ಉಕ್ರೇನ್: ದಾಳಿಗೆ ರಾಜ್ಯದ ವಿದ್ಯಾರ್ಥಿ ಬಲಿ; ಹಾವೇರಿ ಜಿಲ್ಲೆಯ ನವೀನ್ ಮೃತ ವಿದ್ಯಾರ್ಥಿ, ಖಾರ್ಕಿವ್ ನಗರದಲ್ಲಿ ರಶ್ಯ ಸೇನೆಯಿಂದ ಶೆಲ್ ದಾಳಿ
ಹೊಸದಿಲ್ಲಿ: ಭೀಕರ ಯುದ್ಧಕ್ಕೆ ಸಾಕ್ಷಿಯಾಗಿರುವ ಉಕ್ರೇನ್ನ ಖಾರ್ಕಿವ್ ನಗರದಲ್ಲಿ ಸೋಮವಾರ ಬೆಳಗ್ಗೆ ರಶ್ಯದ ಸೇನೆ ನಡೆಸಿದ ಶೆಲ್ ದಾಳಿಯಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯ ವಿದ್ಯಾರ್ಥಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತ ವಿದ್ಯಾರ್ಥಿಯನ್ನು ನವೀನ್ ಗ್ಯಾನಗೌಡರ್ (21) ಎಂದು ಗುರುತಿಸಲಾಗಿದೆ.
ಅವರು ಉಕ್ರೇನ್ನಲ್ಲಿ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು. ರಶ್ಯದ ಯೋಧರು ಸರಕಾರಿ ಕಟ್ಟಡವನ್ನು ಸ್ಫೋಟಿಸಿದ ಸಂದರ್ಭದಲ್ಲಿ ನವೀನ ಮೃತಪಟ್ಟಿದ್ದಾರೆಂದು ಮೂಲಗಳು ತಿಳಿಸಿವೆ. ನವೀನ್ ಅವರು ಉಕ್ರೇನ್ನ ಎರಡನೇ ಅತಿ ದೊಡ್ಡ ನಗರವಾದ ಖಾರ್ಕಿವ್ ಗವರ್ನರ್ ಭವನದ ಸಮೀಪದ ಕಟ್ಟಡದಲ್ಲಿ ವಾಸಿಸುತ್ತಿದ್ದರು. ರಶ್ಯ ಸೇನೆ ಶೆಲ್ ದಾಳಿ ನಡೆಸಿದ ಸಂದರ್ಭ ಅವರು ಪಡಿತರ ಆಹಾರಕ್ಕಾಗಿ ಸರತಿ ಸಾಲಿನಲ್ಲಿ ನಿಂತುಕೊಂಡಿದ್ದರು. ಆಗ ರಷ್ಯದ ಪಡೆಗಳು ಹಠಾತ್ತನೆ ಗವರ್ನರ್ ಭವನದ ಮೇಲೆ ಶೆಲ್ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ನವೀನ್ ಸಾವನಪಿದ್ದರು' ಎಂದು ಖಾರ್ಕಿವ್ ನಗರದ ವಿದ್ಯಾರ್ಥಿ ಸಮನ್ವಯಗಾರ್ತಿ ಪೂಜಾ ಪ್ರಹರಾಜ್ ತಿಳಿಸಿದ್ದಾರೆ.
ಉಕ್ರೇನ್ನ ಮಹಿಳೆಯೊಬ್ಬರು ಅಲ್ಲಿಯೇ ಬಿದ್ದಿದ್ದ ನವೀನ್ ಅವರ ಫೋನನ್ನು ತೆಗೆದುಕೊಂಡು ಅದರಲ್ಲಿ ತನಗೆ ಕರೆ ಮಾಡಿದ್ದರು. ನವೀನ್ ಮೃತಪಟ್ಟಿರುವುದನ್ನು ಮಹಿಳೆ ತನಗೆ ತಿಳಿಸಿದ್ದರು ಹಾಗೂ ಮೃತ ದೇಹವನ್ನು ಶವಾಗಾರಕ್ಕೆ ಕೊಂಡೊಯ್ಯಲಾಗಿದೆಯೆಂದು ಆಕೆ ಮಾಹಿತಿ ನೀಡಿರುವುದಾಗಿ ಪ್ರಹಾರಾಜ್ ತಿಳಿಸಿದರು.