ಹೊಸದಿಲ್ಲಿ: ಪುಲ್ಲಾಮಾ ಭಯೋತ್ಪಾದಕ ದಾಳಿ ಮೊದಲೇ ವಿಶ್ವಾಸಾರ್ಹ ಗುಪ್ತಚರ ಮಾಹಿತಿ ಸಿಕ್ಕಿತ್ತು

Source: VB News | By S O News | Published on 17th February 2021, 1:29 PM | National News |

ಹೊಸದಿಲ್ಲಿ: ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆಬ್ರವರಿ 14ರಂದು ಭದ್ರತಾ ಪಡೆಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಮುಂಚಿತವಾಗಿಯೇ ವಿಶ್ವಾಸಾರ್ಹ ಗುಪ್ತಚರ ಮಾಹಿತಿಯನ್ನು ಅಧಿಕಾರಿಗಳಿಗೆ ರವಾನಿಸಲಾಗಿತ್ತು. ಆದರೆ ಅವರು ಸಕಾಲಿಕ ಕ್ರಮ ಕೈಗೊಳ್ಳಲು ವಿಫಲವಾದ್ದರಿಂದ ಭಯೋತ್ಪಾದಕರು ತಮ್ಮ ಯೋಜನೆಯಲ್ಲಿ ಯಶಸ್ವಿಯಾದರು ಎಂದು 'ದಿ ಫ್ರಂಟ್‌ಲೈನ್” ತನಿಖಾ ವರದಿಯಲ್ಲಿ ಉಲೇಖಿಸಲಾಗಿದೆ.

ಈ ದಾಳಿಯಲ್ಲಿ 44 ಸಿಆರ್‌ ಪಿಎಫ್ ಯೋಧರು ಬಲಿಯಾಗಿದ್ದರು. ಇದರಲ್ಲಿ ಎರಡು ಕ್ರಮಯೋಗ್ಯ ಮಾಹಿತಿಯಾಗಿದ್ದವು. ಭಯೋತ್ಪಾದಕರು ಇರುವ ಸ್ಥಳ, ಅವರ ಗುರುತಿನ ಕುರಿತ ಗುಪ್ತಚರ ಮಾಹಿತಿಯನ್ನು ಕ್ರಮಯೋಗ್ಯ ಮಾಹಿತಿ ಎನ್ನಲಾಗುತ್ತದೆ. ಕನಿಷ್ಠ ಪಕ್ಷ ಈ ಎರಡು ಕ್ರಮಯೋಗ್ಯ ಮಾಹಿತಿಯ ಬಗ್ಗೆಯಾದರೂ ಅಧಿಕಾರಿಗಳು ಸಕಾಲಿಕ ಕ್ರಮ ಕೈಗೊಂಡಿದ್ದರೆ ದಾಳಿಯನ್ನು ತಡೆಯಬಹುದಾಗಿತ್ತು ಎಂದು ಮೂಲಗಳು ಹೇಳಿವೆ.

ದಾಳಿಗೂ ಮುನ್ನಲಭಿಸಿದ ಗುಪ್ತಚರ ವರದಿಗಳಿವು:
2019ರ ಜನವರಿ 2:  ರಾಜ್‌ಪೋರಾದಲ್ಲಿ ತನ್ನ ನಾಲ್ವರು ಸದಸ್ಯರ ಹತ್ಯೆಗೆ ಸೇಡು ತೀರಿಸಲು ಜೈಶೆ ಮುಹಮ್ಮದ್ (ಜೆಇಎಂ) ಸಂಘಟನೆ ದಕ್ಷಿಣ ಕಾಶ್ಮೀರದಲ್ಲಿ ಯೋಜನೆಯನ್ನು ರೂಪಿಸಿದೆ ಎಂದು 2019ರ ಜನವರಿ 2ರಂದು ಗುಪ್ತಚರ ಮಾಹಿತಿ ಲಭ್ಯವಾಗಿತ್ತು. ಇದನ್ನು ಜಮ್ಮು-ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರು ಹಾಗೂ ಕಾಶ್ಮೀರ ಪೊಲೀಸ್ ಐಜಿಪಿಯವರಿಗೂ ರವಾನಿಸಲಾಗಿತ್ತು.

2019ರ ಜನವರಿ 3: 2018ರಲ್ಲಿ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ 183ನೇ ಬಟಾಲಿಯನ್ ಶಿಬಿರದ ಮೇಲೆ ನಡೆದ ದಾಳಿಯ ರೀತಿಯಲ್ಲೇ ಮತ್ತೊಂದು ದಾಳಿಗೆ ಸಂಚು ನಡೆಯುತ್ತಿದೆ ಎಂದು ವಿವರವಾದ ಮಾಹಿತಿ ರವಾನಿಸಲಾಗಿತ್ತು.

