ಭಟ್ಕಳ ಹರಿಜನಕೇರಿಯ ಜನರಿಗೆ ವ್ಯಕ್ತಿಯಿಂದ ಕಾಟ; ಆರೋಪಿಯ ಮನೆಯಲ್ಲಿ ಸಿಕ್ಕಿತು ಆಮೆ, ಚಿಪ್ಪುಗಳು!
ಭಟ್ಕಳ: ತಾಲೂಕಿನ ಹರಿಜನಕೇರಿಯಲ್ಲಿ ವ್ಯಕ್ತಿಯೋರ್ವ ಅಲ್ಲಿನ ಜನರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ ಎನ್ನುವ ಆರೋಪದ ಮೇರೆಗೆ ಪೊಲೀಸರು ಆರೋಪಿಯನ್ನು ಈಗಾಗಲೇ ಬಂಧಿಸಿದ್ದು, ತಹಸೀಲ್ದಾರ ಎಸ್.ರವಿಚಂದ್ರ ಸೋಮವಾರ ಸಂಜೆ ಸಿಬ್ಬಂದಿಗಳೊಡನೆ ಸ್ಥಳಕ್ಕೆ ತೆರಳಿ ಪಂಚನಾಮೆ ನಡೆಸಿದ್ದಾರೆ.
ಹರಿಜನಕೇರಿಯಲ್ಲಿ ಮಂಜು ಎಂಬಾತ ಅಲ್ಲಿನ ಪೌರಕಾರ್ಮಿಕರಿಗೆ ವೈಯಕ್ತಿಕವಾಗಿ ಕಿರುಕುಳ ನೀಡುತ್ತಿದ್ದಾನೆ, ಮಹಿಳೆಯರು ಸ್ನಾನ ಅಥವಾ ಶೌಚಾಲಯಕ್ಕೆ ತೆರಳಿದರೆ ಅವರನ್ನು ಹಿಂಬಾಲಿಸಿಕೊಂಡು ಬಂದು ಬಟ್ಟೆಯ ತೆಗೆದು ಅಸಭ್ಯವಾಗಿ ವರ್ತಿಸುತ್ತಾನೆ, ಹರಿಜನಕೇರಿಯ ಕುಡಿಯುವ ನೀರಿನ ಪೈಪ್ನ್ನು ತುಂಡರಿಸಿ ನೀರು ಬರದಂತೆ ಮಾಡುವ ಕೃತ್ಯ ನಡೆಯುತ್ತಿದೆ, ಗುಡ್ಡ ಪ್ರದೇಶದ ದಿಬ್ಬವನ್ನು ತೆಗೆದು ಗುಡ್ಡದ ಅಂಚಿನ ಮನೆಯವರು ಭಯದಿಂದ ಇರಬೇಕಾದ ವಾತಾವರಣ ನಿರ್ಮಾಣವಾಗಿದೆ, ಹರಿಜನಕೇರಿಯಲ್ಲಿ ಆತಂಕ ಸೃಷ್ಟಿಸುತ್ತಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿನ ಜನರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು.
ಆರೋಪಿಯ ಮನೆಯಲ್ಲಿ ಆಮೆ, ಚಿಪ್ಪುಗಳು:
ಸೋಮವಾರ ತಹಸೀಲ್ದಾರ ಎಸ್.ರವಿಚಂದ್ರ ಆರೋಪಿಯ ಮನೆಗೆ ಪಂಚನಾಮೆಗೆ ತೆರಳಿದ ಸಂದರ್ಭದಲ್ಲಿ ಒಂದು ಜೀವಂತ ಆಮೆ ಹಾಗೂ ಕೆಲವು ಆಮೆ ಚಿಪ್ಪುಗಳು ಕಂಡು ಬಂದಿದ್ದು, ಎಲ್ಲವನ್ನೂ ಅರಣ್ಯ ಇಲಾಖೆಯ ಅಧಿಕಾರಿಗಳಿ ಒಪ್ಪಿಸಲಾಗಿದೆ. ಇದನ್ನು ದೃಢಪಡಿಸಿರುವ ಆರ್ಎಫ್ಓ ಸವಿತಾ ದೇವಾಡಿಗ, ಈ ಕುರಿತಂತೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.