ಹೊಸ ಶಿವಸೇನೆ ಕಟ್ಟುವೆವು; ಉದ್ಧವ್ ಠಾಕ್ರೆ
ಮುಂಬೈ: ಬೇಕಾದವರು ಪಕ್ಷ ತ್ಯಜಿಸ ಬಹುದು. ಹೊಸ ಶಿವಸೇನೆ ರೂಪಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ.
ಪಕ್ಷದ ಕಾರ್ಪೊರೇಟರ್ಗಳನ್ನು ಕುರಿತು ವೀಡಿಯೊ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಶಿವಸೇನೆಯ ಸಾಮಾನ್ಯ ಕಾರ್ಯಕರ್ತರು ತನ್ನ ಸಂಪತ್ತು. ಅವರು ತನ್ನೊಂದಿಗೆ ಇರುವವರೆಗೆ ತಾನು ಇತರರ ಟೀಕೆಗಳ ಕುರಿತು ತಲೆಕೆಡಿಸಿಕೊಳ್ಳಲಾರೆ ಎಂದಿದ್ದಾರೆ.
ಶಿವಸೇನೆಗೆ ಅದರದ್ದೇ ಜನರು ದ್ರೋಹ ಎಸಗಿದರು ಎಂದು ಹೇಳಿದ ಅವರು, ಸೇನೆಯ ಬಹುಪಾಲು ಶಾಸಕರು ಗುವಾಹಟಿಯಲ್ಲಿ ಬೀಡು ಬಿಟ್ಟಿರುವ ಏಕನಾಥ್ ಶಿಂದೆ ಅವರೊಂದಿಗೆ ಸೇರಿದ ಬಳಿಕ ತನ್ನ ಸರಕಾರ ಬಿಕ್ಕಟ್ಟು ಎದುರಿಸಿತು ಎಂದರು.
“ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿಮ್ಮಲ್ಲಿ ಹಲವರು ಆಕಾಂಕ್ಷಿಗಳಾಗಿದ್ದರೂ ನಾವು ಈಗಿನ ಬಂಡಾಯಗಾರರಿಗೆ ಟಿಕೆಟ್ ಗಳನ್ನು ನೀಡಿದ್ದೆವು. ನಿಮ್ಮ ಕಠಿಣ ಪರಿಶ್ರಮದಿಂದ ಚುನಾಯಿತರಾದ ಬಳಿಕ ಇವರು ಅಸಮಾಧಾನ ಗೊಂಡಿದ್ದಾರೆ. ಆದರೆ ಈ ನಿರ್ಣಾಯಕ ಸಂದರ್ಭದಲ್ಲಿ ನೀವು ಪಕ್ಷದ ಜೊತೆಗೆ ನಿಂತಿದ್ದೀರಿ. ನಾನು ನಿಮಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಕಾಗದು'' ಎಂದು ಅವರು ಹೇಳಿದರು.
“ಮೈತ್ರಿಕೂಟದ ಪಾಲುದಾರರಿಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸುವಂತೆ ನಾನು ಏಕನಾಥ್ ಶಿಂದೆಗೆ ಹೇಳಿದ್ದೆ. ಸೇನೆ ಬಿಜೆಪಿಯೊಂದಿಗೆ ಕೈ ಜೋಡಿಸಬೇಕು ಎಂದು ಶಾಸಕರು ತನಗೆ ಒತ್ತಡ ಹೇರುತ್ತಿದ್ದಾರೆ ಎಂದು ಅವರು ತಿಳಿಸಿದ್ದರು. ಅವರನ್ನು ನನ್ನ ಬಳಿ ಕರೆದುಕೊಂಡು ಬನ್ನಿ, ನಾವು ಈ ಬಗ್ಗೆ ಚರ್ಚಿಸೋಣ ಎಂದು ಹೇಳಿದ್ದೆ.
ಬಿಜೆಪಿ ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದೆ, ಅದು ಭರವಸೆಗಳಿಗೆ ಗೌರವ ನೀಡಲಿಲ್ಲ. ಹಲವು ಬಂಡಾಯ ಶಾಸಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದುದರಿಂದ ಅವರು ಬಿಜೆಪಿಯೊಂದಿಗೆ ಹೋದರೆ, ಅದು ರದ್ದುಗೊಳ್ಳುತ್ತದೆ. ಅವರು ನನ್ನೊಂದಿಗಿದ್ದರೆ ಜೈಲಿಗೆ ಹೋಗಬೇಕಾಗುತ್ತದೆ' ಎಂದು ಠಾಕ್ರೆ ತಿಳಿಸಿದರು. ಒಂದು ವೇಳೆ ಶಿವಸೇನೆ ಕಾರ್ಯಕರ್ತರು ಮುಖ್ಯಮಂತ್ರಿಯಾಗುವುದಿದ್ದರೆ, ನೀವು ಬಿಜೆಪಿಯೊಂದಿಗೆ ಹೋಗಿ. ಆದರೆ, ನೀವು ಕೇವಲ ಉಪ ಮುಖ್ಯಮಂತ್ರಿ ಆಗುವುದಿದ್ದರೆ, ನನಗೆ ತಿಳಿಸಿ, ನಾನು ನಿಮ್ಮನ್ನು ಉಪ ಮುಖ್ಯಮಂತ್ರಿ ಮಾಡುತ್ತೇನೆ ಎಂದು ಶಿಂದೆಯನ್ನು ಪರೋಕ್ಷವಾಗಿ ಉಲ್ಲೇಖಿಸಿ ಉದ್ಧವ್ ಠಾಕ್ರೆ ಹೇಳಿದರು.