ಕಾರವಾರ : ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ 60 ನೇ ರಾಷ್ಟ್ರೀಯ ರೋಲರ್ ಹಾಕಿ ಸ್ಕೇಟಿಂಗ್ ನಲ್ಲಿ ಕರ್ನಾಟಕ ತಂಡದಿಂದ ಸ್ಪರ್ದಿಸಿದ ಉತ್ತರಕನ್ನಡ ಜಿಲ್ಲೆಯ ಕ್ರೀಡಾಪಟುಗಳನ್ನ ಸನ್ಮಾನಿಸುವ ಕಾರ್ಯ ಕಾರವಾರದಲ್ಲಿ ನಡೆಯಿತು.
ದೇಶದ ಒಟ್ಟು 22 ರಾಜ್ಯಗಳ ಹತ್ತು ಸಾವಿರ ಸ್ಕೇಟ್ ಪಟುಗಳು ಭಾಗವಹಿಸಿದ್ದರು. ರೋಲರ್ ಹಾಕಿಯಲ್ಲಿ ಕರ್ನಾಟಕ ತಂಡ 1 ಬೆಳ್ಳಿ ಮತ್ತು 3 ಕಂಚು ಪದಕ ಗಳಿಸಿದೆ. ತಂಡದಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರ, ಕೈಗಾ, ಶಿರಸಿ, ಯಲ್ಲಾಪುರ ಮತ್ತು ಮುಂಡಗೋಡಿನ 20 ಮಕ್ಕಳು ಭಾಗವಹಿಸಿದ್ದರು.
ಭಾಗವಹಿಸಿದ ಕ್ರೀಡಾ ಪಟುಗಳಿಗೆ ನಗರದ ಎನ್ ಜಿ ಓ ಸಭಾಭವನದಲ್ಲಿ ಹೃತ್ಪೂರ್ವಕವಾಗಿ ಸನ್ಮಾನಿಸಲಾಯಿತು. ಮಾಜಿ ಶಾಸಕ ಸತೀಶ ಸೈಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿ, ಕಾರವಾರದ ಸ್ಕೇಟಿಂಗ್ ಪಟುಗಳಿಗೆ ಉತ್ತಮ ಅಭ್ಯಾಸ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರೀಡಾಂಗಣದ ಅವಶ್ಯಕತೆ ಇದೆ. ಅಂದರೆ ಮಾತ್ರ ಕ್ರೀಡಾಪಟುಗಳು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಹೊರಹೊಮ್ಮಲು ಸಾಧ್ಯವಾಗಲಿದೆ. ಮಕ್ಕಳ ಭವಿತವ್ಯದ ದೃಷ್ಟಿಯಿಂದ ಎಲ್ಲರ ಪ್ರೋತ್ಸಾಹ ಅಗತ್ಯವಿದ್ದು, ಮಕ್ಕಳ ತರಬೇತಿಗೆ ಅನುಕೂಲವಾಗಲು ಕಡಲತೀರದ ಪಕ್ಕದಲ್ಲಿ ಮೈದಾನ ಕಲ್ಪಿಸಲು ಅವಕಾಶ ನೀಡಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಗರಸಭಾ ಉಪಾಧ್ಯಕ್ಷ ಪ್ರಕಾಶ ನಾಯ್ಕ ಮಾತನಾಡಿ, ಇಂದಿನ ಮಕ್ಕಳ ಬೆನ್ನು ತಟ್ಟಿದರೆ ಮುಂದೆ ಜಗತ್ತನ್ನೆ ಆಳಬಹುದು. ಮುಂದಿನ ದಿನಗಳಲ್ಲಿ ಕಾರವಾರದ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಕಂಗೊಳಿಸಲಿ. ನಗರಸಭೆ ವತಿಯಿಂದ ಮಕ್ಕಳಿಗೆ ಸ್ಕೇಟ್ ತರಬೇತಿ ಅನುಕೂಲವಾಗಲು ಅವಕಾಶ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ವೇದಿಕೆಯಲ್ಲಿ ಡರ್ಬಿ ಕೋಚ್ ಸೀಮಾ ಪಾಟೀಲ್, ಪೋಷಕರಾದ ಸವಿತಾ ನಾಯ್ಕ, ಸ್ಟಾರ್ ಚಾಯ್ಸ್ ಡಾನ್ಸ್ ಸಂಸ್ಥೆ ಸಂಸ್ಥಾಪಕ ರಾಜನ್ ಬಾನಾವಳಿಕರ, ಹಿರಿಯ ತರಬೇತುದಾರರಾದ ದಿಲೀಪ ಹಣಬರ ಪ್ರಾಸ್ತಾವಿಕವಾಗಿ ಮಾತನಾಡಿದರು. ತರಬೇತುದಾರರಾದ ಮಂಜುನಾಥ, ಸಚಿನ್ ದೇಸಾಯಿ, ವಿಮಲ್ ಹಣಬರ, ರೋಹಿದಾಸ ಬಾನಾವಳಿಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾರವಾರ, ಶಿರಸಿಯ ಸ್ಕೇಟ್ ಪಟುಗಳಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಲಾಯಿತು.
ಸ್ಕೇಟ್ ಪಟುಗಳ ವತಿಯಿಂದ ಪಾಲಕರು ಸ್ಕೇಟಿಂಗ್ ಕ್ಲಬ್ ಸಂಸ್ಥಾಪಕ, ಹಿರಿಯ ತರಬೇತುದಾರರಾದ ದಿಲೀಪ್ ಹಣಬರ ಅವರನ್ನ ಕೂಡ ಗೌರವಿಸಿದರು.