ಭಟ್ಕಳ: ಉ.ಕ ಜಿಲ್ಲೆಯಲ್ಲಿ ಗಲ್ಫ್ ರಾಷ್ಟ್ರಗಳಿಂದ ಭಟ್ಕಳಕ್ಕೆ ಬಂದ ವ್ಯಕ್ತಿಗಳಲ್ಲಿ ಕಾಣಿಸಿಕೊಂಡಿದ್ದ ಕೊರೋನ ಸೋಂಕು ೮ ಜನರಲ್ಲಿ ಹರಡಿಕೊಂಡು ಆತಂಕ ಮೂಡಿಸಿತ್ತು. ಆದರೆ ಆ ಆತಂಕವಿನ್ನು ದೂರವಾಗುತ್ತಿದ್ದು ಸೋಂಕು ಪೀಡಿತ ಇಬ್ಬರು ಗುಣಮುಖರಾಗಿದ್ದು ಮಂಗಳವಾರ ಅವರನ್ನು ಆಸ್ಪತ್ರೆಯಿಂದ ಬಿಡುಗೊಡೆಗೊಳಿಸುವುದಾಗಿ ಉ.ಕ.ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಮಾಹಿತಿ ನೀಡಿದ್ದಾರೆ.
ಕೊರೋನ ಸೋಂಕು ಕುರಿತಂತೆ ಜನರಲ್ಲಿ ಮನೆಮಾಡಿಕೊಂಡಿದ್ದ ಭಯ ಆತಂಕ ನಿಧಾನವಾಗಿ ದೂರವಾಗುತ್ತಿದ್ದು ಜನರು ಮತ್ತೆ ಯಥಾಸ್ಥಿತಿಗೆ ಮರಳುತ್ತಿರುವುದು ಜಿಲ್ಲೆಯ ಜನರಲ್ಲಿ ಭರವಸೆ ಮೂಡಿದ್ದು ಕೊನೋನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಉಳಿದ ಆರು ಮಂದಿಯೂ ಕೂಡ ಚಿಕಿತ್ಸೆಗೆ ಸ್ಪಂಧಿಸುತ್ತಿದ್ದು ಶೀಘ್ರವೇ ಗುಣಮುಖರಾಗುವ ಭರವಸೆಯಿದೆ ಎಂದು ಹೇಳಲಾಗುತ್ತಿದೆ.
ಕೊರೋನಾಗೆ ಸಂಬಂಧಿಸಿ ಕಾರವಾರ ತಾಲ್ಲೂಕಿನ ಅರಗಾ ಗ್ರಾಮದ ಸಮೀಪದ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರನ್ನ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಲ್ಲಿ ಈಗಾಗಲೇ ಇಬ್ಬರು ಪೂರ್ಣ ಗುಣಮುಖರಾಗಿದ್ದು ಇಬ್ಬರನ್ನ ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ.
ಮುಂಜಾಗ್ರತೆಯ ಉದ್ದೇಶದಿಂದ ಮುಂದಿನ 14 ದಿನಗಳ ಕಾಲ ಜಿಲ್ಲಾಡಳಿತವೇ ಅವರನ್ನೆಲ್ಲಾ ಕ್ವಾರಂಟೈನ್ ಮಾಡಲಿದ್ದು ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇರಿಸಲಾಗುವುದು ಎಂದಿದ್ದಾರೆ. ಇನ್ನು ಉಳಿದ ಸೋಂಕಿತರು ಸಹ ಏಪ್ರಿಲ್ 14ರೊಳಗೆ ಸಂಪೂರ್ಣ ಗುಣಮುಖರಾಗುವ ವಿಶ್ವಾಸವಿದೆ. ಜೊತೆಗೆ ಸೋಂಕಿತರ ಸಂಪರ್ಕಕ್ಕೆ ಬಂದವರು ಸಹ 14 ದಿನಗಳನ್ನ ಪೂರೈಸುತ್ತಿದ್ದು ಅವರ ನಿಗಾ ಅವಧಿ ಸಹ ಮುಕ್ತಾಯಗೊಳ್ಳುತ್ತಿದೆ ಎಂದರು.
ದೆಹಲಿಯ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಉತ್ತರಕನ್ನಡ ಜಿಲ್ಲೆಯ ೮ ಜನರ ಗಂಟಲು ದ್ರವ ಪರೀಕ್ಷೆ ನೆಗೆಟಿವ್ ಬಂದಿದ್ದು ಉಳಿದಂತೆ ಅಂತಹವರ ಸಂಪರ್ಕಕ್ಕೆ ಬಂದವರು ಹಾಗೂ ಸ್ಥಳೀಯರು ಸೇರಿ ಇನ್ನೂ 50 ಮಾದರಿಗಳ ಪರೀಕ್ಷಾ ವರದಿ ಬರಬೇಕಿದ್ದು ಜಿಲ್ಲೆಯಲ್ಲಿ ಯಾವ ರೀತಿಯ ಪರಿಸ್ಥಿತಿ ಇರಲಿದೆ ಎನ್ನುವುದು ಮುಂದಿನ ವಾರದೊಳಗೆ ತಿಳಿದುಬರಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಈ ಮೂಲಕ ಜಿಲ್ಲೆಯ ಭಟ್ಕಳದ ನಿವಾಸಿಗಳಾಗಿರುವ ಹಾಗೂ ನೇವಿ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಇಬ್ಬರು ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಓರ್ವ ವ್ಯಕ್ತಿ ಗುಣಮುಖರಾಗಿದ್ದು ಉಳಿದ ರೋಗಿಗಳ ಸ್ಥಿತಿಯಲ್ಲಿ ಕೂಡ ಸುಧಾರಣೆ ಕಂಡಿದ್ದು ಚೇತರಿಕೆಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.