ಪುತ್ತೂರು: ನೀರಿನ ಟ್ಯಾಂಕಿಗೆ ಬಿದ್ದು ಒಂದೇ ಕುಟುಂಬದ ಮೂರೂ ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಪಾಣಜೆ ಬಳಿಯ ಅರ್ಲ ಪದವಿನ ಉಡ್ಡ೦ಗಳ ಎಂಬಲ್ಲಿ ಬುಧವಾರ ಸಂಜೆ ಸಂಭವಿಸಿದೆ.
ಸಾವಿಗೀಡಾದ ಮಕ್ಕಳನ್ನು ವಿಸ್ಮಿತಾ(13) ,ಚೈತ್ರಾ (10)ಹಾಗೂ ಜಿತೇಶ್ (13) ಎಂದು ಗುರುತಿಸಲಾಗಿದೆ. ಜಿತೇಶ್ ಮತ್ತು ಚೈತ್ರಾ ಉದ್ದಂಗಳ ನಿವಾಸಿ ರವಿ ಮೂಲ್ಯ ಎಂಬವರ ಮಕ್ಕಳಾಗಿದ್ದಾರೆ. ವಿಸ್ಮಿತಾ ರವಿ ಅವರ ಸಹೋದರ ಹರೀಶ್ ಮೂಲ್ಯ ಅವರ ಪುತ್ರಿಯಾಗಿದ್ದಾರೆ.
ಮೃತಪಟ್ಟ ಮಕ್ಕಳೆಲ್ಲಾ ಬೆಟ್ಟಂಪಾಡಿಯ ಮಿತ್ತಡ್ಕ ಸರಕಾರಿ ಶಾಲೆಯ ವಿದ್ಯಾರ್ಥಿಗಳು . ಇಂದು ಶಾಲೆಗೆ ರಜೆಯಿದ್ದ ಕಾರಣ ಆಟವಾಡಲು ತೆರಳಿದ್ದರು ,ಆಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮಕ್ಕಳ ಸಾವಿನಿಂದ ಆಕ್ರೋಶಗೊಂಡ ಸ್ಥಳೀಯರು ನೀರಿನ ಟ್ಯಾಂಕ್ನ ಮುಚ್ಚಳ ಹಾಕದೆ ಬೇಜವಾಬ್ದಾರಿ ತೋರಿರುವ ಪಂಚಾಯತ್ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದು ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಮೂರು ತಿಂಗಳ ಹಿಂದಷ್ಟೇ ಈ ಟ್ಯಾಂಕ್ ನಿರ್ಮಾಣಗೊಂಡಿತ್ತು.
ಪುತ್ತೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