2019ರ ಜನವರಿ 7: ಶೋಫಿಯಾನ್ ಜಿಲ್ಲೆಯಲ್ಲಿ ಸಕ್ರಿಯವಾಗಿರುವ ವ್ಯಕ್ತಿಗಳು(ಇವರಲ್ಲಿ ಒಬ್ಬ ವಿದೇಶೀಯ ಎಂದು ಹೇಳಲಾಗುತ್ತಿದೆ) ದಕ್ಷಿಣ ಕಾಶ್ಮೀರದಲ್ಲಿ ಐಇಡಿ(ಸುಧಾರಿತ ಸ್ಫೋಟಕ ಸಾಧನ) ತಯಾರಿ ಮತ್ತು ಸ್ಫೋಟದ ಬಗ್ಗೆ ಸ್ಥಳೀಯ ಯುವಕರಿಗೆ ತರಬೇತಿ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಭದ್ರತಾ ಪಡೆಯನ್ನು ಗುರಿಯಾಗಿಸಿ ಸ್ಫೋಟಕ ಮತ್ತು ಗ್ರೆನೇಡ್ ಎಸೆಯಲು ಇವರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿತ್ತು.

2019ರ ಜನವರಿ 18: ಪುಲ್ವಾಮಾದ ಆವಂತಿಪೊರ ಪ್ರದೇಶದಲ್ಲಿ ಸ್ಥಳೀಯ ಯುವಕರ ಗುಂಪೊಂದು, ವಿದೇಶಿ ವ್ಯಕ್ತಿಗಳ ನೆರವಿನಿಂದ 'ಗೊಂದಲ ಮತ್ತು ಕೋಲಾಹಲ ಹುಟ್ಟಿಸುವ ಚಟುವಟಿಕೆ ನಡೆಸಲು ಯೋಜನೆ ರೂಪಿಸಿದೆ ಎಂದು ಮಾಹಿತಿ ನೀಡಲಾಗಿತ್ತು.

2019ರ ಜನವರಿ 21: ಮಸೂದ್ ಅಝರ್‌ನ ಸೋದರಳಿಯ ತಲ್ಲಾ ರಶೀದ್‌ನ ಹತ್ಯೆಗೆ ಪ್ರತೀಕಾರ ತೀರಿಸಲು ಜೆಇಎಂ ಯೋಜನೆ ರೂಪಿಸಿದೆ ಎಂದು 'ದಪ್ಪ ಅಕ್ಷರ'ದಲ್ಲಿ ಬರೆದು ವಿಶೇಷ ಮಾಹಿತಿ ನೀಡಲಾಗಿತ್ತು.

2019ರ ಜನವರಿ 24: ಮುದಸಿರ್ ಖಾನ್ ನೇತೃತ್ವದ ಜೆಇಎಂ ಘಟಕ ಮಹಾಪಾತಕ ಕೃತ್ಯದ ಯೋಜನೆ ರೂಪಿಸುತ್ತಿದೆ ಎಂದು ಮಾಹಿತಿ ನೀಡಲಾಗಿತ್ತು (ಪುಲ್ವಾಮಾ ದಾಳಿಯ ಕಿಂಗ್‌ಪಿನ್ (ರೂವಾರಿ) ಮುದಸಿರ್ ಖಾನ್ ಎಂಬುದು ಬಳಿಕ ಬೆಳಕಿಗೆ ಬಂದಿದೆ).

2019ರ ಜನವರಿ 25: ಮುದಸಿರ್ ಖಾನ್ ಅಡಗುದಾಣದ ಬಗ್ಗೆ ದಪ್ಪ ಅಕ್ಷರದಲ್ಲಿ ಮಾಹಿತಿ ನೀಡಲಾಗಿತ್ತು. ಖಾನ್ ನಾಲ್ವರು ವಿದೇಶಿ ಬಾಡಿಗೆ ಬಂಟರೊಂದಿಗೆ ಮಿದೂರ ಮತ್ತು ಲಾತ್ರಾಲ್ ಗ್ರಾಮದಲ್ಲಿ ಕಾಣಿಸಿಕೊಂಡಿದ್ದಾನೆ. ಮುಂದಿನ ದಿನಗಳಲ್ಲಿ ಭಯೋತ್ಪಾದನೆ ಕೃತ್ಯ ರೂಪಿಸಲು ಈತ ಯೋಜನೆ ರೂಪಿಸಿರುವ ಸಾಧ್ಯತೆಯಿದೆ ಮತ್ತು ಇದಕ್ಕೆ ಆವಂತಿಪೊರ ಅಥವಾ ಪಾಂಪೋರ್ ಪ್ರದೇಶವನ್ನು ಆಯ್ಕೆ ಮಾಡಿ ಕೊಂಡಿರಬಹುದು ಎಂದು ಮಾಹಿತಿಯಲ್ಲಿ ತಿಳಿಸಲಾಗಿತ್ತು.

