ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ವಸತಿ ಶಾಲೆಗಳನ್ನು ಕ್ವಾರಂಟೀನ್(ಸುರಕ್ಷಿತ ವಲಯ)ಗಳನ್ನಾಗಿ ಬಳಕೆ ಮಾಡಿಕೊಳ್ಳುವಂತೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ತಿಳಿಸಿದ್ದಾರೆ.
ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಈಗಾಗಲೇ ಬೇಸಿಗೆ ರಜೆಯನ್ನು ಘೋಷಣೆ ಮಾಡಿದ್ದು, ಪ್ರಸ್ತುತವಾಗಿ ಯಾವ ವಿದ್ಯಾರ್ಥಿಗಳೂ ವಸತಿ ಶಾಲೆಗಳಲ್ಲಿ ಇರುವುದಿಲ್ಲ. ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿರುವ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳು ವಿಶಾಲವಾದ ಸ್ಥಳದಲ್ಲಿ ಸುಸಜ್ಜಿತವಾಗಿದ್ದು, ಪ್ರತ್ಯೇಕ ಕೊಠಡಿಗಳು, ಅಡುಗೆ ಮನೆ, ಶೌಚಾಲಯ, ಸ್ನಾನಗೃಹ, ವಾಚನಾಲಯ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿವೆ. ಈ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳು ಜನಸಂದಣಿಯಿಂದ ದೂರ ಪ್ರದೇಶಗಳಲ್ಲಿವೆ. ಅಗತ್ಯ ಇರುವ ಸಮೀಪದ ಪ್ರದೇಶಗಳಲ್ಲಿ ಯಾವುದೇ ವೆಚ್ಚವಿಲ್ಲದೇ ಕ್ವಾರಂಟೀನ್ ಗಳನ್ನಾಗಿ ಪರಿವರ್ತಿಸಬಹುದಾಗಿದೆ. ಜಿಲ್ಲಾಡಳಿತವು ಈ ವಸತಿ ಶಾಲೆಗಳನ್ನು ಮುಕ್ತವಾಗಿ ಬಳಕೆ ಮಾಡುವಂತೆ ಉಪಮುಖ್ಯಮಂತ್ರಿಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.