ಕೋಲಾರ:ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು, ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳು ಚಲಾವಣೆಯಾಗುವಂತೆ ಬ್ಲಾಕ್ ಮಟ್ಟದ ಅಧಿಕರಿಗಳು (ಬಿ.ಎಲ್.ಓ) ಹೆಚ್ಚು ಕಾಳಜಿವಹಿಸಬೇಕು ಎಂದು ಶ್ರೀನಿವಾಸಪುರ ತಾಲ್ಲೂಕಿನ ತಹಶೀಲ್ದಾರ್ರಾದ ರಾಜೀವ್ ಅವರು ತಿಳಿಸಿದರು.
ಬೂತ್ ಮಟ್ಟದಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲು ಇಂದು ನಗರದ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಿದ್ದ ಬಿ.ಎಲ್.ಓ ಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿಎಲ್ಓ ಗಳು ಮತಗಟ್ಟೆ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳಾದ ವಿದ್ಯುತ್, ನೀರು, ಊಟದ ವ್ಯವಸ್ಥೆಗಳನ್ನು ಪರಿಶೀಲಿಸಬೇಕು.
ಮತದಾರರು ಉತ್ತಮ ಪ್ರಜೆಗಳನ್ನು ಆಯ್ಕೆ ಮಾಡಿಕೊಳ್ಳಲು, ನವ ಸಮಾಜವನ್ನು ನಿರ್ಮಿಸಲು ಮತದಾರರು ಮುಂದಾಗಬೇಕು. ಶಾಂತಿಯುತವಾಗಿ ಮತದಾನ ನಡೆಯುವಂತೆ ಸಹಕರಿಸಬೇಕು. ಬಿಎಲ್ಓಗಳು ಚುನಾವಣೆ ನಿಮಿತ್ತ ನಿಯೋಜಿಸಿರುವ ಕಾರ್ಯಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗಬೇಕು ಎಂದು ಸೂಚಿಸಿದರು.
ಇವಿಎಂ ಮತಯಂತ್ರವು ಪಾರದರ್ಶಕವಾಗಿದ್ದು, ಮತ ಚಲಾಯಿಸುವ ಮತದಾರರು ಯಾವುದೇ ಗೊಂದಲಕ್ಕೀಡಾಗಬಾರದು. ಚುನಾವಣೆ ಫಲಿತಾಂಶದ ವೇಳೆ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ತೆಗೆಯುವಾಗ ಸರ್ಕಾರಿ ಉದ್ಯೋಗಿಗಳು, ರಾಜಕೀಯ ಮುಖಂಡರ ಸಮ್ಮುಖದಲ್ಲಿ ಕರೆಯಲಾಗುತ್ತದೆ. ಇದರಿಂದ ಯಾವುದೇ ಲೋಪಕ್ಕೆ ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣಾಧಿಕಾರಿಗಳಾದ ಸಂಸುನಿತಾ ಅವರು ಮಾತನಾಡಿ, ತರಬೇತಿ ಕಾರ್ಯಕ್ರಮದಲ್ಲಿ ಹೆಚ್ಚು ಮಹಿಳೆಯರಿದ್ದು, ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಪ್ರೌಢಶಾಲೆ ಮತ್ತು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಾರ್ವತ್ರಿಕ ಚುನಾವಣೆಯ ಮಹತ್ವವನ್ನು ತಿಳಿಸಬೇಕು. 18 ವರ್ಷ ತುಂಬಿದ ಯುವಕರಿಗೆ ಮತ ಚಲಾಯಿಸುವ ಬಗ್ಗೆ ಜಾಗೃತಿ ಮೂಡಿಸಬೇಕು. ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಬೇಕು. ಮತ ಚಲಾಯಿಸುವ ಯಂತ್ರವಾದ ಇವಿಎಂ ಹಾಗೂ ವಿವಿಪ್ಯಾಟ್ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣಸ್ವಾಮಿ, ಸಂಪನ್ಮೂಲ ವ್ಯಕ್ತಿಗಳಾದ ರಿಯಾಜ್ಉಲ್ಲಾ, ನಾರಾಯಣಸ್ವಾಮಿ, ತಿಪ್ಪಣ್ಣ, ಬಿ.ಎಲ್.ಓ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.