ಮಂಡ್ಯ - ಕಕ್ಷಿದಾರರು, ವಕೀಲರು ನ್ಯಾಯಾಲಯದಲ್ಲಿ ಇರುವಂತಹ ರಾಜಿಯಾಗುವಂತ ವ್ಯಾಜ್ಯಗಳನ್ನು ರಾಜಿ ಮಾಡಿಕೊಂಡು ಮುಕ್ತಾಯಗೊಳಿಸಿಕೊಳ್ಳಲು ಮೆಗಾ ಲೋಕ್ ಅದಾಲತ್ ಸಹಾಯಕಾರಿಯಾಗಿದ್ದು ಸಾರ್ವಜನಿಕರು ಸಹಕರಿಸಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ವಸ್ತ್ರಮಠ ಹೇಳಿದರು.
ರಾಜ್ಯಾದ್ಯಂತ ಆಗಸ್ಟ್ 14ರಂದು ಮೆಗಾ ಲೋಕ್ ಅದಾಲತ್ ನಡೆಯಲಿದ್ದು, ಇದರನ್ವಯ ಜಿಲ್ಲೆಯ ಎಲ್ಲಾ ತಾಲೂಕು ನ್ಯಾಯಾಲಯಗಳಲ್ಲಿ ಆಗಸ್ಟ್ 14 ರವರೆಗೆ ನಡೆಯಲಿರುವ ಮೆಗಾ ಲೋಕ್ ಅದಾಲತ್ನ ಜಾಥ ಕಾರ್ಯಕ್ರಮಕ್ಕೆ ಜಿಲ್ಲೆಯ ನ್ಯಾಯಾಂಗಣದ ಪಕ್ಕದಲ್ಲಿರುವ ಎ.ಡಿ.ಆರ್ ಕಟ್ಟಡದ ಮುಂಭಾಗ ಹಸಿರು ನಿಶಾನೆ ತೋರುವ ಮೂಲಕ ವಸ್ತ್ರಮಠರವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಬ್ಯಾಂಕ್ಗಳಲ್ಲಿ ಇತ್ಯರ್ಥವಾಗದೆ ಉಳಿದಿರುವ ವ್ಯಾಜ್ಯಗಳನ್ನು, ಮೋಟರ್ ಆಕ್ಸಿಡೆಂಟ್ ಕೇಸ್ಗಳು, ರಾಜಿಯಾಗುವಂತಹ ಕ್ರಮಿನಲ್ ಕೇಸ್ಗಳನ್ನು ಕೂಡ ರಾಜಿಸಂಧಾನಕ್ಕೆ ತೆಗೆದುಕೊಂಡಿದ್ದೇವೆ ಎಂದರು.
ಜಿಲ್ಲೆಯಲ್ಲಿ ಪಾವತಿ ಮಾಡದೇ ಇರುವ ನೀರಿನ ಶುಲ್ಕ, ಮನೆಕಂದಾಯಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನೂ ಇಲ್ಲಿ ಇತ್ಯರ್ಥಪಡಿಸಲಾಗುವುದು ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಎ.ಎಂ ನಳಿನಿಕುಮಾರಿ, ವಕೀಲರ ಸಂಘದ ಅಧ್ಯಕ್ಷರಾದ ಸಿ.ಎಲ್.ಶಿವಕುಮಾರ್ ಹಾಗೂ ನ್ಯಾಯಾಧೀಶರುಗಳು ಮತ್ತಿತರರು ಉಪಸ್ಥಿತರಿದ್ದರು.