ಧಾರವಾಡ : ಭಾರತದ ಸಂವಿಧಾನವು ರಾಷ್ಟ್ರದ ಪ್ರಜೆಗಳಿಗೆ ಸಕ್ರೀಯವಾಗಿ ಆಡಳಿತದಲ್ಲಿ ಪಾಲ್ಗೋಳ್ಳಲು ಸಹಾಯವಾಗುವಂತೆ ಪ್ರತಿಯೊಬ್ಬ ವಯಸ್ಕ ನಾಗರಿಕನಿಗೆ ಮತದಾನದ ಹಕ್ಕನ್ನು ನೀಡಿದೆ. ವಿಶ್ವದಲ್ಲಿ ಅತ್ಯಂತ ಬೃಹತಾದ ಪ್ರಜಾಪ್ರಭುತ್ವವನ್ನು ಭಾರತದಲ್ಲಿ ಸತ್ವಯುತವಾಗಿ ಬೆಳೆಸಲು ಬದ್ಧವಾಗಿರುವ ಭಾರತೀಯ ಚುನಾವಣಾ ಆಯೋಗ ಸ್ಥಾಪನೆಗೊಂಡಿರುವ ಜನವರಿ 25 ನ್ನು ರಾಷ್ಟ್ರೀಯ ಮತದಾರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಿದಂಬರ.ಕೆ., ಅವರು ಹೇಳಿದರು.
ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಂಯುಕ್ತವಾಗಿ ವಿವಿಧ ಪದವಿ ಪೂರ್ವ ಕಾಲೇಜುಗಳ ಮತದಾರ ಸಾಕ್ಷರತಾ ಕ್ಲಬ್ಗಳ ಸಹಯೋಗದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ಯ ಏರ್ಪಡಿಸಲಾಗಿದ್ದ ಬೃಹತ್ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬ ಭಾರತೀಯ ವಯಸ್ಕ ನಾಗರಿಕನು ಪ್ರತಿ ಚುನಾವಣೆಗಳಲ್ಲಿ ತಪ್ಪದೇ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು. ತಮ್ಮ ಅಮೂಲ್ಯ ಮತದಾನದ ಮೂಲಕ ಪ್ರಾಮಾಣಿಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಮತದಾರರು ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗದೇ ದೇಶದ ಹಿತ, ಅಭಿವೃದ್ಧಿಗಾಗಿ ಮತ ಚಲಾಯಿಸಬೇಕು. ಯುವ ಮತದಾರರು ತಮ್ಮ ಮತದಾನದ ಹಕ್ಕನ್ನು ರಾಷ್ಟ್ರದ ಮುನ್ನಡೆ, ಬದಲಾವಣೆಗೆ ಆದ್ಯತೆ ನೀಡುವುದಕ್ಕಾಗಿ ತಪ್ಪದೇ ಮತ ಚಲಾಯಿಸಬೇಕೆಂದು ಅವರು ಹೇಳಿದರು.
ಜಾಥಾ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ತರಬೇತಿದಾರ ಕೆ.ಎಮ್.ಶೇಖ್, ಜಿಲ್ಲಾ ಮತದಾರ ಸಾಕ್ಷರತಾ ಸಮಿತಿಗಳ ನೋಡೆಲ್ ಅಧಿಕಾರಿ ಹಾಗೂ ಮದಿನಾ ಪಿ.ಯು ಕಾಲೇಜಿನ ಪ್ರಾಚಾರ್ಯ ಎಮ್.ವ್ಹಿ. ಹಡಪದ, ಧಾರವಾಡ ಸರಕಾರಿ ಪ.ಪೂ.ಕಾಲೇಜಿನ ಪ್ರಾಚಾರ್ಯ ಲಿಂಗರಾಜ ಬೆಲ್ಲದ, ನಿಗದಿ ಸರಕಾರಿ ಪ.ಪೂ.ಕಾಲೇಜಿನ ಪ್ರಾಚಾರ್ಯ ಪಿ.ಕೆ. ಯಾವಗಲ್, ಉಪನ್ಯಾಸಕರಾದ ವಾಯ್.ಎಚ್. ಭಜಂತ್ರಿ, ಎಸ್.ವ್ಹಿ. ಬಸವರಡ್ಡಿ, ಆರ್.ಎಸ್. ಭಜಂತ್ರಿ, ಸಂಜಿವ, ಚಂದ್ರಶೇಖರ, ಎಸ್.ಎಮ್. ಎಲಿಗಾರ, ಎ.ಎಮ್. ಮುಲ್ಲಾ ಹಾಗೂ ಶಿಕ್ಷಕ ಎಪ್.ಬಿ. ಕಣವಿ ನೇತೃತ್ವದ ಸ್ನೇಹರಂಗ ಕಲಾತಂಡದ ಸದಸ್ಯರು ಮತದಾರ ಜಾಗೃತಿ ಗೀತೆಗಳೊಂದಿಗೆ ವಿವಿಧ ಸರಕಾರಿ ಪದವಿ ಪೂರ್ವ ಕಾಲೇಜುಗಳ ಆರ್.ಎಲ್.ಎಸ್., ಅಂಜುಮನ್, ಮದೀನಾ ಸೇರಿದಂತೆ ವಿವಿಧ ಅನುದಾನಿತ, ಅನುದಾನ ರಹಿತ ಕಾಲೇಜುಗಳ ಪ್ರಾಚಾರ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ಮತದಾರ ಜಾಗೃತಿ ಜಾಥಾ ಕಾರ್ಯಕ್ರಮವು ಆರ್.ಎನ್. ಶೆಟ್ಟಿ ಕ್ರೀಡಾಂಗಣದಿಂದ ಆರಂಭವಾಗಿ ಆಲೂರು ವೆಂಕಟರಾವ್ ವೃತ್ತ, ಹಳೆ ಬಸ್ನಿಲ್ದಾಣ, ವಿವೇಕಾನಂದ ವೃತ್ತದ ಮೂಲಕ ಜಿಲ್ಲಾ ನ್ಯಾಯಾಲಯದ ಮೂಲಕ ಆರ್.ಎನ್. ಶೆಟ್ಟಿ ಕ್ರೀಡಾಂಗಣಕ್ಕೆ ಬಂದು ಮುಕ್ತಾಯವಾಯಿತು.