ಕೊರೊನಾ ಆತಂಕದ ಕಾಲದಲ್ಲಿ ಭಟ್ಕಳದ ಜನರಿಗೆ ಧೈರ್ಯ ತುಂಬುತ್ತಿರುವ ಮೊಬೈಲ್ ಕ್ಲಿನಿಕ್
ಭಟ್ಕಳ: ಈ ಕೊರೊನಾ ಸೋಂಕು ಎಲ್ಲಿಂದ ಬಂತೋ ಗೊತ್ತಿಲ್ಲ. ಕೊರೊನಾ ಸೋಂಕು ಅಂಟಿಸಿಕೊಂಡ ಹಲವರು ಕೋವಿಡ್ ಸೆಂಟರ್ ಸೇರಿದರು. ಮತ್ತೆ ಕೆಲವರು ಮನೆಯಲ್ಲಿಯೇ ಕ್ವಾರೆಂಟೈನ್ಗೆ ಒಳಗಾದರು. ಇನ್ನೂ ಕೆಲವರು ಆಸ್ಪತ್ರೆ ಸೇರಿಕೊಂಡು ಜೀವ ಉಳಿಸಿಕೊಳ್ಳಲು ಹೆಣಗಾಡಿದರು.
ಕೆಲವು ಮಂದಿ ಜೀವವನ್ನೂ ಕಳೆದುಕೊಂಡರು. ಇವೆಲ್ಲ ಕೊರೊನಾ ಸೋಂಕಿತರ ಕಥೆಯಾದರೆ, ಜ್ವರ, ಕೆಮ್ಮು, ತಂಡಿ ಇತ್ಯಾದಿ ಸಣ್ಣ ಸಣ್ಣ ಕಾಯಿಲೆಯಿಂದ ಬಳಲುತ್ತಿದ್ದವರು ತಮಗೂ ಕೊರೊನಾ ಇರಬಹುದು ಎಂದುಕೊಂಡು ಸುಖಾ ಸುಮ್ಮನೇ ಭಯಭೀತರಾದರು. ಬಹಳಷ್ಟು ಮಂದಿ ಕೊರೊನಾ ಪರೀಕ್ಷೆಯನ್ನು ತಪ್ಪಿಸಿಕೊಳ್ಳಲು ಆಸ್ಪತ್ರೆಗೆ ತೆರಳಲು ಹಿಂದೇಟು ಹಾಕಿದರು. ಇವರೆಲ್ಲ ಪರಿಸ್ಥಿತಿ ಕೈ ಮೀರಿದ ನಂತರ ಆಸ್ಪತ್ರೆಯತ್ತ ಮುಖ ಮಾಡಿ ವಿಪರೀತ ಸಂಕಟ ಅನುಭವಿಸಿದ್ದಾರೆ. ಇಂತಹ ವಿಷಮ ಸ್ಥಿತಿಯನ್ನು ತಪ್ಪಿಸುವ ಸಲುವಾಗಿಯೇ
ಭಟ್ಕಳ ತಾಲೂಕಿನ ಯಾವುದೇ ಭಾಗದ ಜನರು ಉಚಿತವಾಗಿ ಮೊಬೈಲ್ ಕ್ಲಿನಿಕ್ನ ನೆರವನ್ನು ಪಡೆಯಬಹುದಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದಲ್ಲಿ ಅವರನ್ನು ಬೇರೆ ಆಸ್ಪತ್ರೆಗೆ ಕಳುಹಿಸುವ ಏರ್ಪಾಟನ್ನೂ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಜನರು ಜ್ವರ, ತಂಡಿಯಂತಹ ಕಾಯಿಲೆಗೆ ಆಸ್ಪತ್ರೆಗೆ ತೆರಳುವುದು ತಪ್ಪಿದೆ |
ಭಟ್ಕಳದಲ್ಲಿ ತಂಜೀಮ್, ರಾಬಿಟೊ ಸೊಸೈಟಿ, ಇಂಡಿಯನ್ ನವಾಯತ್ ಫೋರಮ್ ಮತ್ತು ಭಟ್ಕಳ ಮುಸ್ಲೀಮ್ ಯೂಥ್ ಫೆಡರೇಶನ್ ಜಂಟಿ ಆಶ್ರಯದಲ್ಲಿ ಕಳೆದ 11-12 ದಿನಗಳಿಂದ ಮೊಬೈಲ್ ಕ್ಲಿನಿಕ್ ಯಶಸ್ವಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಕೊರೊನಾ ಇರಲಿ, ಯಾವುದೇ ಇರಲಿ ಅನ್ಯಾರೋಗ್ಯ ಪಿಡೀತರ ಮನೆ ಬಾಗಿಲಿಗೆ ವೈದ್ಯಕೀಯ ತಂಡ ತೆರಳಿ ಪರೀಕ್ಷೆ, ಚಿಕಿತ್ಸೆ ಎಲ್ಲವನ್ನೂ ನೀಡುತ್ತ ಬಂದಿದೆ.
