಶ ನೀಡಿದ್ದರೂ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಮಾವಳ್ಳಿ-1 ರ ಗ್ರಾಮ ಪಂಚಾಯತ ಸದಸ್ಯ ಜಯಂತ ನಾಯ್ಕ ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಪ್ರತಿಯಾಗಿ ಕಟ್ಟಡಕ್ಕೆ ನೀಡಲಾದ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಪಂಚಾಯತದಿಂದ ಹೆಸ್ಕಾಂಗೆ ಪತ್ರ ಬರೆದಿರುವುದಾಗಿ ಪಂಚಾಯತ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಹೆಸ್ಕಾಂ ಅಭಿಯಂತರ ಮಂಜುನಾಥ, ಈ ಹಿಂದೆ ಪಂಚಾಯತ ವತಿಯಿಂದ ನಿರಪೇಕ್ಷಣಾ ಪತ್ರವನ್ನು ನೀಡಲಾಗಿದ್ದು, ಈಗ ವಿದ್ಯುತ್ ಕಡಿತಗೊಳಿಸಿ ಎಂದರೆ ಸಾಧ್ಯವಿಲ್ಲ. ಮೊದಲು ನಿರಪೇಕ್ಷಣಾ ಪತ್ರವನ್ನು ರದ್ದುಪಡಿಸಿ ಆದೇಶ ನೀಡುವಂತೆ ತಿಳಿಸಿದರು. ಮುಂದಿನ 15 ದಿನಗಳ ಒಳಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವಂತೆ ಲೋಕಾಯುಕ್ತ ಡಿವಾಯ್ಎಸ್ಪಿ ಅರವಿಂದ ಪಂಚಾಯತ ಮತ್ತು ಹೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದರು. ತಾಲೂಕಿನ ಯಲ್ವಡಿಕವೂರು ಗ್ರಾಮ ಪಂಚಾಯತ ಹೆರೂರುನಲ್ಲಿ ಪಂಚಾಯತ ಅಧಿಕಾರಿಗಳು ಕಾಲುಸಂಕವನ್ನು ತೆರವುಗೊಳಿಸಿದ್ದಾರೆ. ಪುನರ್ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ್ದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಲೋಕಾಯುಕ್ತ ಅಧಿಕಾರಿಗಳಿಂದ ನಮಗೆ ನ್ಯಾಯ ಒದಗಿಸಿಕೊಡುವಂತೆ ಅಲ್ಲಿನ ನಿವಾಸಿ ನಾಗೇಂದ್ರ ನಾಯ್ಕ ಆಗ್ರಹಿಸಿದರು. ಭಟ್ಕಳದಲ್ಲಿ ನಿರ್ಮಿಸಲಾಗುತ್ತಿರುವ ಸರಕಾರಿ ಬಸ್ ನಿಲ್ದಾಣ ಹಾಗೂ ಇಂದಿರಾ ಕ್ಯಾಂಟಿನ್ ನಿಗದಿತ ಅವಧಿಯೊಳಗೆ ಪೂರ್ಣಗೊಂಡಿಲ್ಲ ಎಂದು ಸಾರ್ವಜನಿಕರ ಪರವಾಗಿ ಅರ್ಜಿ ಸಲ್ಲಿಸಲಾಯಿತು. ಲೋಕಾಯುಕ್ತ ಸಿಪಿಐ ಮಂಜುನಾಥ, ತಹಸೀಲ್ದಾರ ವಿ.ಪಿ.ಕೊಟ್ರಳ್ಳಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀನಾರಾಯಣ ಸ್ವಾಮಿ ಉಪಸ್ಥಿತರಿದ್ದರು.
----------------------------------------------------------------------------------------------------------