ಹಿಂಸೆಯನ್ನು ನಿರಾಕರಿಸುವ ರಾಜಕೀಯ

Source: sonews | By Staff Correspondent | Published on 8th January 2020, 10:18 PM | National News | Special Report | Don't Miss |

ಗೋಪಾಲ್ ಗುರು

ಪೌರತ್ವ ತಿದ್ದುಅಪಡಿ ಕಾಯಿದೆಯ ವಿರುದ್ಧ ನಡೆದ ಹೋರಾಟದ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಚಾರಗಳ ನಂತರ ಕೇಂದ್ರ ಹಾಗೂ ಉತ್ತರ ಪ್ರದೇಶ ರಾಜ್ಯಗಳ ಆಳುವ ಪಕ್ಷದ ವಕ್ತಾರರು ಹಿಂಸಾಚಾರವನ್ನು ಖಂಡಿಸುವುದರಲ್ಲಿ ಮುಂಚೂಣಿಯಲ್ಲಿರುವುದು ಕುತೂಹಲಕಾರಿಯಾಗಿದೆ. ಹಿಂಸಾಚಾರವನ್ನು ಖಂಡಿಸುವುದು ತನ್ನಿಂದ ತಾನೇ ಸಮಸ್ಯಾತ್ಮಕವೇನೂ ಅಲ್ಲ. ಏಕೆಂದರೆ ಅದರ ಉದ್ದೇಶ ಶಾಂತಿಯನ್ನು ಸ್ಥಾಪಿಸುವುದು ಅಥವಾ ಅಹಿಂಸೆಯ ಸಾಧ್ಯತೆಗಳನ್ನು ತಡೆಗಟ್ಟುವ ಶಕ್ತಿಗಳನ್ನು ನಿರ್ಬಂಧಿಸುವಂತಹ ಸರ್ವರ ಒಳಿತಿನ ಉದ್ದೇಶವನ್ನು ಹೊಂದಿರುವ ಸಾಧ್ಯತೆಯೂ ಇರುತ್ತದೆ. ಉದಾಹರಣೆಗೆ ಮಹಿಳೆಯರು ಮತ್ತು ದಲಿತರ ಮೇಲಿನ ಹಿಂಸಾಚಾರಗಳನ್ನು ಖಂಡಿಸುವುದು ಮಾನವ ಜೀವಗಳಿಗೆ ಹಾಗೂ ಭೌತಿಕ ಆಸ್ತಿಗಳಿಗೆ ಹಾನಿಕಾರಕ ಪರಿಣಾಮಗಳನ್ನುಂಟು ಮಾಡಬಲ್ಲ ಸಂಭಾವ್ಯತೆಗಳ ಬಗ್ಗೆ ಜನರಲ್ಲಿ ಸಾಮಾಜಿಕ ಎಚ್ಚರವನ್ನು ಮೂಡಿಸುವ ಸಾಧನವಾಗಬಹುದು. ಹೀಗಾಗಿ ಹಿಂಸಾಚಾರಗಳ ಖಂಡನೆಯಂತಹ ಅಭ್ಯಾಸವು ಹಿಂಸೆಯ ಬಗ್ಗೆ ಒಂದು ನಿರಂತರವಾದ ವಿಮರ್ಶೆಯನ್ನು ಹುಟ್ಟುಹಾಕಬಹುದಾದ ಸಾಮಾಜಿಕ ಸಂದರ್ಭವನ್ನು ಸೃಷ್ಟಿಸಬಲ್ಲ ನೈತಿಕ ಶಕ್ತಿಯನ್ನು ಒಳಗೊಂಡಿರುತ್ತದೆ. ಹೀಗಾಗಿ ಎಲ್ಲಾ ಬಗೆಯ ಹಿಂಸೆಗಳನ್ನು ನಿರಂತರವಾಗಿ ಖಂಡಿಸುವುದು ಹಿಂಸೆಯ ಮೇಲಿನ ವಿಮರ್ಶೆಯನ್ನು ಪರಿಣಾಮಕಾರಿಯಾಗಿಸುತ್ತದೆ.

