ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಿ, ಪ್ರೀತಿಯಿಂದ ನೋಡಿಕೊಂಡರು ಎಂದು ಕೊರೋನದಿಂದ ಗುಣಮುಖನಾದ ಭಟ್ಕಳದ ಯುವಕ ಹೇಳಿದ್ದಾರೆ.
ದ.ಕ.ಜಿಲ್ಲೆಯಲ್ಲಿ ಪ್ರಪ್ರಥಮ ಕೊರೋನ ಪ್ರಕರಣ ವರದಿಯಾಗಿದ್ದ ಭಟ್ಕಳದ ಯುವಕ ಸಂಪೂರ್ಣ ಗುಣಮುಖನಾಗಿ ಸೋಮವಾರ ಬೆಳಗ್ಗೆ ತನ್ನ ಊರಿಗೆ ತೆರಳಿದರು.
ವಿದೇಶದಲ್ಲಿ ಉದ್ಯೋಗದಲ್ಲಿದ್ದ ಈ ಯುವಕ ಮಾ.19ರಂದು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅಲ್ಲಿ ತಪಾಸಣೆಯ ಸಂದರ್ಭ ಕೊರೋನ ರೋಗದ ಲಕ್ಷಣಗಳಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿಂದಲೇ ಆ್ಯಂಬ್ಯುಲೆನ್ಸ್ನಲ್ಲಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯುವಕನ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಮಾ.22 ರಂದು ಬಂದ ವರದಿಯಲ್ಲಿ ಯುವಕನಿಗೆ ಕೊರೋನ ಪಾಸಿಟಿವ್ ಇರುವುದು ದೃಢಪಟ್ಟಿತ್ತು.
ಬಳಿಕ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಐಸೋಲೇಷನ್ ವಾರ್ಡ್ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಯುವಕನ ಆರೋಗ್ಯದಲ್ಲಿ ದಿನದಿಂದ ದಿನಕ್ಕೆ ಚೇತರಿಕೆ ಕಂಡುಬಂದಿದ್ದು, ಸಂಪೂರ್ಣ ಗುಣಮುಖನಾಗಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ, ಭಟ್ಕಳಕ್ಕೆ ತೆರಳಿದ್ದಾರೆ. ಈ ಯುವಕ ಸದ್ಯ ಮನೆಯಲ್ಲಿಯೂ ಪ್ರತ್ಯೇಕವಾಗಿರಲಿದ್ದಾರೆ ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಜಿಲ್ಲೆಯ ಪ್ರಥಮ ಪ್ರಕರಣ ಇದಾಗಿದ್ದರಿಂದ ಜಿಲ್ಲಾಡಳಿತವು ಸಾಕಷ್ಟು ಮುಂಜಾಗರೂಕತಾ ಕ್ರಮಗಳನ್ನು ತಕ್ಷಣದಿಂದಲೇ ಕೈಗೊಂಡಿತು. ಅದರಲ್ಲೂ ವೆನ್ಲಾಕ್ ಆಸ್ಪತ್ರೆಗೆ ಇದೊಂದು ಸವಾಲಿನ ಪ್ರಕರಣವಾಗಿತ್ತು. ರೋಗಿಯನ್ನು ಸಂಪೂರ್ಣವಾಗಿ ಪ್ರತ್ಯೇಕವಾಗಿಡುವುದರೊಂದಿಗೆ ಚಿಕಿತ್ಸೆ ನೀಡುವುದೂ ಕೂಡಾ ಮಹತ್ವದ್ದಾಗಿತ್ತು. ಈ ನಿಟ್ಟಿನಲ್ಲಿ ವೆನ್ಲಾಕ್ನ ಅಧೀಕ್ಷಕರು, ವೈದ್ಯರು, ನರ್ಸ್ ಹಾಗೂ ಸಿಬ್ಬಂದಿ ವರ್ಗವು ಪೂರ್ಣ ಸೇವೆಯನ್ನು ಮೀಸಲಿಟ್ಟು, ಅಂತಿಮವಾಗಿ ರೋಗಿಯನ್ನು ಗುಣಮುಖಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಜಗತ್ತನ್ನೇ ನಲುಗಿಸಿರುವ ಕೊರೋನ ಸಾಂಕ್ರಾಮಿಕ ಕಾಯಿಲೆಯ ವಿರುದ್ಧ ವೆನ್ಳಾಕ್ ಹಾಗೂ ದ.ಕ. ಜಿಲ್ಲಾಡಳಿತಕ್ಕೆ ಮೊದಲ ಯಶಸ್ಸು ದೊರಕಿದೆ.
ಬೆಳ್ಳಂಬೆಳಿಗ್ಗೆ ಊರಿನತ್ತ: ಕೊರೋನದಿಂದ ಗುಣಮುಖನಾದ ಭಟ್ಕಳದ 22ರ ಹರೆಯದ ಈ ಯುವಕನು, ಸೋಮವಾರ ಬೆಳಗ್ಗೆ ತನ್ನ ಊರಿನತ್ತ ತೆರಳಿದನು. ಆಸ್ಪತ್ರೆಯಿಂದ ಹೊರಟಾಗ ತನಗೆ ಚಿಕಿತ್ಸೆ ನೀಡಿ, ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸಿದ ವೆನ್ಲಾಕ್ನ ವೈದ್ಯರಿಗೆ, ಸಿಬ್ಬಂದಿಗೆ ಗೌರವಿಸಿದನು. ಹಾಗೆಯೇ ವೈದ್ಯರ ಬಳಿ ಭಾವುಕನಾಗಿ ನಿಂತನು.