ತಾಲೂಕಿನಲ್ಲಿ ಗಮನ ಸೆಳೆದಿರುವ ಈ ಮೊಬೈಲ್ ಕ್ಲಿನಿಕ್ಗೆ ಜಾತಿ, ಧರ್ಮದ ಕೊಳಕು ಭಿನ್ನತೆಯ ಗೀಳು ಅಂಟಿಕೊಂಡಿಲ್ಲ. ಮಾರುತಿ ಇಕೋ ವಾಹನವನ್ನೇ ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತಿಸಲಾಗಿದ್ದು, ಓರ್ವ ವೈದ್ಯರು, ನರ್ಸು, ಫಾರ್ಮಾಸಿಸ್ಟ್ ಜೊತೆಗೆ ಅನಾರೋಗ್ಯ ಪೀಡಿತರ ಆಮ್ಲಜನಕ ಮತ್ತಿತರ ಅವಶ್ಯಕತೆಗಳನ್ನು ಪರೀಕ್ಷಿಸಲು ಪ್ರತ್ಯೇಕ ಸಹಾಯಕರೋರ್ವರನ್ನು ನಿಯೋಜಿಸಲಾಗಿದೆ.
ಆಯಾ ಭಾಗದ ಕ್ರೀಡಾ ಸಂಘದ ಯುವಕರು, ಮುಖಂಡರು ತಮ್ಮ ಭಾಗದ ಅನಾರೋಗ್ಯ ಪೀಡಿತರ ಬಗ್ಗೆ ಮೊಬೈಲ್ ಕ್ಲಿನಿಕ್ಗೆ ಮಾಹಿತಿ ನೀಡುತ್ತಿದ್ದು, ವೈದ್ಯರ ವಾಹನ ಮನೆ ಬಾಗಿಲಿಗೆ ಬರುತ್ತಿದೆ. ತಾಲೂಕಿನ ಯಾವುದೇ ಭಾಗದ ಜನರು ಉಚಿತವಾಗಿ ಮೊಬೈಲ್ ಕ್ಲಿನಿಕ್ನ ನೆರವನ್ನು ಪಡೆಯಬಹುದಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದಲ್ಲಿ ಅವರನ್ನು ಬೇರೆ ಆಸ್ಪತ್ರೆಗೆ ಕಳುಹಿಸುವ ಏರ್ಪಾಟನ್ನೂ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಜನರು ಜ್ವರ, ತಂಡಿಯಂತಹ ಕಾಯಿಲೆಗೆ ಆಸ್ಪತ್ರೆಗೆ ತೆರಳುವುದು ತಪ್ಪಿದೆ.
ಪ್ರತಿ ದಿನ ಬೆಳಿಗ್ಗೆ 11.30 ರಿಂದ 1.30 ಹಾಗೂ ಸಂಜೆ 4.30ರಿಂದ 7 ಗಂಟೆಯ ಅವಧಿಯಲ್ಲಿ ಮೊಬೈಲ್ ಕ್ಲಿನಿಕ್ ಸೌಲಭ್ಯ ಲಭ್ಯವಿದ್ದು, ತಾಲೂಕಿನ ಯಾವುದೇ ಭಾಗದ ಜನರು ದೂರವಾಣಿ ಕರೆಯ ಮೂಲಕ ಕ್ಲಿನಿಕ್ ಸೇವೆಯನ್ನು ಪಡೆಯಬಹುದಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಟ್ಕಳ ಮುಸ್ಲೀಮ್ ಯೂಥ್ ಫೆಡರೇಶನ್ನ ಅಧ್ಯಕ್ಷ ಅಝೀಝ್ಉರ್ರೆಹೆಮಾನ್ ನದ್ವಿ (ಮೊ.ಸಂಖ್ಯೆ. 9900895227) , 10 ದಿನಗಳ ಅವಧಿಯಲ್ಲಿ ಮೊಬೈಲ್ ಕ್ಲಿನಿಕ್ ಸರಿಸುಮಾರು 500 ಜನರಿಗೆ ನೆರವನ್ನು ನೀಡಿದೆ. ತಾಲೂಕಿನ ಯುವಕರು, ಯುವಕ ಸಂಘದ ಪ್ರತಿನಿಧಿಗಳು ತಮ್ಮ ತಮ್ಮ ಭಾಗದ ಅನಾರೋಗ್ಯ ಪೀಡಿತರ ಬಗ್ಗೆ ಮಾಹಿತಿಯನ್ನು ಕ್ರೋಢಿಕರಿಸಿಕೊಂಡು ನಮಗೆ ನೀಡಿದರೆ ಸಾಮೂಹಿಕವಾಗಿ ಆರೋಗ್ಯ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.