ಆದರೆ ಸಾರ್ವಜನಿಕ ಒಳಿತಿನ ಹೆಸರಿನಲ್ಲಿ ಮಾಡುವ ಹಿಂಸೆಯ ಖಂಡನೆಗಳು ಸಮಸ್ಯೆಗಳಿಂದ ಹೊರತಾಗೇನೂ ಇರುವುದಿಲ್ಲ. ಉದಾಹರಣೆಗೆ ದಲಿತರ ಮತ್ತು ಮಹಿಳೆಯರ ಮೇಲಿನ ಹಿಂಸಾಚರಗಳ ಹಾಗೂ ಲಿಂಚಿಂಗ್ ಹಿಂಸಾಚರಗಳ ಖಂಡನೆಯು ಪ್ರಮಾಣ ಮತ್ತು ತೀವ್ರತೆಗಳಲ್ಲಿ ಬೇರೆಬೇರೆ ಅಭಿವ್ಯಕ್ತಿಯನ್ನು ಪಡೆದುಕೊಳ್ಳುತ್ತದೆ. ಉದಾಹರಣೆಗೆ ಭಾರತೀಯ ಸಮಾಜದ ಸಂವೇದನಾಶೀಲರಾದ ಮತ್ತು ನೈತಿಕವಾಗಿ ಪ್ರೇರಿತರಾದ ಸಾರ್ವಜನಿಕರು ಮಹಿಳೆಯರು ಮತ್ತು ದಲಿತರ ಮೇಲಿನ ದೌರ್ಜನ್ಯಗಳನ್ನು  ತೀವ್ರವಾಗಿ ಖಂಡಿಸುತ್ತಾರೆ. ಆದರೆ ಲಿಂಚಿಂಗ್ ಹಿಂಸಾಚಾರಗಳ ಖಂಡನೆಯು ನೈತಿಕ ಸಮುದಾಯದ ಕೆಲವೇ ಸದಸ್ಯರಿಂದ ಮಾತ್ರ ಅಭಿವ್ಯಕ್ತವಾಗುತ್ತದೆ. ಭಾರತದಲ್ಲಿ ಹಿಂಸಾಚಾರಗಳ ಖಂಡನೆಯ ಪ್ರಮಾಣವು ಮಹಿಳೆಯರ ವಿಷಯದಲ್ಲಿ ಅತಿ ಹೆಚ್ಚು ವ್ಯಕ್ತವಾದರೆ , ಜಾತಿ ದೌರ್ಜನ್ಯಗಳು ಮತ್ತು ಲಿಂಚಿಂಗ್ ದೌರ್ಜನ್ಯಗಳ ವಿಷಯಕ್ಕೆ ಬಂದಂತೆ ಕಡಿಮೆಯಾಗುತ್ತಾ ಹೋಗುತ್ತದೆ.

