ನವದೆಹಲಿ: ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಂಡಾಯವಿಲ್ಲ, ಸುಧಾರಣೆಯನ್ನು ಎದುರು ನೋಡುತ್ತಿರುವುದಾಗಿ ಪಕ್ಷದ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಇತರ ಅಭ್ಯರ್ಥಿಗಳು ಇಲ್ಲ, ಪಕ್ಷಕ್ಕೆ ಅಗತ್ಯವಾದದ್ದನ್ನು ನಿರ್ದೇಶಿಸುವವರಲ್ಲಿ ನಾವೆಲ್ಲಾ ನಂಬಿಕೆ ಹೊಂದಿದ್ದೇವೆ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಬಿಹಾರ ವಿಧಾನಸಭಾ ಹಾಗೂ ಉಪ ಚುನಾವಣೆಯಲ್ಲಿ ಕಳಪೆ ಸಾಧನೆ ಬಗ್ಗೆ ಆತಂಕಗೊಂಡಿದ್ದೇವೆ. ಸೋಲಿಗೆ ನಾಯಕತ್ವವನ್ನು ದೂಷಿಸುವುದಿಲ್ಲ, ತಳಮಟ್ಟದ ಕಾರ್ಯಕರ್ತರ ಜೊತೆಗೆ ಸಂಪರ್ಕ ಕಳೆದುಕೊಂಡಿದ್ದೇ ಸೋಲಿಗೆ ಕಾರಣ ಎಂದು ಹೇಳಿದರು.
ಚುನಾವಣೆ ವೇಳೆ ಅಭ್ಯರ್ಥಿಗಳು ಟಿಕೆಟ್ ಸಿಕ್ಕ ಕೂಡಲೇ 5 ಸ್ಟಾರ್ ಹೊಟೇಲ್ಗಳಲ್ಲಿ ರೂಂ ಬುಕ್ ಮಾಡಿಬಿಡ್ತಾರೆ. ಪಕ್ಷದ ಪರ ಪ್ರಚಾರಕ್ಕೆ ಕಚ್ಚಾ ರಸ್ತೆಗಳಲ್ಲಿ ತೆರಳೋದಿಲ್ಲ. ಈ 5 ಸ್ಟಾರ್ ಸಂಸ್ಕೃತಿ ಹೋಗುವವರೆಗೂ ಗೆಲುವು ಅಸಾಧ್ಯ ಎಂದು ಆಜಾದ್ ತಿಳಿಸಿದ್ದಾರೆ.
ನಮ್ಮ ಕಾರ್ಯನಿರ್ವಹಣಾ ವಿಧಾನವನ್ನು ಪ್ರತಿ ಹಂತದಲ್ಲಿಯೂ ಸುಧಾರಣೆ ಮಾಡಿಕೊಳ್ಳಬೇಕಿದೆ. ಇಲ್ಲವಾದರೆ, ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ ಎಂದಿರುವ ಗುಲಾಂ ನಬಿ ಆಜಾದ್, ಪಕ್ಷದ ವಿವಿಧ ಸ್ಥರಗಳಲ್ಲಿ ನೇಮಕಾತಿಗೆ ಚುನಾವಣೆಗಳು ನಡೆಯಬೇಕಿದೆ ಎಂದು ಆಗ್ರಹಿಸಿದ್ದಾರೆ