ಅಗರ್ತಲ: ತ್ರಿಪುರಾ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇಬ್ ಅವರು ತನ್ನ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ. ತಾನು ರಾಜ್ಯಪಾಲ ಸತ್ಯದೇವ ನಾರಾಯಣ ಅರ್ಯ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆಗೆ ಒಂದು ವರ್ಷ ಮುಂಚಿತವಾಗಿ ಈ ಹೊಸ ಬೆಳವಣಿಗೆ ನಡೆದಿದೆ. “ಪಕ್ಷವನ್ನು ಬಲಪಡಿಸಲು ನಾನು ಕೆಲಸ ಮಾಡಬೇಕೆಂದು ಬಿಜೆಪಿ ಬಯಸುತ್ತದೆ” ಎಂದು ರಾಜೀನಾಮೆ ನೀಡಿದ ನಂತರ ಬಿಪ್ಲವ್ ದೇಬ್ ಅವರು ಹೇಳಿದ್ದಾರೆ. “ರಾಜ್ಯದಲ್ಲಿ ಬಿಜೆಪಿಯ ತಳಹದಿಯನ್ನು ಬಲಪಡಿಸಲು, ನಾನು ವಿವಿಧ ವಲಯಗಳಲ್ಲಿ ತಳಮಟ್ಟದಿಂದ ಕಾರ್ಯ ನಿರ್ವಹಿಸಬೇಕಾಗಿದೆ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಸರಕಾರವನ್ನು ಮತ್ತೆ ಅಸ್ತಿತ್ವಕ್ಕೆ ತರಲು ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಇರುವುದ ಕ್ಕಿಂತ ಸಾಮಾನ್ಯ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸಬೇಕಿದೆ' ಎಂದು ಬಿಪ್ಲವ್ ದೇಬ್ ಹೇಳಿದ್ದಾರೆ.
ಮಾಣಿಕ್ ಸಹಾ ನೂತನ ಸಿಎಂ: ತ್ರಿಪುರಾದ ನೂತನ ಮುಖ್ಯ ಮಂತ್ರಿಯಾಗಿ ಬಿಜೆಪಿಯ | ತ್ರಿಪುರಾ ಘಟಕದ ಅಧ್ಯಕ್ಷ ಮಾಣಿಕ್ ಸಹಾ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
ರಾಜ್ಯ ಶಾಸಕಾಂಗ ಪಕ್ಷ ಮಾಣಿಕ್ ಸಹಾ ಅವರನ್ನು ನೂತನ ಮುಖ್ಯ ಮಂತ್ರಿಯಾಗಿ ಆಯ್ಕೆ ಮಾಡಿದೆ ಎಂದು ಬಿಜೆಪಿಯ ತ್ರಿಪುರಾ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರು ಟ್ವಿಟ್ ಮಾಡಿದ್ದಾರೆ.
ಪ್ರಸ್ತುತ ರಾಜ್ಯಸಭೆಯ ಸದಸ್ಯರಾಗಿರುವ ಸಹಾ ಅವರು ಯಾವಾಗ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ.
ಸಹಾ ಅವರು ಬಿಜೆಪಿ ಸೇರಲು 2016ರಲ್ಲಿ ಕಾಂಗ್ರೆಸ್ ತ್ಯಜಿಸಿದ್ದರು. 2020ರಲ್ಲಿ ಅವರು ಬಿಜೆಪಿಯ ತ್ರಿಪುರಾ ಘಟಕದ ವರಿಷ್ಠರಾಗಿ ಅಧಿಕಾರ ಸ್ವೀಕರಿಸಿದ್ದರು.