ಉತ್ತರಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು. 75ಲಕ್ಷ ರೂ ಮೌಲ್ಯದ ಸ್ವತ್ತು ವಶಕ್ಕೆ.

Source: SO News | By Laxmi Tanaya | Published on 6th December 2021, 9:13 PM | Coastal News |

ಕಾರವಾರ : ಉತರಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ  ಅಪರಾಧ ಪ್ರಕರಣಗಳನ್ನ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.     

                     ಜಿಲ್ಲೆಯಲ್ಲಿ 2021 ನೇ ಸಾಲಿನಲ್ಲಿ ಒಟ್ಟೂ 18 ಕೊಲೆ ಪ್ರಕರಣಗಳು ದಾಖಲಾಗಿದ್ದು, ಶೀಘ್ರದಲ್ಲಿ ತನಿಖೆ ಕೈಕೊಂಡು ಮಾಹಿತಿ ಕಲೆಹಾಕಿ ಆರೋಪಿತರನ್ನು ಪತ್ತೆ ಹಚ್ಚಲಾಗಿದೆ. 2020 ನೇ ಸಾಲಿನಲ್ಲಿ ಮುಂಡಗೋಡದಲ್ಲಿ ಅಸ್ತಿಪಂಜರವಾಗಿ ಯಾವುದೇ ಕುರುಹುಗಳಿಲ್ಲದೇ ಸಿಕ್ಕ ಅಪರಿಚಿತ ಶವದ ಬಗ್ಗೆ ತನಿಖೆ ಕೈಗೊಂಡು ಆರೋಪಿತರನ್ನು ಪತ್ತೆ ಮಾಡಿದ್ದಾರೆ.

ಮುಂಡಗೊಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿತರು ಬಂಗಾರ ನೀಡುವುದಾಗಿ ಹೇಳಿ, 22,50,000/- ನಗದು ಹಣವನ್ನು ದರೊಡೆ ಮಾಡಿದ್ದು, ಹಾಗೂ ಇನ್ನೊಂದು ದರೋಡೆ ಪ್ರಕರಣದಲ್ಲಿ ಕಾತೂರ ರಸ್ತೆಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಹಣವನ್ನು ವಸೂಲಿ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದ್ದು ಎರಡು ಪ್ರಕರಣದಲ್ಲಿ ಚುರುಕುತನದ ತನಿಖೆಯಿಂದ ಆರೋಪಿತರನ್ನು ದಸ್ತಗಿರಿ ಮಾಡಿದ್ದಾರೆ.   

                ಜಿಲ್ಲೆಯಲ್ಲಿ 10 ಸುಲಿಗೆ ಪ್ರಕರಣಗಳಲ್ಲಿ 08 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 36 ಹಗಲು ಹಾಗೂ ರಾತ್ರಿ ಕಳವು ಪ್ರಕರಣಗಳಲ್ಲಿ ಆರೋಪಿತರನ್ನು ದಸ್ತಗಿರಿ ಮಾಡಿ ಅವರಿಂದ ಸುಮಾರು 34 ಲಕ್ಷ ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.       

ಗೊಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಕನ್ನಾ ಕಳುವಿಗೆ ಸಂಬಂಧಪಟ್ಟಂತೆ 07 ಜನ ಆರೊಪಿತರನ್ನು ದಸ್ತಗಿರಿ ಮಾಡಿ, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಒಟ್ಟು 18 ಪ್ರಕರಣಗಳನ್ನು ಪತ್ತೆ ಮಾಡಿ, ಸುಮಾರು 12 ಲಕ್ಷ ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.  ಒಟ್ಟೂ 12 ವಾಹನ ಕಳುವು ಪ್ರಕರಣ, 21 ಸಾದಾ ಕಳುವು ಪ್ರಕರಣ ಪತ್ತೆಹಚ್ಚಲಾಗಿರುತ್ತದೆ. 

        ಒಟ್ಟಾರೆ ಉತ್ತರಕನ್ನಡ ಜಿಲ್ಲೆಯಲ್ಲಿ ಸುಮಾರು 204 ಪ್ರಕರಣಗಳು ದಾಖಲಾಗಿದ್ದು, 97 ಪ್ರಕರಣಗಳನ್ನು ಪತ್ತೆ ಮಾಡಿ, ಅಂದರೆ ಸರಾಸರಿ ಶೇ 50 ರಷ್ಟು ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಈವರೆಗೆ ಒಟ್ಟೂ 75 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

 ಜಿಲ್ಲೆಯಲ್ಲಿ ಸ್ವತ್ತು ಪ್ರಕರಣಗಳಲ್ಲಿ ಪತ್ತೆಹಚ್ಚಿದ ಪ್ರಕರಣಗಳಲ್ಲಿ ವಾರಸುದಾರರಿಗೆ ವಶಪಡಿಸಿಕೊಂಡ ಸ್ವತ್ತನ್ನು ಮರಳಿಸುವ ಕಾರ್ಯಕ್ರಮ ಸೋಮವಾರ ಸಾಂಕೇತಿಕವಾಗಿ ನಡೆಸಲಾಯಿತು. ವಾರಸುದಾರರಿಗೆ ಜಿಲ್ಲೆಯ ಬೆರೆ-ಬೆರೆ ಸ್ಥಳಗಳಿಂದ ಆಗಮಿಸಲು ತೊಂದರೆ ಆಗುವ ಕಾರಣ ಮುಂದಿನ ದಿನಗಳಲ್ಲಿ, ಉಪ ವಿಭಾಗವಾರು ಸ್ವತ್ತನ್ನು ವಾರಸುದಾರರಿಗೆ ಹಿಂತಿರುಗಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಉಪ ವಿಭಾಗಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ.     

           ಈ ಸಂದರ್ಭದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಸಹಾಯಕ ಪೊಲೀಸ್ ಉಪ ನಿರೀಕ್ಷಕ ನಾರಾಯಣ ಜೋಗಿ ಮಡಿವಾಳ,   ರಾಮಾ ಎಮ್. ಕುದ್ರಗಿ,  ಕರಬಸಪ್ಪ ಇಂಗಳಸೂರ,  ರಮೇಶ ಕೂಡಲ, ಯಶಂತ ಒಳಗಿ,  ಮೋಹನ ಗಾವಡಿ ರವರಿಗೆ ನಗದು ಬಹುಮಾನ ಹಾಗೂ ಪ್ರಸಂಶನಾ ಪತ್ರ ನೀಡಲಾಯಿತು. 

Read These Next