ಉತ್ತರ ಪ್ರದೇಶ ಹಾಗೂ ಕೇಂದ್ರದ ಆಳುವ ಪಕ್ಷದ ಬೆಂಬಲಿಗರು ಮಾಡುತ್ತಿರುವ ಹಿಂಸಾಚಾರದ ಖಂಡನೆಗಳಲ್ಲಿ ಒಂದು ಸಾರ್ವಜನಿಕ ಒಳಿತಿದೆಯೆಂದುಕೊಳ್ಳಬಹುದಾದರೂ ಅದಕ್ಕೆ ಬೇರೆಯದೇ ಆದ ಮತ್ತೊಂದು ಅರ್ಥವೂ ಇರಬಹುದು. ಈ ನಿರ್ದಿಷ್ಟ ಸಂದರ್ಭದಲ್ಲಿ ಹಿಂಸಾಚಾರಗಳ ಖಂಡನೆಯ ಹಿಂದೆ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದವರ ಮೇಲೆ ಆಕ್ರಮಕವಾಗಿ ಮುಗಿಬಿದ್ದು ಪ್ರತೀಕಾರ ತೆಗೆದುಕೊಳ್ಳಬೇಕೆಂಬ ಮನೋಭಾವವೂ ಇದ್ದಿರಬಹುದು; ಶಾಂತಿ ಭಂಗ ಮಾಡಿದವರು ಯಾರು ಎಂದು ಪತ್ತೆ ಹಚ್ಚಲುಬೇಕಾದ ತಂತ್ರಜ್ನಾನಗಳು ಲಭ್ಯವಿದ್ದರೂ ಈ ಸನ್ನಿವೇಶದಲ್ಲಿ ಮಾತ್ರ ಅದು ಪತ್ತೆ ಆಗುವುದಿಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಸಾರ್ವಜನಿಕ ಆಸ್ತಿಪಾಗೆ ಆಗಿರುವ ನಷ್ಟವನ್ನು ದಂಗೆಕೋರರಿಂದಲೇ ವಸೂಲಿ ಮಾಡುವ ಯೋಚನೆಯಲ್ಲಿದ್ದಾರೆ. ಈ ಯೋಚನೆಯೇ ಅಸ್ವಾಭಾವಿಕವಾದರೂ, ವಾದದ ಮಟ್ಟಿಗೆ ಅದನ್ನು ಒಪ್ಪಿಕೊಳ್ಳೋಣ. ಈ ಪ್ರಸ್ತಾಪವು ಒಂದು ಮುಖ್ಯವಾದ ಕಾರಣಕ್ಕಾಗಿ ಅತ್ಯಂತ ಸಮಸ್ಯಾತ್ಮಕವಾಗಿದೆ. ಅದು ಆಕ್ರಮಣಕಾರನ ಚರ್ಯೆಯನ್ನು ಐತಿಹಾಸಿಕವಾಗಿ ಅರ್ಥೈಸುವ ನೈತಿಕತೆಯನ್ನು ಹಿಂಸಾಚಾರವನ್ನು ಖಂಡಿಸುವ ಈ ನೈತಿಕ ಕ್ರಿಯೆ ಕಳೆದುಕೊಂಡಿದೆ. ಅಂದರೆ ಪ್ರಭುತ್ವವು ಒಂದು ಬಗೆಯ ಹಿಂಸಾಚಾರದ ಕಾರಣಕರ್ತರನ್ನು ಶಿಕ್ಷಿಸಲು ತೋರುವ ಅತ್ಯುತ್ಸಾಹವನ್ನು ದಲಿತರ ಮೇಲೆ ಸಾಮಾಜಿಕ ಬಹಿಷ್ಕಾರ ಘೋಷಿಸುವ ಅಥವಾ ಲಿಂಚಿಂಗ್ ಕೋರರ ಬಗ್ಗೆ ತೋರುವುದಿಲ್ಲ. ಹೀಗಾಗಿ ಪ್ರಭುತ್ವದ ಅಧಿಕಾರಿಗಳ ಬಳಿ ಇರುವ ಕಾನೂನು ಮುರಿಯುವವರು ಯಾರು ಎಂಬ ವ್ಯಾಖ್ಯಾನ ತುಂಬಾ ಸಂಕುಚಿತವಾಗಿದೆ. ಉದಾಹರಣೆಗೆ ಹರ್ಯಾಣ ರಾಜ್ಯದ ಒಂದು ಹಳ್ಳಿಯಲ್ಲಿ ೫೦೦ ದಲಿತ ಕುಟುಂಬಗಳ ಮೇಲೆ ಸಾಮಾಜಿಕ ಬಹಿಷ್ಕಾರ ಹೇರಿರುವವರ ಮೇಲೆ ಕ್ರಮತೆಗೆದುಕೊಳ್ಳುವಲ್ಲೂ ಆ ಸರ್ಕಾರವು ಇದೇ ರೀತಿಯ ತುರ್ತನ್ನು ತೋರಿಸಬೇಕೆಂದು ನಿರೀಕ್ಷಿಸಲಾಗುತ್ತದೆ.

