ಭಟ್ಕಳ: ದೀಪದ ಹಬ್ಬ ದೀಪಾವಳಿ ಪ್ರವಾಸಿ ತಾಣ ಮುರುಡೇಶ್ವರಕ್ಕೆ ಹೊಸ ಕಳೆಯನ್ನು ತಂದು ಕೊಟ್ಟಿದೆ. ಸರಣಿ ರಜೆಯನ್ನು ಸವಿಯಲು ಸಹಸ್ರಾರು ಪ್ರವಾಸಿಗರು ಮುರುಡೇಶ್ವರದತ್ತ ಮುಖ ಮಾಡಿದ್ದು, ಮುರುಡೇಶ್ವರ ಇದ್ದಕ್ಕಿದ್ದಂತೆಯೇ ಉಬ್ಬಿ ಹೋಗಿದೆ. ಆದರೆ ಸೌಕರ್ಯದ ಕೊರತೆಯಿಂದಾಗಿ ಮುರುಡೇಶ್ವರ ತೀರದುದ್ಧಕ್ಕೂ ನಿರಾಸೆ ಮಡುಗಟ್ಟಿದೆ.
ಕಳೆದ 2-3 ದಿನಗಳಿಂದ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. 7-8 ತಿಂಗಳ ನಂತರ ಮತ್ತೆ ಮುರುಡೇಶ್ವರದಲ್ಲಿ ಜನ, ವಾಹನ ದಟ್ಟಣೆ ನಿರ್ಮಾಣವಾಗಿದೆ. ವಾಹನಗಳ ಪಾರ್ಕಿಂಗ್ಗೆ ಸರಿಯಾದ ಸ್ಥಳಾವಕಾಶ ಇಲ್ಲದೇ ಪ್ರವಾಸಿಗರು ತಮ್ಮ ವಾಹನಗಳನ್ನು ಬೇಲೆಯತ್ತ ಕೊಂಡೊಯ್ಯುತ್ತಿದ್ದಾರೆ. ಸಾಲದೆಂಬಂತೆ ಕಳೆದೆರಡು ದಿನಗಳಿಂದ ಸೆಖೆ ಸ್ಥಳೀಯರನ್ನು ಹೈರಾಣಾಗಿಸುತ್ತಿದ್ದು, ದೀಪಾವಳಿ ಆಚರಣೆಗಾಗಿ ಪ್ರವಾಸಿರನ್ನು ಸೇರಿಕೊಳ್ಳಲು ಹುಮ್ಮಸ್ಸು ತೋರಿಸುತ್ತಿದ್ದಾರೆ. ಮುರುಡೇಶ್ವರ ಇನ್ನೇನು ಮೊದಲಿನ ರೂಪ ಪಡೆದುಕೊಳ್ಳುತ್ತಿದೆ ಎಂದು ನೋಡಲು ಹೊರಟರೆ ಇಲ್ಲಿನ ವ್ಯವಸ್ಥೆಗಳು ನಿರಾಸೆಯನ್ನು ಮೂಡಿಸುತ್ತಿದೆ.
ಮುರುಡೇಶ್ವರಕ್ಕೆ ಪ್ರವಾಸಿಗರು ಬರುತ್ತಿದ್ದಾರೆ ನಿಜ, ಆದರೆ ಅಂಗಡಿಗಳೆಲ್ಲ ಬಂದ್ ಆಗಿ 15 ದಿನ ಕಳೆಯಿತು, ವಾಟರ್ ಸ್ಪೋಟ್ರ್ಸ ಬೋಟುಗಳೂ ನೀರಿಗೆ ಇಳಿದಿಲ್ಲ. ಪ್ರವಾಸಿಗರು ಮುರುಡೇಶ್ವರ ದೇವಸ್ಥಾನಕ್ಕೆ ಬಂದು ಹಾಗೆಯೇ ವಾಪಸ್ಸಾಗುತ್ತಿದ್ದಾರೆ - ನರಸಿಂಹ ಮೊಗೇರ, ಮುರುಡೇಶ್ವರ ಬೀಚ್ ಸೂಪರ್ವೈಸರ್ |
ಮುರುಡೇಶ್ವರ ಬೇಲೆಯನ್ನು ಮುತ್ತಿಕೊಂಡಿದ್ದ ಸಣ್ಣಪುಟ್ಟ ಅಂಗಡಿಗಳು ಬಾಗಿಲು ಮುಚ್ಚಿಕೊಂಡು ಈಗಾಗಲೇ 15 ದಿನ ಕಳೆದಿವೆ. ಹಳೆ, ಹೊಸ ಅಂಗಡಿಕಾರರ ನಡುವಿನ ತೆರೆಮರೆಯ ಗುದ್ದಾಟ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಪ್ರವಾಸಿಗರನ್ನು ರಂಜಿಸುತ್ತಿದ್ದ ವಾಟರ್ ಸ್ಪೋಟ್ರ್ಸ ಬೋಟುಗಳು ದಡ ಸೇರಿ ಕುಳಿತುಕೊಂಡಿವೆ. ಸ್ಥಳೀಯ ಮೀನುಗಾರರು ಹಾಗೂ ಪ್ರವಾಸೋದ್ಯಮ ಇಲಾಖೆಯ ನಡುವಿನ ಜಟಾಪಟಿಯೂ ಮುಗಿಯುತ್ತಲೇ ಇಲ್ಲ. ಅಂಗಡಿಗಳನ್ನು ಮೀನುಗಾರಿಕಾ ದೋಣಿಗಳು ಸುತ್ತುವರೆಯಲು ಕಾಯುತ್ತಲೇ ಇವೆ. ಪರಿಣಾಮವಾಗಿ ಮುರುಡೇಶ್ವರ ಪ್ರವಾಸಿಗರ ಪಾಲಿಗೆ ತೀರ ಕಿರಿದಾಗುತ್ತಿದೆ. ಮುರುಡೇಶ್ವರಕ್ಕೆ ಬರುವ ಪ್ರವಾಸಿಗರು ದೇವಸ್ಥಾನಕ್ಕೆ ಕೈ ಮುಗಿದು ಕೂಡಲೇ ಕಾಲು ಕೀಳುತ್ತಿದ್ದಾರೆ. ಇದರಿಂದಾಗಿ ವಸತಿಗೃಹಗಳ ವ್ಯಾಪಾರ ವಹಿವಾಟುಗಳು ದೊಡ್ಡ ಪ್ರಮಾಣÀಲ್ಲಿ ಏರಿಕೆ ಕಂಡಿಲ್ಲ.
ಮುರುಡೇಶ್ವರದೊಳಗಿನ ದುಗುಡ:
ಬರಹದಲ್ಲಿ ವಿಶ್ವ ಪ್ರಸಿದ್ಧವಾಗಿರುವ ಮುರುಡೇಶ್ವರದ ದುಗುಡ ಒಂದೆರಡಲ್ಲ. ಇಲ್ಲಿ ವಿಶ್ವ ಮಟ್ಟದಲ್ಲಿ ಪ್ರವಾಸೋದ್ಯಮ ಬೆಳೆಸಲು ಎಲ್ಲ ಅವಕಾಶಗಳಿದ್ದರೂ ಇಚ್ಛಾಶಕ್ತಿಯ ಕೊರತೆ ಅಭಿವೃದ್ಧಿಗೆ ಅಡೆತಡೆಯನ್ನು ಮಾಡುತ್ತಲೇ ಇದೆ. ನಿಂತ ನೆಲಕ್ಕೆ ಧಕ್ಕೆಯಾಗದಂತೆ ಸರ್ವರನ್ನೂ ಒಳಗೊಳ್ಳುವ ಅಭಿವೃದ್ಧಿಯ ಕಡೆಗೆ ಮುರುಡೇಶ್ವರವನ್ನು ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲ. ಕೆಲವೊಮ್ಮೆ ಆಯಾ ವ್ಯಕ್ತಿಗಳಿಗೆ ಅನುಗುಣವಾಗಿ ಹುಟ್ಟಿಕೊಳ್ಳುವ ನಿಯಮ, ಕಾನೂನುಗಳು ಮುರುಡೇಶ್ವರದಲ್ಲಿ ಗೊಂದಲ ಸೃಷ್ಟಿಸುತ್ತಿವೆ. ದುಡಿಯುವ ವರ್ಗವನ್ನು ಕಿತ್ತು ತಿನ್ನುವ ಕೀಟಲೆಗಳೂ ಮುರುಡೇಶ್ವರದಲ್ಲಿ ತಲೆ ಎತ್ತಿನಿಂತಿದ್ದು, ಅವುಗಳನ್ನು ಕಠಿಣ ಕಾನೂನಿನ ಕುಣಿಕೆಗೆ ಸಿಲುಕಿಸುವ ಎದೆಗಾರಿಕೆಯನ್ನು ಯಾವ ಅಧಿಕಾರಿಯೂ ತೋರಿಸುತ್ತಿಲ್ಲ. ಸಾಲದೆಂಬಂತೆ ಆಗಾಗ್ಗೆ ರಾಜಕೀಯ ಆಸಕ್ತಿ, ಕಸರತ್ತುಗಳೂ ಮುರುಡೇಶ್ವರದ ಒಳಗೆ ಇಣುಕಿ ನೋಡುತ್ತಲೇ ಇದ್ದು, ಎಲ್ಲ ಆನಾಹುತ, ಆತಂಕದಿಂದ ಹೊರ ಬಂದು ಮುರುಡೇಶ್ವರ ದುಗುಡವನ್ನು ಕಳೆದುಕೊಳ್ಳಲಿ ಎಂಬ ಆಶಯವನ್ನು ಇಲ್ಲಿನ ಜನರು ವ್ಯಕ್ತಪಡಿಸುತ್ತಲೇ ಇದ್ದಾರೆ.