ಧಾರವಾಡ: ಮಕ್ಕಳಲ್ಲಿ ವೈಜ್ಞಾನಿಕ ಹಾಗೂ ಸಮಾನತೆಯ ಮನೋಭಾವ ಬೆಳಸಬೇಕು, ವಿಜ್ಞಾನ ನಾಲ್ಕು ಗೋಡೆಗಳ ಮಧ್ಯೆ ನಡೆಯುವುದೂ ಅಲ್ಲ. ಅದು ನಿರ್ಭೀತಿ ಮತ್ತು ಸ್ವಾತಂತ್ರದ ವಾತಾವರಣದಲ್ಲಿ ನಡೆಯುವಂತಹ ಪ್ರಕ್ರಿಯೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಆಯುಕ್ತರ ಕಾರ್ಯಾಲಯದ ನಿರ್ದೇಶಕರು ಡಾ. ಬಿ.ಕೆ.ಎಸ್. ವರ್ಧನ ಹೇಳಿದರು.
ಅವರು ಇಂದು, ಸಪ್ತಾಪೂರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 12ರಲ್ಲಿ ಜರುಗಿದ ಸಪ್ತಾಪೂರ ಕ್ಲಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಮಕ್ಕಳ ವಿಜ್ಞಾನ ಹಬ್ಬವು ಉತ್ತಮ ವಾತಾವರಣವನ್ನು ಸೃಷ್ಟಿಸಿ ಮಕ್ಕಳು ಸಂತೋಷದಿಂದ, ಆನಂದದಿಂದ ಕಲಿಯುವಂತೆ ಪ್ರೇರೇಪಿಸುತ್ತದೆ ಎಂದು ಹೇಳಿದರು.
ವಿಜ್ಞಾನವಿಲ್ಲದೇ ಜಗತ್ತಿಲ್ಲ ಎಂಬುದನ್ನು ಅರಿಯಬೇಕು ಅದರಲ್ಲೂ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಸಹಜ ಕುತೂಹಲ ಇರುತ್ತದೆ. ಹಲವು ಪ್ರಶ್ನೆಗಳಿರುತ್ತವೆ. ಈ ಹಬ್ಬದ ಚಟುವಟಿಕೆಗಳು ಆ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ಸಹಕಾರಿಯಾಗಲಿವೆ. ವಿಜ್ಞಾನ ಹಬ್ಬವು ವಿಜ್ಞಾನದ ಹಲವು ಕುತೂಹಲಕಾರಿ ಅಂಶಗಳನ್ನು ಪ್ರಯೋಗ, ಚಟುವಟಿಕೆ, ಆಟ, ಹಾಡಿನ ಮೂಲಕ ತಿಳಿದುಕೊಳ್ಳುವ ಹಬ್ಬವಾಗಿದ್ದು ಇದನ್ನು ಸಂತಸ ಸಂಭ್ರಮದಿಂದ ಆಚರಿಸುವಂತಾಗಬೇಕು ಎಂದು ಅವರು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಂ ವಿ ಅಡಿವೇರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಾಲಿಕೆ ಮಾಜಿ ಸದಸ್ಯ ವಿಜಯಾನಂದ ಶೆಟ್ಟಿ ಉಪಸ್ಥತರಿದ್ದರು. ಡಯಟ್ ಪ್ರಾಚಾರ್ಯ ಹಾಗೂ ಉಪನಿರ್ದೇಶಕ ಅಬ್ದುಲವಾಜೀದ ಖಾಜಿ, ಪ್ರಕಾಶ ಭೂತಾಳಿ, ಶಿವಲೀಲಾ ಕಳಸಣ್ಣವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಧಾರವಾಡ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ ಸ್ವಾಗತಿಸಿ, ಸಿಆರ್ಪಿ ಎಸ್.ಎನ್.ಇದಿಯಮ್ಮನವರ ವಂದಿಸಿದರು.