ದಂಗೆಕೋರರಿಂದಲೇ ಆದ ನಷ್ಟಗಳನ್ನು ವಸೂಲಿ ಮಾಡಬೇಕು ಎಂಬ ವಿಶಿಷ್ಟ ತರ್ಕವನ್ನು ಮುಂದುವರೆಸಿ ದಲಿತರ ಮೇಲೆ ದೌರ್ಜನ್ಯಗಳನ್ನು ಎಸಗುವವರ ಮೇಲೆಯೂ ದೌರ್ಜನ್ಯ ತೆರಿಗೆಯನ್ನು ವಸೂಲಿಮಾಡಬೇಕಲ್ಲವೇ? ಉತ್ತರ ಪ್ರದೇಶ, ಹರ್ಯಾಣ ಅಥವಾ ಇನ್ಯಾವುದೇ ರಾಜ್ಯಗಳು ಇಂತಹ ಸಾಮಾಜಿಕ ಹಿಂಸಾಚಾರಗಳು ನಡೆಯುವಾಗ ಮೂಕ ಪ್ರೇಕ್ಷರಾಗಿ  ಕುಮ್ಮಕ್ಕು ಕೊಡುವವರ ಮೇಲೆ ದೌರ್ಜನ್ಯ ತೆರಿಗೆಯನ್ನು ಹಾಕುವುದರ ಬಗ್ಗೆ ಯೋಚಿಸಲಾದರೂ ಸಿದ್ಧವಿದ್ದಾರೆಯೇ? ಈ ರಾಜ್ಯಗಳು ಅಲ್ಪಸಂಖ್ಯಾತ ಸಮುದಾಯದ ಮೇಲೆ ಲಿಂಚಿಂಗ್ ನಡೆಯುವುದನ್ನು ನೋಡುತ್ತಾ ಸಮರ್ಥಿಸುವ ಅಥವಾ ದಲಿತರ ಮೇಲೆ ದೌರ್ಜನ್ಯ ನಡೆಸುವವರ ಮೇಲೆ ದೌರ್ಜನ್ಯ ತೆರಿಗೆ ಹಾಕಬಹುದೇ? ಸಾಮಾಜಿಕ ಬಹಿಷ್ಕಾರದಂತಹ ಕ್ರಮಗಳಲ್ಲಿ ಅಂತರ್ಗತವಾಗಿರುವ ನಾಗರಿಕತಾ ಹಿಂಸೆಯನ್ನು ಗುರುತಿಸಿ, ಅದರಿಂದ ಪರಿಹಾರ ಪಡೆಯಲು ಕಳೆದೆರಡು ವರ್ಷಗಳಿಂದ ಹೋರಾಟ ಮಾಡುತ್ತಿರುವ ಆ ಕುಟುಂಬಗಳಿಗೆ ಹರ್ಯಾಣ ಸರ್ಕಾರ ಪರಿಹಾರ ಒದಗಿಸಬಹುದೇ? ಆ ಸಾಮಾಜಿಕ ಬಹಿಷ್ಕಾರಕ್ಕೆ ತುತ್ತಾದ ಕುಟುಂಬಗಳು ಮುಂದಿಡುತ್ತಿರುವ ನೋವಿನ ಕಥನಗಳ ಪ್ರಕಾರ ಅವರಿಗೆ ಅವರ ದೈನಂದಿನ ಅಗತ್ಯಗಳನ್ನು ಪಡೆದುಕೊಳ್ಳುವುದನ್ನೂ ನಿರಾಕರಿಸಲಾಗಿದೆಯಲ್ಲದೆ ಸಹಜ ಮತ್ತು ಸ್ವಾಭಾವಿಕವಾದ ಮಾನವೀಯ ಹಾಗೂ ಸಾಂಸ್ಕೃತಿಕ ಸಂವಹನದ ಹಕ್ಕುಗಳನ್ನೂ ನಿರಾಕರಿಸಲಾಗಿದೆ. ದಲಿತರ ಬಳಿ ಇರುವ ಕಸಿಯಲಾಗದ ಏಕೈಕ ಅಮೂಲ್ಯವಾದ ಆಸ್ತಿಯೆಂದರೆ ಆವರ ಸ್ವಾಭಿಮಾನ-ಘನತೆ. ಈಗ ಅದನ್ನೂ ಕಸಿಯಲಾಗಿದೆ.ಹೀಗಾಗಿ ಅಹಿಂಸೆಯ ಮೇಲೆ ದಾಳಿ ಮಾಡುವವರ ಬಗ್ಗೆ Sಂಡನೆಗಳನ್ನು ಮಾಡುವಾಗ ಸಾರ್ವತ್ರಿಕವಲ್ಲದ ವ್ಯಕ್ತಿನಿಷ್ಟ ಆಯ್ಕೆಯನ್ನು ಪ್ರದರ್ಶಿಸುವುದು ಅಹಿಂಸೆಯ ಬಗೆಗಿನ ಬದ್ಧತೆಯನ್ನೇ ಪ್ರಶ್ನಿಸುತ್ತದೆ. ಬುದ್ಧನ ತತ್ವವಾದ ಸಮ್ಯಕ್ ದೃಷ್ಟಿ ಅರ್ಥಾತ್ ಸಮಾನ ದೃಷ್ಟಿಯಿಂದ ಹಿಂಸೆಯ ಸಮಸ್ಯೆಯ ಬಗ್ಗೆ ಒಳಒಡಕಿಲ್ಲದ ದೃಷ್ಟಿಯಿಂದ ನೋಡಿದಲ್ಲಿ, ಆಳುವ ಪಕ್ಷದ ಅಹಿಂಸೆಯ ಬಗೆಗಿನ ಮಾತುಗಳನ್ನು ಮೇಲ್ನೋಟಕ್ಕೆ ಒಪ್ಪಿಕೊಳ್ಳಲಾಗದು. ಬದಲಿಗೆ ಅದು  ಗಂಭೀರವಾದ ಪರಿಶೀಲನೆಯನ್ನು ಕೇಳುತ್ತದೆ. ಅಂತ ತತ್ವವು ಆದರ ಆಚರಣೆಗೆ ಹೊಸಬರಾಗಿರುವವರು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಪರಿಸ್ಥಿತಿಯನ್ನು ನಿರ್ಮಿಸಲು ಬೇಕಾದ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳುವುದನ್ನು ನಿರೀಕ್ಷಿಸುತ್ತದೆ.

ಕೃಪೆ: Economic and Political Weekly ಅನು: ಶಿವಸುಂದರ್ 

 

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...