ಭಟ್ಕಳ: ಪ್ರಸಕ್ತವಾಗಿ ಖಾಸಗಿ ಶಾಲೆಗಳ ಕಟ್ಟಡ, ವಾಹನ, ಸುಣ್ಣಬಣ್ಣಗಳಿಗೆ ಆಕರ್ಷಿತರಾಗಿ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲು ಪಾಲಕರು ಉತ್ಸುಕತೆಯನ್ನು ತೋರುತ್ತಿದ್ದಾರೆ. ಆದರೆ ಸರಕಾರಿ ಶಾಲೆಯಲ್ಲಿ ಓದಿದವರು ಐಎಎಸ್, ಐಪಿಎಸ್, ಕೆಎಎಸ್ನಂತಹ ಶಿಕ್ಷಣವನ್ನು ಪಡೆದು ಇತಿಹಾಸವನ್ನು ನಿರ್ಮಿಸಿದ್ದಾರೆ ಎನ್ನುವುದನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಶಾಸಕ ಸುನಿಲ್ ನಾಯ್ಕ ಹೇಳಿದರು.
ಅವರು ಶನಿವಾರ ತಾಲೂಕಿನ ಪುರವರ್ಗ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು. ಸರಕಾರ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿದೆ. ಬಿಸಿಯೂಟ, ಸೈಕಲ್, ವಿದ್ಯಾರ್ಥಿ ವೇತನ, ಲ್ಯಾಪ್ಟಾಪ್, ಪಠ್ಯಪುಸ್ತಕ, ಸಮವಸ್ತ್ರ, ಪಾದರಕ್ಷೆ ಎಲ್ಲವನ್ನೂ ನೀಡುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತ ಬಂದಿದೆ. ಸರಕಾರಿ ಶಾಲೆಗಳ ಶಿಕ್ಷಕರಲ್ಲಿ ಇಚ್ಛಾಶಕ್ತಿ ಇದ್ದು, ಪಾಲಕರು ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕು, ಶಾಲೆ, ಕಾಲೇಜುಗಳ ಪ್ರಮಾಣ ಪತ್ರಗಳು ಯಾವುದೇ ವ್ಯಕ್ತಿಯ ಹೊಟ್ಟೆಯನ್ನು ತುಂಬಿಸುವುದಿಲ್ಲ, ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ನೀಡುವ ಮೂಲಕ ಅವರನ್ನು ಎತ್ತರಕ್ಕೆ ಕೊಂಡೊಯ್ಯುವ ಹೊಣೆಗಾರಿಕೆ ಪಾಲಕರ ಮೇಲೆ ಇದೆ ಎಂದರು. ಯಲ್ವಡಿಕವೂರು ಗ್ರಾಪಂ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಯಲ್ಲಮ್ಮ, ಶಾಲಾ ಮುಖ್ಯೋಪಾಧ್ಯಾಯ ಎಮ್.ಕೆ.ಮೊಗೇರ, ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ನಾಯ್ಕ, ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ರಾಜೇಶ ನಾಯಕ್, ಎಮ್ಜಿಎಮ್ ಸಹಕಾರಿ ಪತ್ತಿನ ಅಧ್ಯಕ್ಷ ಈರಪ್ಪ ಗರ್ಡೀಕರ, ಸುರೇಶ ನಾಯ್ಕ, ಮೇರಿ ರೊಡ್ರೀಗಸ್, ವಿಜಯ್ ಬಿಜ್ಜು, ಸುಬ್ರಾಯ ನಾರಾಯಣ ನಾಯ್ಕ, ಜಲಾಲುದ್ದೀನ್, ಉದಯ ನಾಯ್ಕ, ಜಗದೀಶ ನಾಯ್ಕ, ಹರೀಶ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ರಾಘವೇಂದ್ರ ಅಡಿಗ ಎಲ್ಲರನ್ನೂ ಸ್ವಾಗತಿಸಿದರು. ಅಣ್ಣಪ್ಪ ಅಬ್ಬಿಹಿತ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಗೀತಾ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.