2019ರ ಫೆಬ್ರವರಿ 9: ಅಪ್ಪಲ್ ಗುರುವನ್ನು ನೇಣಿಗೇರಿಸಿದ್ದಕ್ಕೆ ಪ್ರತೀಕಾರವಾಗಿ ಜೆಇಎಂ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಲಾಗಿತ್ತು ಮತ್ತು ಇದನ್ನು ಜಮ್ಮು ಕಾಶ್ಮೀರದ ಎಡಿಜಿ, ಸಿಆರ್‌ಪಿಎಫ್‌ಗೂ ರವಾನಿಸಲಾಗಿತ್ತು.

2019ರ ಫೆಬ್ರವರಿ 12: ಟ್ವಿಟರ್ ಹ್ಯಾಂಡಲ್ ಕುರಿತಾದ ಈ ಮಾಹಿತಿ ಅತ್ಯಂತ ರಹಸ್ಯ ಮತ್ತು ತುರ್ತು ವಿಷಯವನ್ನೊಳಗೊಂಡಿದೆ ಎಂದು ತಿಳಿಸಲಾಗಿತ್ತು. 'ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಸಂಚರಿಸುವ ಮಾರ್ಗದಲ್ಲಿ ಐಇಡಿ(ಸುಧಾರಿತ ಸ್ಫೋಟಕ ಸಾಧನ) ಸ್ಫೋಟಿಸುವ ಬಗ್ಗೆ ಟ್ವಿಟರ್ ಹ್ಯಾಂಡಲ್‌ನಲ್ಲಿ ವೀಡಿಯೊ ಪ್ರಾತ್ಯಕ್ಷಿಕೆ ಸಹಿತ ವಿವರಿಸಲಾಗಿದೆ' ಎಂದು ಟ್ವಿಟರ್‌ ಹ್ಯಾಂಡಲ್‌ನ ವಿವರ ಸಹಿತ ಮಾಹಿತಿ ನೀಡಲಾಗಿತ್ತು.

2019ರ ಫೆಬ್ರವರಿ 13: ದಾಳಿಯ ಮುಂಚಿನ ದಿನ ಅಂತಿಮ ಎಚ್ಚರಿಕೆ ನೀಡಲಾಗಿತ್ತು. 'ಜಮ್ಮು-ಕಾಶ್ಮೀರದಾದ್ಯಂತ ಭದ್ರತಾ ಪಡೆಗಳು ಸಂಚರಿಸುವ ಮಾರ್ಗದಲ್ಲಿ ಐಇಡಿ ಸ್ಫೋಟದ ಸಾಧ್ಯತೆಯಿದೆ' ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು.

ಮುದಸಿರ್ ಖಾನ್ ಹಾಗೂ ಮತ್ತೊಬ್ಬ ವ್ಯಕ್ತಿ ಬೃಹತ್ ದಾಳಿಗೆ ಯೋಜನೆ ರೂಪಿಸುತ್ತಿದ್ದಾರೆ ಎಂದು ಪುಲ್ವಾಮಾದ ನಮ್ಮ ಸ್ಥಳೀಯ ಮಾಹಿತಿದಾರರು (ಮುದಸಿರ್ ಖಾನ್ ಮತ್ತು ಶಾಹಿದ್ ಬಾಬಗೆ ನಿಕಟವಾಗಿದ್ದವರು) ಜನವರಿ 22ರಂದು ಮಾಹಿತಿ ನೀಡಿದ್ದರು. ಆದರೆ ಗುಪ್ತಚರ ಮಾಹಿತಿಯ ಬಗ್ಗೆ ಸಕಾಲಿಕ ಕ್ರಮ ಕೈಗೊಳ್ಳುವ ಬದಲು, ದಾಳಿಯ ಮುನ್ನಾದಿನ (ಫೆ.13) ಆವಂತಿಪೊರದ ಪೊಲೀಸ್ ಅಧೀಕ್ಷಕ ಮುಹಮ್ಮದ್ ರೌದ್‌ರನ್ನು ವರ್ಗಾಯಿಸಲಾಗಿತ್ತು. ಉಗ್ರರ ಬೆದರಿಕೆ ಹೆಚ್ಚಿದ್ದ ಸಂದರ್ಭ ಪೊಲೀಸ್ ವರ್ಗಾವಣೆ ಮಾಡಿರುವುದು ಸೂಕ್ತ ಕ್ರಮವೇ ಎಂಬ ಸಂದೇಹ ಮೂಡುತ್ತದೆ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿರುವುದಾಗಿ 'ದಿ ಫ್ರಂಟ್‌ಲೈನ್'ನ ವರದಿ ತಿಳಿಸಿದೆ.

Read These Next

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...