ಮುಂದಿನ 1 ವಾರದ ಒಳಗೆ ಅಂಡರ್ಪಾಸ್ ಸಂಬಂಧ ನಿರ್ಣಯ ಕೈಗೊಳ್ಳದೇ ಇದ್ದರೆ ಹೆದ್ದಾರಿ ತಡೆದು ಪ್ರತಿಭಟನೆ:ಭಟ್ಕಳದಲ್ಲಿ ಬೆಂಗ್ರೆ, ಕೈಕಿಣಿ ಭಾಗದ ಮುಖಂಡರಿಂದ ಎಚ್ಚರಿಕೆ
ಭಟ್ಕಳ: ತಾಲೂಕಿನ ಕೈಕಿಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಸ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಅಂಡರ್ಪಾಸ್ ನಿರ್ಮಿಸುವ ಸಂಬಂಧ ಮುಂದಿನ 1 ವಾರದ ಒಳಗೆ ಅಗತ್ಯ ಕ್ರಮ ಕೈಗೊಳ್ಳದೇ ಇದ್ದರೆ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸುತ್ತೇವೆ ಎಂದು ಆ ಭಾಗದ ಮುಖಂಡರು ಎಚ್ಚರಿಸಿದ್ದಾರೆ.
ಈ ಸಂಬಂಧ ಭಟ್ಕಳ ಸಹಾಯಕ ಆಯುಕ್ತ ಭರತ್ ಇವರಿಗೆ ಮನವಿ ಸಲ್ಲಿಸಲಾಯಿತು. ರಾಷ್ಟ್ರೀಯ ಹೆದ್ದಾರಿಯ ಪೂರ್ವ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಕೈಕಿಣಿ ಗ್ರಾಮ ಪಂಚಾಯತ ಹೆಚ್ಚಿನ ಭೂ ಪ್ರದೇಶ ಇದ್ದು, ನಿತ್ಯದ ಕೆಲಸ ಕಾರ್ಯಗಳು, ಕೃಷಿ ಚಟುವಟಿಕೆಗಳಿಗಾಗಿ ಹೆದ್ದಾರಿಯನ್ನು ದಾಟಲೇ ಬೇಕಾದ ಅನಿವಾರ್ಯತೆ ಇದೆ. ಹೆದ್ದಾರಿಯ ಇಕ್ಕೆಲಗಳಲ್ಲಿಯೇ ಶಾಲೆಗಳಿದ್ದು, ವಿದ್ಯಾರ್ಥಿಗಳೂ ಹೆದ್ದಾರಿಯಲ್ಲಿ ಓಡಾಡಬೇಕಾಗಿದೆ. ಇಲ್ಲಿನ ಜನರ ಅಗತ್ಯವನ್ನು ಪರಿಗಣಿಸಿ ಈ ಹಿಂದೆಯೇ ತಾಲೂಕು ಪಂಚಾಯತ ಹಾಗೂ ಗ್ರಾಮ ಪಂಚಾಯತಗಳಿಂದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ, ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಿ ಕಾಮಗಾರಿಯನ್ನು ಅನುಷ್ಠಾನಗೊಳಿಸುತ್ತಿರುವುದು ಯಾವುದೇ ರೀತಿಯಿಂದ ಸಮಂಜಸವಲ್ಲ. ಆದ್ದರಿಂದ ಸಹಾಯಕ ಆಯುಕ್ತರು ಸಮಸ್ಯೆಯನ್ನು ಗಂಬೀರವಾಗಿ ಪರಿಗಣಿಸಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಅಭಿಯಂತರರನ್ನು ಸ್ಥಳಕ್ಕೆ ಕರೆಯಿಸಿ, ಇಲ್ಲಿನ ಜನರ ಬೇಡಿಕೆಯ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು, ಇಲ್ಲದೇ ಹೋದರೆ ರಸ್ತೆ ತಡೆದು ಪ್ರತಿಭಟನೆಯನ್ನು ನಡೆಸುವುದು ಅನಿವಾರ್ಯ ಎಂದು ಮುಖಂಡರು ಎಚ್ಚರಿಸಿದರು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಈಶ್ವರ ನಾಯ್ಕ, ಜಿಪಂ ಸದಸ್ಯೆ ಸಿಂಧೂ ಭಾಸ್ಕರ ನಾಯ್ಕ, ತಾಪಂ ಸದಸ್ಯ ವಿಷ್ಣು ದೇವಡಿಗ, ಕೊಪ್ಪ ಗ್ರಾಪಂ ನೂತನ ಸದಸ್ಯ ರಾಜು ನಾಯ್ಕ, ಕೈಕಿಣಿ ಗ್ರಾಪಂ ನೂತನ ಸದಸ್ಯ ಭಾಸ್ಕರ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.