ಮುಂಡಗೋಡ: ಹಿತ್ತಲಬಾಗಿಲಿನ ಮೂಲಕ ಒಳಪ್ರವೇಶಿಸಿ ಕಳ್ಳರು ತಮ್ಮ ಕರಾಮತ್ತು ತೋರಿಸಿ ಲಕ್ಷಾಂತರ ರೂ ದೊಚಿಕೊಂಡಹೋದ ಘಟನೆ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗಿನಜಾವ ನಡೆದಿದೆ
ಒಟ್ಟು ಆರು ಮನೆಗಳಿಗೆ ದೋಚಲು ಹೊಂಚುಹಾಕಿದ್ದ ಕಳ್ಳರಿಗೆ ಎರಡು ಮನೆಗಳಲ್ಲಿ ನಗನಾಣ್ಯ ದೋಚಿದ್ದಾರೆ.
ಕಳ್ಳರು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಮನೆಗಳ ಹಿಂಬದಿಯ ಬಾಗಿಲಿನ ಮೂಲಕ ಒಳಗೆ ಬಂದು, ಮನೆಯಲ್ಲಿ ಕುಟುಂಬದವರು ಗಾಢ ನಿದ್ರೆಯಲ್ಲಿದ್ದಾಗ, ಕಪಾಟಿನಲ್ಲಿದ್ದ ನಗನಾಣ್ಯ, ಆಭರಣ ದೋಚಿದ್ದಾರೆ ಎಂದು ಹೇಳಲಾಗುತ್ತಿದೆ.
ಪರುಶುರಾಮ ತಳವಾರ ಹಾಗೂ ಕುಬೇರಪ್ಪ ಮಾತ್ರೋಜಿ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಎರಡೂ ಮನೆಯಲ್ಲಿ ಮೂರು ತೊಲೆ ಬಂಗಾರ, 25ತೊಲೆ ಬೆಳ್ಳಿ ಹಾಗೂ 30ಸಾವಿರ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಒಂದು ಮನೆಯಲ್ಲಿ ಮೊಬೈಲ್ ಸಹ ತೆಗೆದುಕೊಂಡು ಹೋಗಿದ್ದಾರೆ.
ಒಂದು ಮನೆಯಲ್ಲಿ ಮಹಿಳೆಯೊಬ್ಬರಿಗೆ ಎಚ್ಚರವಾಗಿದೆ. ಆಗ ಕತ್ತಲಲ್ಲಿ ಒಬ್ಬ ವ್ಯಕ್ತಿ ಕಪಾಟಿನಿಂದ ಏನೋ ತೆಗೆದುಕೊಂಡು ಹಿತ್ತಲಿನ ಬಾಗಿಲಿತ್ತ ಹೋಗುವುದು ಕಂಡುಬಂದಿದೆ. ಮಹಿಳೆಯು ತನ್ನ ಮಗ ಬಹಿರ್ದೆಸೆಗೆ ಹಿತ್ತಲಿಗೆ ಹೋಗಿರಬಹುದು ಎಂದು ಸುಮ್ಮನಾಗಿದ್ದಾರೆ. ಕೆಲ ಹೊತ್ತಿನ ನಂತರ ಮಗ ಮರಳಿ ಬಾರದಿರುವಾಗ ಲೈಟ್ ಹಾಕಿ ನೋಡಿದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.
ಮತ್ತೊಂದು ಮನೆಯ ಗೋಡೆಯ ಇಟ್ಟಿಗೆ ತೆಗೆದಿದ್ದಾರೆ. ಆದರೆ ಇಟ್ಟಿಗೆ ತುಂಡು ಪಾತ್ರೆಯ ಮೇಲೆ ಬಿದ್ದು ಶಬ್ಧ ಆಗಿದ್ದರಿಂದ ಕಳ್ಳರು ಓಡಿದ್ದಾರೆ ಎನ್ನಲಾಗಿದೆ. ಒಂದು ಮನೆಯಲ್ಲಿ ಹಿತ್ತಲಿನ ಬಲ್ಬ್ ತೆಗೆದು ಕಳ್ಳ ಒಳ ಹೋಗಲು ಪ್ರಯತ್ನಿಸಿದ್ದಾನೆ. ಆದರೆ ಕೊಟ್ಟಿಗೆಯಲ್ಲಿದ್ದ ಎತ್ತುಗಳು ಹಾಯಲು ಮುಂದಾಗಿದ್ದರಿಂದ ಹೆದರಿ ಓಡಿಹೋಗಿದ್ದಾನೆ ಎಂದು ಹೇಳಲಾಗುತ್ತಿದೆ.
ಕಳ್ಳತನದ ಸುದ್ದಿ ಬೆಳಿಗ್ಗೆ ಗ್ರಾಮದಲ್ಲಿ ಹಬ್ಬಿ, ಗ್ರಾಮಸ್ಥರು ತಮ್ಮ ತಮ್ಮ ಮನೆಯಲ್ಲಿ ಏನಾಗಿದೆ ಎಂದು ಪರಿಶೀಲಿಸಿದರು. ಕಳ್ಳರ ತಂಡವೊಂದು ಒಂದೆ ಸಮಯದಲ್ಲಿ ವಿವಿಧ ಓಣಿಗಳಲ್ಲಿ ಕಳ್ಳತನಕ್ಕೆ ಮುಂದಾಗಿದೆ ಎಂಬ ಸಂಶಯ ವ್ಯಕ್ತವಾಗಿದೆ ಕೆಲವೆಡೆ ಸಫಲರಾಗಿದ್ದರೇ, ಮತ್ತೆ ಕೆಲವೆಡೆ ವಿಫಲ ಯತ್ನ ನಡೆಸಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಕಾರವಾರದಿಂದ ಶ್ವಾನ ದಳ ಬಂದು ಕಳ್ಳರನ್ನು ಹುಡುಕುವ ಪ್ರಯತ್ನ ಮಾಡಿತು. ಎರಡು ಮನೆಗಳ ಹಿತ್ತಲಿನವರೆಗೆ ಓಡಿದ ನಾಯಿಯು ಮತ್ತೆ ಮರಳಿ ಮನೆ ಒಳಗೆ ಬರುತ್ತಿತ್ತು. ಗ್ರಾಮಸ್ಥರು ನಾಯಿ ಎಲ್ಲಿ ಹೋಗಿ ಯಾರನ್ನು ಹಿಡಿಯುತ್ತದೆ ಎಂದು ಕುತೂಹಲದಿಂದ ಜಮಾವಣೆಗೊಂಡು ವೀಕ್ಷಿಸಿದರು. ಬೆರಳಚ್ಚು ತಜ್ಞರು ಸಹ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.