ಭಟ್ಕಳ: ತಾಲ್ಲೂಕಿನ ಮುಟ್ಟಳಿ ಗ್ರಾಮ ಪಂಚಾಯತ ವ್ಯಾಪ್ತಿ ಎಕ್ಕೆಗೋಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಾಗಿಲ ಬಿಗ್ ಮುರಿದು ದೇವಸ್ಥಾನ ದಲ್ಲಿ ಇದ್ದ ವಸ್ತುಗಳನ್ನು ಕಳ್ಳತನ ಮಾಡಿ ಸಾಗಿಸುವಾಗ ಇಬ್ಬರು ಕಳ್ಳರು ಸ್ಥಳೀಯ ಜನರ ಕೈಯಲ್ಲಿ ತಗಲಾಕೊಂಡಿರೋ ಘಟನೆ ನಡೆದಿದೆ
ಬಂಧಿತ ಆರೋಪಿಗಳನ್ನು ಶಿವಮೊಗ್ಗ ಟಿಪ್ಪು ನಗರ ಮೂಲದ, ಹಾಲಿ ಬೆಳಲಖಂಡ ಯಲ್ಲಿ ವಾಸವಾಗಿರುವ ಇರ್ಫಾನ್ ಅನ್ವರ್ ಸಾಬ್ (38) ಹಾಗೂ ಆರೀಫ್ ಅನ್ಸಾರ್ (24) ಎಂದು ಗುರುತಿಸಲಾಗಿದೆ. ಕಳ್ಳರು ರಾತ್ರಿಸಮಯದಲ್ಲಿ ನಿರ್ಜನ ಪ್ರದೇಶದಲ್ಲಿ ಇರುವ ಮುಟ್ಟಳಿ ಮತ್ತು ತಲಾನ ಗ್ರಾಮದ ಜನರು ಪೂಜಿಸುವ ಶಕ್ತಿ ದೇವತೆ ಎಕ್ಕೆಗೋಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬೀಗವನ್ನು ಒಡೆದು ಒಳಗೆ ಹೋಗಿ ಪ್ರವೇಶಿಸಿ ದೇವಸ್ಥಾನದ ಹುಂಡಿಗಳನ್ನು ಒಡೆದು ಅಂದಾಜು ಸುಮಾರು 5,000 ರಿಂದ 5500 ರೂ. ಹಣ ಮತ್ತು ದೇವಸ್ಥಾನದ ಗಂಟೆಗಳು, ಕಾಲುದೀಪ ಮತ್ತು ದೇವರ ಹರಿವಾಣ, ಇನ್ನಿತರ ವಸ್ತುಗಳನ್ನು ಕಳುವು ಮಾಡಿ ಚೀಲಗಳಲ್ಲ ತುಂಬಿಕೊಂಡು ಅಲ್ಲಿಂದ ಕಾಲು ಕೀಳುವ ಮುನ್ನ, ದೇವಸ್ಥಾನ ಪಕ್ಕದ ರಸ್ತೆಯಿಂದ ಬೈಕ್ನಲ್ಲಿ ತೆರಳುತ್ತಿದ್ದ ಮುಟ್ಟಳ್ಳಿ ಭಾಗದ ಕಾರ್ಮಿಕರೊಬ್ಬರ ಬೈಕ್ ಬೆಳಕಿನಲ್ಲಿ ಕಣ್ಣಿಗೆ ಬಿದ್ದಿದ್ದಾರೆ.
ಕಳ್ಳರು ಮಾರಕಾಸ್ತ್ರಗಳೊಂದಿಗೆ ದಾಳಿ ನಡೆಸುವ ಸಾಧ್ಯತೆಯನ್ನು ಅರಿತ ಅವರು ಕೂಗಾಡಿಕೊಂಡು ಅಕ್ಕಪಕ್ಕದ ನಿವಾಸಿಗಳಿಗೆ ಮಾಹಿತಿ ನೀಡಿದ್ದಾರೆ. ಇದಾದ ಕೆಲವೇ ಕ್ಷಣದಲ್ಲಿ ಸುತ್ತಮುತ್ತಲಿನ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದು, ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಸಾರ್ವನಿಕರ ಸಹಕಾರದೊಂದಿಗೆ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಟಿವಿಎಸ್ ಅಪಾಚಿ ಮೋಟಾರ್ ಸೈಕಲ್ನಲ್ಲಿ ಪರಾರಿಯಾಗುವ ಪ್ರಯತ್ನದಲ್ಲಿರುವಾಗಲೇ ಕೆಳಕ್ಕೆ ಬಿದ್ದಿದ್ದು, ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಶ್ರೀಧರ ನಾಯ್ಕ ತನಿಖೆ ಕೈಗೊಂಡಿದ್ದಾರೆ.