ದುಬೈಯಲ್ಲಿ 2 ವರ್ಷಗಳಿಂದ ಬ್ರಾಂಡೆಡ್ ವಾಚ್ ವ್ಯಾಪಾರ ಮಾಡುತ್ತಿದ್ದ ಈ ಯುವಕ ವೆನ್ಲಾಕ್ನಲ್ಲಿ ತನಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಾಗಿದೆ. ತನ್ನನ್ನು ಬಹಳ ಪ್ರೀತಿಯಿಂದ ಇಲ್ಲಿ ಕಾಣಲಾಯಿತು. ಯಾವುದೇ ಸಮಸ್ಯೆಯಾಗದಂತೆ ಇಷ್ಟು ದಿನ ನೋಡಿಕೊಳ್ಳಲಾಗಿದೆ. ತಿನ್ನಲು ಉತ್ತಮ ಆಹಾರವನ್ನೂ ನೀಡಲಾಗಿದೆ ಎಂದು ತನ್ನ ಸಂತೋಷ ಹಂಚಿಕೊಂಡರು.
ನನಗೆ ಈ ರೋಗ ಹೇಗೆ ಬಂತು ಎಂಬ ನಿಖರವಾಗಿ ತಿಳಿದಿಲ್ಲ. ಪಾಸಿಟಿವ್ ದೃಢಪಟ್ಟ ನಂತರ ನಾನೇ ಎಲ್ಲರಿಂದಲೂ ಸಂಪೂರ್ಣ ಅಂತರ ಕಾಯ್ದುಕೊಂಡೆ ಎಂದ ಈ ಯುವಕ ಸಾಮಾಜಿಕ ಜಾಲತಾಣಗಳಲ್ಲಿ ಕೊರೋನ ಬಗ್ಗೆ ಸಾಕಷ್ಟು ಭಯಭೀತಿ ಮೂಡಿಸುವಂತೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊರೋನ ವೈರಸ್ ನಮ್ಮ ದೇಹ ಪ್ರವೇಶಿಸುವುದು ಗೊತ್ತಾಗುವಾಗ ಹಲವು ದಿನಗಳು ಕಳೆದಿರುತ್ತದೆ. ನಮ್ಮ ಓಡಾಟ ನಿಯಂತ್ರಿಸುವುದು ಪ್ರಾಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರದ ಲಾಕ್ಡೌನ್ ದಿಟ್ಟ ಹೆಜ್ಜೆಯಾಗಿದ್ದು, ಸರಕಾರದ ನಿರ್ದೇಶನದಂತೆ ಎಲ್ಲರೂ ಮನೆಯೊಳಗೆ ಇರುವುದು ಅಗತ್ಯವಾಗಿದೆ. ನಾನು ವಿಮಾನ ನಿಲ್ದಾಣದಿಂದಲೇ ನೇರವಾಗಿ ಆಸ್ಪತ್ರೆಗೆ ದಾಖಲಾಗಿದ್ದರಿಂದ, ಊರಿಗೆ ತೆರಳಿ ಬಳಿಕ ಕುಟುಂಬಸ್ಥರಿಗೆ, ಊರಿನವರಿಗೆ ರೋಗ ಹರಡುವುದು ತಪ್ಪಿತು.ಇದಕ್ಕಾಗಿ ಜಿಲ್ಲಾಡಳಿತಕ್ಕೆ ತಾನು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ಈ ಯುವಕ ಭಾವುಕರಾದರು.
ಕೊರೋನ ರೋಗಕ್ಕೆ ಹೆದರುವ ಅಗತ್ಯವಿಲ್ಲ. ಆತ್ಮವಿಶ್ವಾಸ ಮುಖ್ಯವಾಗಿದೆ. ರೋಗಿಯು ಪ್ರತ್ಯೇಕವಾಗಿರುವುದು ಅಗತ್ಯ. ಒಬ್ಬಂಟಿಯಾಗಿರುವುದಕ್ಕೆ ಹೆದರುವ ಅಗತ್ಯವಿಲ್ಲ. ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು, ಸೋಂಕಿನ ವಿರುದ್ಧ ಹೋರಾಡಲು ನಮ್ಮಲ್ಲಿ ಧೈರ್ಯ ಮುಖ್ಯವಾಗಿದೆ ಎಂದರು.
ವೈದ್ಯರ ಚಿಕಿತ್ಸೆ, ದೇವರ ಅನುಗ್ರಹದಿಂದ ಇದೀಗ ತನ್ನ ಆರೋಗ್ಯ ಸಾಮಾನ್ಯ ಸ್ಥಿತಿಗೆ ಬಂದಿದೆ. ವೆನ್ಲಾಕ್ ಆಸ್ಪತ್ರೆಯ ವೈದ್ಯರ, ಸಿಬ್ಬಂದಿಯ ನಿರಂತರ ಆರೈಕೆಯ ಪರಿಣಾಮ ತಾನು ಗುಣಮುಖನಾಗುವಂತಾಯಿತು ಎಂದು ಕೊರೋನ ಸೋಂಕನ್ನು ಗೆದ್ದು ಬಂದ ಬಗ್ಗೆ ಯುವಕ ಹೇಳಿದರು.