ಬಾಂಬೆ ಹೈ ಸಮೀಪ ಮುಳುಗಿದ ಬಾರ್ಜ್, 96 ಮಂದಿ ನಾಪತ್ತೆ, ಬಾರ್ಜ್ನಲ್ಲಿ 273 ಮಂದಿ ಇದ್ದರು, 177 ಸಿಬ್ಬಂದಿಯ ರಕ್ಷಣೆ, ಮುಂದುವರಿದ ಶೋಧ
ಮುಂಬೈ: ತೌಕ್ತೆ ಚಂಡಮಾರುತದ ಪ್ರಭಾವದಿಂದ ಬಾಂಬೆ ಹೈ ಸಮೀಪ ಸಿಲುಕಿಕೊಂಡಿದ್ದ 273 ಸಿಬ್ಬಂದಿಯಿದ್ದ ಬಾರ್ಜ್ ಮುಳುಗಿದೆ. ಭಾರತೀಯ ನೌಕಾ ಪಡೆ ಮಂಗಳವಾರ ಬೆಳಗ್ಗಿನವರೆಗೆ ಕಾರ್ಯಾಚರಣೆ ನಡೆಸಿ 177ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಸಫಲವಾಗಿದೆ. ಇತರ 96 ಮಂದಿಯ ಶೋಧ ಕಾರ್ಯ ಮುಂದುವರಿದಿದೆ.
ತೀವ್ರ ಸ್ವರೂಪದ ಚಂಡಮಾರುತ ಮುಂಬೈಯಲ್ಲಿ ಹಾವಳಿ ಎಬ್ಬಿಸಿ ಗುಜರಾತ್ ಕರಾವಳಿಗೆ ಅಪ್ಪಳಿಸಿದ ಒಂದು ದಿನದ ಬಳಿಕ ಮಂಗಳವಾರ ರಕ್ಷಣೆ ಹಾಗೂ ಶೋಧ ಕಾರ್ಯಾಚರಣೆಯನ್ನು ನೌಕಾ ಪಡೆ ತೀವ್ರಗೊಳಿಸಿದೆ. ತೌಕ್ತೆ ಚಂಡಮಾರುತದ ಪ್ರಭಾವದಿಂದ ದಡದಾಚೆ ತೈಲ ತೆಗೆಯಲು ನಿಯೋಜಿಸಲಾಗಿದ್ದ 273 ಸಿಬ್ಬಂದಿ ಇದ್ದ ಬಾರ್ಜ್ ಪಿ305 ಲಂಗರು ಕಡಿದುಕೊಂಡಿತು ಹಾಗೂ ತೇಲಿ ದೂರ ಸಾಗಿತ್ತು ಎಂದು ರಾಜ್ಯ ಸ್ವಾಮಿತ್ವದ ತೈಲ ಹಾಗೂ ನೈಸರ್ಗಿಕ ಅನಿಲ ಕಾರ್ಪೊರೇಶನ್ (ಒಎನ್ಜಿಸಿ) ಸೋಮವಾರ ತಿಳಿಸಿತ್ತು. ಭಾರತೀಯ ನೌಕಾ ಪಡೆಯ ಪಿ8ಐ ಕಣ್ಗಾವಲು ವಿಮಾನದ ಮೂಲಕ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆಯನ್ನು ಮಂಗಳವಾರ ಬೆಳಗ್ಗೆ ತೀವ್ರಗೊಳಿಸಲಾಗಿದೆ. ಹವಾಮಾನ ಪರಿಸ್ಥಿತಿ ಆಧರಿಸಿ ಭಾರತೀಯ ವಾಯು ಪಡೆಯ ಹೆಲಿಕಾಪ್ಟರ್ಗಳನ್ನು ಕೂಡ ನಿಯೋಜಿಸಲಾಗುವುದು ಎಂದು ಭಾರತೀಯ ನೌಕಾ ಪಡೆ ತಿಳಿಸಿದೆ.